ಪೊಲೀಸರೊಂದಿಗೆ ಘರ್ಷಣೆ; ಓರ್ವ ಬಿಜೆಪಿ ಕಾರ್ಯಕರ್ತ ಸಾವು
ಬಾಲಿಯಾ(ಉತ್ತರಪ್ರದೇಶ), ಆ.13: ದನಗಳ ಕಳ್ಳತನ ಪ್ರಕರಣದಲ್ಲಿ ಐವರನ್ನು ಬಂಧಿಸಿರುವುದನ್ನು ವಿರೋಧಿಸಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ಬಲಿಯಾಗಿದ್ದಾನೆ.
ಬಿಜೆಪಿ ಎಂಎಲ್ಎ ಉಪೇಂದ್ರ ತಿವಾರಿ ನೇತೃತ್ವದಲ್ಲಿ 300ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ನಾರ್ರಿ ಪೊಲೀಸ್ ಠಾಣೆಯ ಮುಂದೆ ಶುಕ್ರವಾರ ರಾತ್ರಿ ಧರಣಿ ನಡೆಸಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿದರು. ಈ ಹಂತದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಕಂಡು ಬಂದಿತು ಎನ್ನಲಾಗಿದೆ.
ಪೊಲೀಸರು ಟಿಯರ್ ಗ್ಯಾಸ್, ರಬ್ಬರ್ ಬುಲೆಟ್ ಹಾರಿಸಿ ,ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಉದ್ರಿಕ್ತ ಗುಂಪು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಗುಂಡು ಹಾರಿಸಿದರು. ಪರಿಣಾಮವಾಗಿ ವಿನೋದ್ ರಾಯ್ ಎಂಬವರು ಮೃತಪಟ್ಟಿದ್ದಾರೆ. ಇತರ 50ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಗಾಯಗೊಂಡವರಲ್ಲಿ ಬಿಜೆಪಿ ಎಂಎಲ್ಎ ಉಪೇಂದ್ರ ತಿವಾರಿ ಸೇರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
·