ಸಕಲ ಸರಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ

Update: 2024-10-10 16:01 GMT

 ರತನ್ ಟಾಟಾ | PTI 

ಮುಂಬೈ : ಜನಪ್ರಿಯ ಕೈಗಾರಿಕೋದ್ಯಮಿ ಹಾಗೂ ಸಮಾಜ ಸೇವಕ ರತನ್ ಟಾಟಾ ಅವರ ಅಂತ್ಯಕ್ರಿಯ ಮುಂಬೈಯ ವರ್ಲಿ ಚಿತಾಗಾರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿತು.

ಕುಶಾಲು ತೋಪು ಹಾರಿಸುವ ಮೂಲಕ ಮುಂಬೈ ಪೊಲೀಸರು ರತನ್ ಟಾಟಾ ಅವರಿಗೆ ಗೌರವ ನಮನ ಸಲ್ಲಿಸಿದರು. ಪಾರ್ಸಿ ಸಂಪ್ರದಾಯಕ್ಕೆ ಅನುಗುಣವಾಗಿ ಅವರ ಅಂತ್ಯ ಸಂಸ್ಕಾರ ನೆರವೇರಿತು.

ಅಂತ್ಯ ಕ್ರಿಯೆಯಲ್ಲಿ ಟಾಟಾ ಸಮೂಹದ ಅಧ್ಯಕ್ಷ ಚಂದ್ರಶೇಖರನ್ ಅವರಂತಹ ಟಾಟಾ ಸಮೂಹದ ಉನ್ನತ ಅಧಿಕಾರಿಗಳು, ಮಲ ಸಹೋದರ ನೋಯಲ್ ಟಾಟಾ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಇದಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಅಜಿತ್ ಪವಾರ್ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಆಸಿಯಾನ-ಇಂಡಿಯಾ ಹಾಗೂ ಪೂರ್ವ ಏಷಿಯಾ ಶೃಂಗಗಳಲ್ಲಿ ಭಾಗವಹಿಸಲು ತೆರಳಿರುವುದರಿಂದ ಪಾಲ್ಗೊಳ್ಳಲಿಲ್ಲ.

ಇದಕ್ಕಿಂತ ಮುನ್ನ ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈಯ ನರಿಮನ್ ಪಾಯಿಂಟ್‌ನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್(ಎನ್‌ಸಿಪಿಎ)ನಲ್ಲಿ ಬೆಳಗ್ಗೆ 10 ಗಂಟೆಯಿಂದ 3.30ರ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ರತನ್ ಟಾಟಾ ಅವರು ಬುಧವಾರ ರಾತ್ರಿ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ನಿಧನದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕಚೇರಿ ಒಂದು ದಿನದ ಶೋಕಾಚರಣೆ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News