ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ; ಜಾತ್ಯತೀತ ಪಕ್ಷಗಳ ಸಂಸದರಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆಗ್ರಹ

ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಲಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ ಐ ಎಂ ಪಿ ಎಲ್ ಬಿ ) ಬಿಜೆಪಿಯ ಮಿತ್ರಪಕ್ಷಗಳು ಸೇರಿದಂತೆ ಎಲ್ಲಾ ಜಾತ್ಯತೀತ ರಾಜಕೀಯ ಪಕ್ಷಗಳ ಸಂಸದರಿಗೆ ಮನವಿ ಮಾಡಿದೆ.
ಲೋಕಸಭೆಯಲ್ಲಿ ವಕ್ಫ್ತಿದ್ದುಪಡಿ ಮಸೂದೆ ಮಂಡನೆಯಾದಾಗ ಅದರ ವಿರುದ್ಧ ಮತಚಲಾಯಿಸಬೇಕೆಂದು ಎ ಐ ಎಂ ಪಿ ಎಲ್ ಬಿ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿ ಅವರು ಎಲ್ಲಾ ಜಾತ್ಯತೀತ ಪಕ್ಷಗಳ ಸಂಸದರಿಗೆ ಮನವಿ ಮಾಡಿದ್ದಾರೆ. ಆ ಮೂಲಕ ಬಿಜೆಪಿಯ ಕೋಮುವಾದಿ ಕಾರ್ಯಸೂಚಿಯನ್ನು ತಡೆಗಟ್ಟಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಮಸೂದೆಯು ತಾರತಮ್ಯ ಹಾಗೂ ಅನ್ಯಾಯವನ್ನು ಆಧರಿಸಿದೆ ಮಾತ್ರವಲ್ಲದೆ ಸಂವಿಧಾನದ 14,25 ಹಾಗೂ 26ನೇ ವಿಧಿಯಡಿ ಮೂಲಭೂತ ಹಕ್ಕುಗಳ ಕಾನೂನುಗಳಿಗೆ ವ್ಯತಿರಿಕ್ತವಾಗಿದೆಯೆಂದು ಸೈಫುಲ್ಲಾ ರಹ್ಮಾನಿ ಪತ್ರಿಕಾ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.
ಈ ಮಸೂದೆಯ ಮೂಲಕ ಬಿಜೆಪಿಯು ವಕ್ಫ್ ಕಾನೂನುಗಳನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಹಾಗೂ ವಕ್ಫ್ ಆಸ್ತಿಗಳ ವಶ ಹಾಗೂ ನಾಶಕ್ಕೆಎಡೆಮಾಡಿಕೊಡುತ್ತದೆ. ಆರಾಧನಾಲಯಗಳ ಕಾಯ್ದೆ ಅಸ್ತಿತ್ವದಲ್ಲಿದ್ದ ಹೊರತಾಗಿಯೂ ಪ್ರತಿಯೊಂದು ಮಸೀದಿಯಲ್ಲಿಯೂ ‘ದೇವಾಲಯಕ್ಕಾಗಿ ಹುಡುಕಾಟ’ವು ನಿರಂತರವಾಗಿ ಮುಂದುವರಿದಿದೆ. ಒಂದು ವೇಳೆ ಈ ತಿದ್ದುಪಡಿ ಅಂಗೀಕಾರಗೊಂಡಲ್ಲಿ ವಕ್ಫ್ ಆಸ್ತಿಗಳ ಮೇಲೆ ಸರಕಾರ ಹಾಗೂ ಸರಕಾರೇತರರ ಅಕ್ರಮವಾಗಿ ಹಕ್ಕೊತ್ತಾಯದಲ್ಲಿ ಭಾರೀ ಹೆಚ್ಚಳವಾಗಲಿದೆ. ಅವುಗಳನ್ನು ಮುಟ್ಟುಗೋಲು ಹಾಕಲು ಜಿಲ್ಲಾಧಿಕಾರಿಗಳಿಗೆ ಸುಲಭವಾಗಲಿದೆ ಎಂದು ಅವರು ಹೇಳಿದ್ದಾರೆ.
ವಕ್ಫ್ ಮಸೂದೆಗೆ ತಿದ್ದುಪಡಿ ಮೂಲಕ ಮುಸ್ಲಿಮೇತರ ಸದಸ್ಯರನ್ನು ವಕ್ಫ್ ಬೋರ್ಡ್ ಹಾಗೂ ಕೇಂದ್ರೀಯ ವಕ್ಫ್ ಮಂಡಳಿಗೆ ಸೇರ್ಪಡೆಗೊಳಿಸಲಾಗುತ್ತದೆ ಹಾಗೂ ವಕ್ಫ್ ನ್ಯಾಯಾಧೀಕರಣದ ಅಧಿಕಾರಗಳನ್ನು ಕಡಿತಗೊಳಿಸಲಾಗುತ್ತದೆ. ಇವೆಲ್ಲಾ ಕ್ರಮಗಳು ವಕ್ಫ್ ಆಸ್ತಿಗಳಿಗೆ ಇದ್ದ ಕಾನೂನಾತ್ಮಕ ರಕ್ಷಣೆಯನ್ನು ಕಳಚಿಬಿಡುತ್ತವೆ ಎಂದು ಅವರು ಆರೋಪಿಸಿದ್ದಾರೆ.
ಈ ತಿದ್ದುಪಡಿಯು ವಕ್ಫ್ ಸೊತ್ತುಗಳ ಸರಕಾರಿ ಅತಿಕ್ರಮಣವನ್ನು ಕಾನೂನುಬದ್ಧಗೊಳಿಸುತ್ತದೆ. ಇತರ ಸಮುದಾಯಗಳ ಧಾರ್ಮಿಕ ದತ್ತಿಗಳಿಗೆ ಕಾನೂನಾತ್ಮಕ ರಕ್ಷಣೆಯನ್ನು ನೀಡಲಾಗುತ್ತಿದ್ದು, ಕೇವಲ ಮುಸ್ಲಿಂ ವಕ್ಫ್ ಸೊತ್ತುಗಳನ್ನು ಗುರಿಯಿರಿಸಿರುವುದು ತಾರತಮ್ಯ ಹಾಗೂ ಆನ್ಯಾಯದ ಕೃತ್ಯವೆಂದು ಸೈಫುಲ್ಲಾ ರಹ್ಮಾನಿ ಹೇಳಿದ್ದಾರೆ.
ಹಿಂದೂ ಮುಸ್ಲಿಂ ಭ್ರಾತೃತ್ವ ಹಾಗೂ ಪರಸ್ಪರರ ಧರ್ಮ,ಸಂಸ್ಕೃತಿ ಹಾಗೂ ಉತ್ಸವಗಳನ್ನು ಗೌರವಿಸುವುದಕ್ಕಾಗಿ ಭಾರತವು ಜಾಗತಿಕವಾಗಿ ಗೌರವಿಸಲ್ಪಟ್ಟಿದೆ. ಆದರೆ ದುರದೃಷ್ಟವಶಾತ್ ದೇಶದ ಅಧಿಕಾರವು ಪ್ರಸಕ್ತ ಕೋಮುಸೌಹಾರ್ದದ ವಾತಾವರಣವನ್ನು ನಾಶಪಡಿಸುವ, ಅರಾಜಕತೆ ಹಾಗೂ ಕ್ಷೋಭೆಯನ್ನು ಸೃಷ್ಟಿಸುವವರಲು ಬಯಸುತ್ತಿರುವವರ ಕೈಗಳಲ್ಲಿದೆ. ಆದುದರಿಂದ ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಲಿರುವ ವಕ್ಫ್ ತಿದ್ದುಪಡಿ ವಿಧೇಯಕ 2024 ಅನ್ನು ಬಲವಾಗಿ ವಿರೋಧಿಸಬೇಕೆಂದು ನಿರೀಕ್ಷಿಸುತ್ತೇನೆ. ದೇಶಾದ್ಯಂತದ ಕೋಟ್ಯಂತರ ಮುಸ್ಲಿಂ ಪೌರರ ನಂಬಿಕೆಯನ್ನು ಹುಸಿಗೊಳಿಸಬಾರದು ಎಂದು ಅವರು ಎಲ್ಲಾ ಜಾತ್ಯತೀತ ಪಕ್ಷಗಳ ಸಂಸದರಿಗೆ ಮನವಿ ಮಾಡಿದ್ದಾರೆಂದು ಎ ಐ ಎಂ ಪಿ ಎಲ್ ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.