ರತನ್ ಟಾಟಾರ ಪರಂಪರೆಯನ್ನು ಮುಂದಕ್ಕೊಯ್ಯಲು ನಮ್ಮನ್ನು ಪುನರ್ಸಮರ್ಪಿಸಿಕೊಳ್ಳುತ್ತೇವೆ : ಟಾಟಾ ಟ್ರಸ್ಟ್
ಮುಂಬೈ : ರತನ್ ಟಾಟಾ ಅವರ ಪರಂಪರೆಯನ್ನು ಮುಂದಕ್ಕೊಯ್ಯಲು ಟಾಟಾ ಟ್ರಸ್ಟ್ಸ್ ತನ್ನನ್ನು ಪುನರ್ಸಮರ್ಪಿಸಿಕೊಳ್ಳುತ್ತದೆ ಎಂದು ಲಾಭೋದ್ದೇಶವಿಲ್ಲದ ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ ಶರ್ಮಾ ಅವರು ಹೇಳಿದ್ದಾರೆ.
ರತನ್ ಟಾಟಾ(86) ಅನಾರೋಗ್ಯದಿಂದಾಗಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.
‘ಭಾರತೀಯ ನಾಗರಿಕತೆಯ ಮೌಲ್ಯಗಳಲ್ಲಿ ಬೇರೂರಿರುವ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸುವ ರತನ್ ಟಾಟಾ ಮತ್ತು ಟ್ರಸ್ಟ್ಸ್ನ ಸ್ಥಾಪಕರ ಪರಂಪರೆಯನ್ನು ಮುಂದಕ್ಕೊಯ್ಯಲು ನಾವು ನಮ್ಮನ್ನು ಪುನರ್ಸಮರ್ಪಿಸಿಕೊಳ್ಳುತ್ತೇವೆ ’ ಎಂದು ಶರ್ಮಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಟಾಟಾ ಟ್ರಸ್ಟ್ಸ್ ಲಾಭೋದ್ದೇಶವಿಲ್ಲದ ಸಂಸ್ಥೆಗಳ ಸಮೂಹವಾಗಿದ್ದು, ಉಪ್ಪಿನಿಂದ ಸಾಫ್ಟ್ವೇರ್ವರೆಗೆ ಚಾಚಿಕೊಂಡಿರುವ ಟಾಟಾ ಗ್ರೂಪ್ನ ಮೂರನೇ ಎರಡರಷ್ಟು ಒಡೆತನವನ್ನು ಹೊಂದಿದೆ.
ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ಭಾಜನರಾಗಿದ್ದ ರತನ್ ಟಾಟಾ ಅವರು ಟಾಟಾ ಟ್ರಸ್ಟ್ಸ್ನ ಅಧ್ಯಕ್ಷರಾಗಿದ್ದರು.
‘ಟ್ರಸ್ಟ್ಸ್ ರತನ್ ಟಾಟಾರ ಭೌತಿಕ ಉಪಸ್ಥಿತಿಯನ್ನು ಕಳೆದುಕೊಂಡಿದೆ,ಆದರೆ ಅವರು ಯಾವಾಗಲೂ ನಮ್ಮ ಹೃದಯಗಳು ಮತ್ತು ಮನಸ್ಸುಗಳಲ್ಲಿ ನೆಲೆಸಿರುತ್ತಾರೆ’ ಎಂದೂ ಶರ್ಮಾ ಹೇಳಿದ್ದಾರೆ.