ಒಡಿಶಾ: ವೇದಾಂತ ಅಲ್ಯೂಮಿನಿಯಂ ʼನೀರು ಸಂಗ್ರಹಣಾ ಘಟಕʼದ ಕಟ್ಟೆ ಒಡೆದು ಕೃಷಿ ಭೂಮಿ ಜಲಾವೃತ
ಒಡಿಶಾ: ಒಡಿಶಾದ ವೇದಾಂತ ಅಲ್ಯೂಮಿನಿಯಂ ಘಟಕದಲ್ಲಿ ನೀರು ಸಂಗ್ರಹಣಾ ಘಟಕ ಕಟ್ಟೆ ಒಡೆದು, ಈ ಪ್ರದೇಶದ ಕೃಷಿ ಭೂಮಿ ಜಲಾವೃತಗೊಂಡಿದೆ. ಘಟಕದಲ್ಲಿ ಸಂಗ್ರಹಿಸಿಟ್ಟಿದ್ದ ನೀರನ್ನು ಉದ್ಯಮ, ಉತ್ಪಾದನೆ, ವಿದ್ಯುತ್ ಉತ್ಪಾದನೆಗಳಿಗೆ ಬಳಸಲಾಗುತ್ತಿತ್ತು.
ಘಟನೆಯಿಂದ ಕೆಂಪು ಮಣ್ಣಿನ ಸಂಗ್ರಹಣಾ ಘಟಕಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವೇದಾಂತ ಅಲ್ಯೂಮಿನಿಯಂ ಪ್ರಕಟಣೆಯಲ್ಲಿ ತಿಳಿಸಿದೆ. ʼಕೆಂಪು ಮಣ್ಣುʼ ಎಂದರೆ ಅಲ್ಯುಮಿನಿಯಂ ಉತ್ಪಾದನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ. ಇದರ ಸೋರಿಕೆಯಿಂದ ಮಾಲಿನ್ಯದ ಅಪಾಯ ಉಂಟಾಗಬಹುದು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳು ಹೇಳುತ್ತದೆ.
ಆ ಪ್ರದೇಶದಲ್ಲಿನ ದೃಶ್ಯಾವಳಿಗಳು ದೊಡ್ಡ ಪ್ರಮಾಣದ ಕೆಸರು ನೀರು ತೆರೆದ ಪ್ರದೇಶಗಳಿಗೆ ಹರಿಯುತ್ತಿರುವುದನ್ನು ತೋರಿಸಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನೀರು ಉಕ್ಕಿ ಹರಿದಿದೆ. ಸೃಷ್ಟಿಯಾಗಿರುವ ಪ್ರವಾಹದಿಂದಾಗಿ ಯಾವುದೇ ಗಾಯಗಳು ಅಥವಾ ಪ್ರಾಣ ಹಾನಿಗಳು ವರದಿಯಾಗಿಲ್ಲ ಎಂದು ವೇದಾಂತ ಅಲ್ಯೂಮಿನಿಯಂ ತಿಳಿಸಿದೆ.