ಮೋದಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ನರೇಂದ್ರ ಮೋದಿ | PC ; X@Narendramodi
ಹೊಸದಿಲ್ಲಿ: ಭಾರತ ಮತ್ತು ಶ್ರೀಲಂಕಾಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಹಾಗೂ ಸಾಮಾನ್ಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉತ್ತೇಜಿಸಲು ಮಾಡಿರುವ ಗಣನೀಯ ಪ್ರಯತ್ನಗಳನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಮಿತ್ರ ವಿಭೂಷಣ’ ಪದಕವನ್ನು ಶನಿವಾರ ಪ್ರದಾನ ಮಾಡಲಾಗಿದೆ.
ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ನೀಡಿರುವ ಭೇಟಿಯ ವೇಳೆ ಆ ದೇಶದ ಸರಕಾರವು ಈ ಪ್ರಶಸ್ತಿಯನ್ನು ನೀಡಿದೆ.
‘‘ಇದು ನನ್ನ ಹೆಮ್ಮೆಯ ಕ್ಷಣವಾಗಿದೆ. ಇದು ನನಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೆ ಸಿಕ್ಕ ಗೌರವವಾಗಿದೆ. ಇದು ಭಾರತ ಮತ್ತು ಶ್ರೀಲಂಕಾ ಜನರ ನಡುವಿನ ಐತಿಹಾಸಿಕ ಬಾಂಧವ್ಯ ಮತ್ತು ಗಾಢ ಸ್ನೇಹವನ್ನು ತೋರಿಸುತ್ತದೆ. ಇದಕ್ಕಾಗಿ ನಾನು ಶ್ರೀಲಂಕಾ ಅಧ್ಯಕ್ಷರು, ಶ್ರೀಲಂಕಾ ಸರಕಾರ ಮತ್ತು ಈ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ’’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮೋದಿ ಹೇಳಿದರು.