ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ 11 ವರ್ಷದ ಪುತ್ರಿಗೆ ಅತ್ಯಾಚಾರದ ಬೆದರಿಕೆ!

Update: 2024-08-26 16:02 GMT

 ಅಭಿಷೇಕ್ ಬ್ಯಾನರ್ಜಿ | PTI 

ಕೋಲ್ಕತ್ತಾ: ಟಿಎಂಸಿ ನಾಯಕ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ 11 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದವರಿಗೆ ರೂ. 10 ಕೋಟಿ ಬಹುಮಾನ ನೀಡಲಾಗುವುದು ಎಂದು ವ್ಯಕ್ತಿಯೊಬ್ಬ ಕರೆ ನೀಡುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವು, ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದೆ.

ಆ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯು ಉತ್ತರ 24 ಪರಗಣಾಸ್ ಜಿಲ್ಲೆಯ ಮೀನಾಖಂ ಬ್ಲಾಕ್ ನ ಮಲಂಚ ನಿವಾಸಿ ಎಂದು ಹೇಳಲಾಗಿದ್ದು, ಈ ಸಂಗತಿಯ ನೈಜತೆಯನ್ನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಡೀ ರಾಜ್ಯ ಆರ್ ಜಿ ಕರ್ ಆಸ್ಪತ್ರೆಯ ವೈದ್ಯೆಯ ದುಃಖಕರ ಸಾವಿನ ಕುರಿತು ಶೋಕ ವ್ಯಕ್ತಪಡಿಸುತ್ತಿರುವಾಗ, ಈ ಘಟನೆಗೆ ಪ್ರತಿಯಾಗಿ ಮತ್ತೊಂದು ಅತ್ಯಾಚಾರಕ್ಕೆ ಕರೆ ನೀಡುವುದು ಕಾನೂನಿನ ಉಲ್ಲಂಘನೆಯಾಗಿದೆ ಹಾಗೂ ಒಂದು ವೇಳೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಹೋದರೆ ಸಮಾಜಕ್ಕೆ ಅಪಾಯಕಾರಿ ಸಂದೇಶ ರವಾನೆಯಾಗಲಿದೆ” ಎಂದು ಮಕ್ಕಳ ಹಕ್ಕು ರಕ್ಷಣೆ ಆಯೋಗವು ಆತಂಕ ವ್ಯಕ್ತಪಡಿಸಿದೆ.

ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು ಹಾಗೂ ಬೆದರಿಕೆಗೊಳಗಾಗಿರುವ ಅಪ್ರಾಪ್ತ ಬಾಲಕಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಯೋಗವು ಪೊಲೀಸರಿಗೆ ಮನವಿ ಮಾಡುತ್ತದೆ” ಎಂದು ಆಯೋಗವು ಹೇಳಿದೆ.

ಈ ಸಂಬಂಧ ತಕ್ಷಣವೇ ಮಧ್ಯಪ್ರವೇಶಿಸುವಂತೆ ಬಸಿರ್ಹತ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಪಶ್ಚಿಮ ಬಂಗಾಳ ಮಕ್ಕಳ ಹಕ್ಕು ರಕ್ಷಣೆ ಆಯೋಗದ ಅಧ್ಯಕ್ಷೆ ತುಲಿಕಾ ದಾಸ್ ಪತ್ರ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News