ರಮೇಶ್ ಜಿಗಜಿಣಗಿ ಸಹಿತ 19 ಸಚಿವರ ಸೇರ್ಪಡೆ;5 ಹಾಲಿ ಸಚಿವರಿಗೆ ಕೊಕ್
ಹೊಸದಿಲ್ಲಿ, ಜು.5: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಗಳವಾರ ಸಚಿವ ಸಂಪುಟ ವಿಸ್ತರಣೆ ನಡೆಸಿದ್ದು, ಕರ್ನಾಟಕದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಸಹಿತ 19 ಹೊಸ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಐವರು ಹಾಲಿ ರಾಜ್ಯ ಖಾತೆಯ ಸಚಿವರನ್ನು ಕೈಬಿಡಲಾಗಿದೆ.
ಮೋದಿ ಹೊಸ ಸಂಪುಟದಲ್ಲಿ ದಲಿತ ಹಾಗೂ ಒಬಿಸಿ ಮುಖಂಡರಿಗೆ ಸ್ಥಾನ ನೀಡಲಾಗಿದೆ. ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ರಚಿಸಲಾಗಿದೆ.
ಹೊಸತಾಗಿ 19 ಸಚಿವರ ಸೇರ್ಪಡೆಯೊಂದಿಗೆ ಮೋದಿ ಸಂಪುಟ ಗಾತ್ರ 64 ರಿಂದ 78ಕ್ಕೇರಿದೆ. ಐವರು ರಾಜ್ಯ ಖಾತೆ ಸಚಿವರು ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ಬೆಳಗ್ಗೆ ನಡೆದ ಸಮಾರಂಭದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಕಾಶ್ ಜಾವ್ಡೇಕರ್ ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆ ಸಚಿವರಾಗಿ ಭಡ್ತಿ ಪಡೆದಿದ್ದಾರೆ. ಕನ್ನಡಿಗ ಜಿಗಜಿಣಗಿ ರಾಜ್ಯ ಖಾತೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವರೆಲ್ಲರೂ ರಾಜ್ಯ ಸಚಿವರಾಗಿದ್ದಾರೆ. ರಕ್ಷಣೆ, ಗೃಹ, ಹಣಕಾಸು ಹಾಗೂ ವಿದೇಶಾಂಗ ದಂತಹ ಪ್ರಮುಖ ನಾಲ್ಕು ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸರ್ಬಾನಂದ ಸೋನೊವಾಲ್ ಅಸ್ಸಾಂ ಮುಖ್ಯಮಂತ್ರಿ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಅವರಿಂದ ಕ್ರೀಡಾ ಸಚಿವ ಸ್ಥಾನ ತೆರವಾಗಿದೆ.
ಸಂಪುಟದಲ್ಲಿ 82 ಸಚಿವ ಸ್ಥಾನ ಪಡೆಯಲು ಅವಕಾಶವಿದ್ದು, ಪ್ರಸ್ತುತ ಪ್ರಧಾನಿ ಸಹಿತ 66 ಸಚಿವರಿದ್ದಾರೆ. ನೂತನ ಸಚಿವರ ಪಟ್ಟಿಯಲ್ಲಿ ಅಡ್ವಕೇಟ್ ಪಿಪಿ ಚೌಧರಿ, ಸುಭಾಶ್ ರಾಮ್ ರಾವ್, ಪತ್ರಕರ್ತ ಎಂಜೆ ಅಕ್ಬರ್, ಮಾಜಿ ಅಧಿಕಾರಿ ಅರ್ಜುನ್ ರಾಮ್ ಮೆಘಾವಲ್ ಹಾಗೂ ಲೇಖಕ ಅನಿಲ್ ಮಾಧವ್ ದೇವ್ ಅವರಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯ ವೇಳೆ ಜಾತಿ, ಸಮಾಜ ಹಾಗೂ ಪ್ರಾಂತ್ಯವನ್ನು ಪರಿಗಣಿಸಲಾಗಿದೆ. ಸಂಪುಟದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಐವರಿಗೆ ಸ್ಥಾನ ನೀಡಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿರುವ ರಮೇಶ್ ಜಿಗಜಿಣಗಿ, ರಾಮ್ದಾಸ್ ಅಠವಳೆ, ಅರ್ಜುನ್ ರಾಮ್, ಕೃಷ್ಣ ರಾಜ್, ಅಜಯ್ ತಂಮ್ಟೆ ಸಂಪುಟ ಸೇರಿದರು.
2017ರಲ್ಲಿ ಉತ್ತರಪ್ರದೇಶ ಹಾಗೂ ಗುಜರಾತ್ನಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಆ ರಾಜ್ಯದಿಂದ ತಲಾ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ದಿಲ್ಲಿ, ಉತ್ತರಖಂಡ, ಕರ್ನಾಟಕ ಹಾಗೂ ಅಸ್ಸಾಂ ರಾಜ್ಯಗಳಿಗೆ ಮೋದಿ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ.
ಇಬ್ಬರು ಅಲ್ಪಸಂಖ್ಯಾತ ಮುಖಂಡರಾದ ಎಂಜೆ ಅಕ್ಬರ್ ಹಾಗೂ ಎಸ್ಎಸ್ ಅಹ್ಲುವಾಲಿಯಾ ಹಾಗೂ ಇಬ್ಬರು ಮಹಿಳೆಯರಾದ ಅನುಪ್ರಿಯಾ ಸಿಂಗ್ ಪಟೇಲ್ ಹಾಗೂ ಕೃಷ್ಣ ರಾಜ್ಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ಸಂಪುಟ ಸೇರಿದ 19 ರಾಜ್ಯ ಖಾತೆ ಸಚಿವರು
ರಮೇಶ್ ಜಿಗಜಿಣಗಿ ಕರ್ನಾಟಕ
ರಾಮದಾಸ್ ಅಠವಳೆ ಮಹಾರಾಷ್ಟ್ರ
ವಿಜಯ್ ಗೋಯಲ್ ರಾಜಸ್ಥಾನ
ರಾಜನ್ ಗೋಹೈನ್ ಅಸ್ಸಾಂ
ಅನಿಲ್ ಮಾಧವ್ ದವೆ ಮಧ್ಯಪ್ರದೇಶ
ಪುರುಷೋತ್ತಮ ರೂಪಾಲಾ ಗುಜರಾತ್
ಎಂ.ಜೆ.ಅಕ್ಬರ್ ಮಧ್ಯಪ್ರದೇಶ
ಅರ್ಜುನ್ ರಾವ್ ಮೇಘಾವಲ್ ರಾಜಸ್ಥಾನ
ಫಗ್ಗನ್ ಕುಲಸ್ತ್ತೆ ಮಧ್ಯಪ್ರದೇಶ
ಅಜಯ್ ತಮ್ಟೆ ಉತ್ತರಾಖಂಡ
ಪಿ.ಪಿ. ಚೌಧರಿ ರಾಜಸ್ಥಾನ
ಪಿ.ಆರ್.ಚೌಧರಿ ರಾಜಸ್ಥಾನ
ಮಹೇಂದ್ರ ನಾಥ್ ಪಾಂಡೆ ಉತ್ತರಪ್ರದೇಶ
ಮನ್ಸುಖ್ ಮಾಂಡವೀಯ ಗುಜರಾತ್
ಜಸ್ವಂತ್ ಸಿಂಗ್ ಭಾಬೋರ್ ಗುಜರಾತ್
ಎಸ್.ಎಸ್.ಅಹ್ಲುವಾಲಿಯಾ ಪಶ್ಚಿಮ ಬಂಗಾಳ
ಕೃಷ್ಣಾರಾಜ್ ಉತ್ತರ ಪ್ರದೇಶ
ಅನುಪ್ರಿಯಾ ಪಟೇಲ್ ಗುಜರಾತ್
ಡಾ.ಸುಭಾಶ್ ಭಾಂಬ್ರೆ ಮಹಾರಾಷ್ಟ್ರ
ಸಂಪುಟ ದರ್ಜೆಗೆ ಭಡ್ತಿ ಪಡೆದವರು
ಪ್ರಕಾಶ್ ಜಾವ್ಡೇಕರ್ ಮಹಾರಾಷ್ಟ್ರ
ಸಚಿವ ಸ್ಥಾನ ಕಳೆದುಕೊಂಡ ಐವರು ರಾಜ್ಯ ಖಾತೆ ಸಚಿವರು
1. ನಿಹಾಲ್ ಚಂದ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
2.ರಾಮ್ಶಂಕರ್ ಕಟಾರಿಯಾ, ಮಾನವ ಸಂಪನ್ಮೂಲ ವಿಭಾಗ
3.ಸನ್ವರ್ ಲಾಲ್ ಜಾಟ್, ಜಲ ಸಂಪನ್ಮೂಲ ಖಾತೆ
4. ಮನ್ಸೂಕ್ ಬಾಯ್ ವಾಸ್ವಾ-ಬುಡಕಟ್ಟು ವ್ಯವಹಾರ
5.ಎಂ.ಕೆ. ಕುಂಡರಿಯಾ-ಕೃಷಿ ಖಾತೆ.