ತನಗೆ ಬೈದಿದ್ದಕ್ಕೆ ಶಿಕ್ಷಕಿಯನ್ನೇ ಇರಿದು ಕೊಂದ ವಿದ್ಯಾರ್ಥಿ!

Update: 2024-07-07 11:17 GMT

ಸಾಂದರ್ಭಿಕ ಚಿತ್ರ (PTI)

ಶಿವಸಾಗರ್ (ಅಸ್ಸಾಂ): ತನ್ನನ್ನು ಬೈದರೆಂದು 11 ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಶನಿವಾರ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಈ ಘಟನೆಯು ತರಬೇತಿ ಕೇಂದ್ರದ ತರಗತಿ ಕೊಠಡಿಯಲ್ಲಿ ನಡೆದಿದ್ದು, ಶಿಕ್ಷಕಿಯು ವಿದ್ಯಾರ್ಥಿಯನ್ನು ಆತನ ಕಳಪೆ ಶೈಕ್ಷಣಿಕ ಸಾಧನೆಗಾಗಿ ಬೈದಿದ್ದರು ಎನ್ನಲಾಗಿದೆ. ಉಳಿದ ಪ್ರಾಧ್ಯಾಪಕರೆಲ್ಲ ತರಗತಿಯನ್ನು ತೊರೆದ ನಂತರ, ಆತ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಚಾಕುವಿನ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಆರೋಪಿ ವಿದ್ಯಾರ್ಥಿಯ ಸಹಪಾಠಿಗಳ ಪ್ರಕಾರ, ಶನಿವಾರ ಬೆಳಗ್ಗೆ ಕೆಲ ವಿಚಾರಗಳ ಕುರಿತು ಶಿಕ್ಷಕಿಯು ಆತನನ್ನು ಬೈದಿದ್ದರು. ಇದರ ಬೆನ್ನಿಗೇ ಆತ ತರಬೇತಿ ಕೇಂದ್ರವನ್ನು ತೊರೆದಿದ್ದ. ಕೆಲ ಸಮಯದ ನಂತರ ಮರಳಿ ಬಂದ ಆತನನ್ನು ಶಿಕ್ಷಕಿಯು ಮತ್ತೆ ಬೈದರು. ಆಗ ಆತ ಚಾಕುವಿನಿಂದ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ ಎಂದು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಪ್ರಾಪ್ತನಾಗಿರುವ ವಿದ್ಯಾರ್ಥಿಯನ್ನು ಶಿವಸಾಗರ್ ನಲ್ಲಿನ ಸ್ಥಳೀಯ ಪೊಲೀಸ್ ಠಾಣೆಯೊಂದಕ್ಕೆ ಕರೆದೊಯ್ಯಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, “ವಿದ್ಯಾರ್ಥಿಯನ್ನು ನಾವು ವಶಕ್ಕೆ ಪಡೆದಿದ್ದೇವೆ. ಘಟನೆಗೆ ಕಾರಣವೇನೆಂದು ನಮಗಿನ್ನೂ ತಿಳಿದು ಬಂದಿಲ್ಲ. ನಾವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕಲೆ ಹಾಕುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.

ಮುಂದಿನ ತನಿಖೆ ಪ್ರಗತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News