ಉತ್ತರಪ್ರದೇಶದ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಯೋಜನೆ
ಲಕ್ನೋ, ಜ.13: ಉತ್ತರ ಪ್ರದೇಶದ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಯೋಜನೆ ಹಾಕಿಕೊಂಡಿರುವ ಕಾಂಗ್ರೆಸ್ ಪಕ್ಷ ಮೈತ್ರಿಯಿಂದ ತನ್ನನ್ನು ಹೊರಗಟ್ಟಿರುವ ಮಾಯಾವತಿ-ಅಖಿಲೇಶ್ ಯಾದವ್ ಪಕ್ಷಗಳಿಗೆ ಕಠಿಣ ಸಂದೇಶ ನೀಡಲು ಬಯಸಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿಯಲ್ಲಿ ಉ.ಪ್ರ. ರಾಜ್ಯದ 13 ವಲಯಗಳಲ್ಲಿ 13 ರ್ಯಾಲಿಗಳನ್ನು ಆಯೋಜಿಸಲಿದ್ದು, ಪ್ರತಿ ವಲಯದಲ್ಲಿ ಆರು ಲೋಕಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಪ್ರತಿ ವಲಯದಲ್ಲಿ ರಾಹುಲ್ ಒಂದು ರ್ಯಾಲಿ ನಡೆಸಲಿದ್ದಾರೆ. ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಹಾಗೂ ಪಕ್ಷದ ಉತ್ತರಪ್ರದೇಶದ ಉಸ್ತುವಾರಿ ರಾಜ್ ಬಬ್ಬರ್ ರವಿವಾರ ಸಭೆ ಸೇರಿ ಯೋಜನೆಗೆ ಅಂತಿಮ ರೂಪ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘‘ನಾನು ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷದ ನಾಯಕರನ್ನು ತುಂಬಾ ಗೌರವಿಸುತ್ತೇನೆ. ಅವರಿಗೆ ತಾವು ಬಯಸಿದಂತೆ ನಡೆದುಕೊಳ್ಳುವ ಹಕ್ಕಿದೆ. ಉತ್ತರಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವುದು ನಮ್ಮ ಕೆಲಸ. ನಾವು ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇವೆ’’ ಎಂದು ರಾಹುಲ್ ದುಬೈನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಳಿಕ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೇರಿಲ್ಲ.
ಕಾಂಗ್ರೆಸ್ನ ಈ ಯೋಜನೆ, ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರ ಬಿಜೆಪಿಯನ್ನು ಹೀನಾಯವಾಗಿ ಸೋಲಿಸುವ ಗುರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಈ ಎರಡು ಪಕ್ಷಗಳು ಕಾಂಗ್ರೆಸ್ಗೆ ನೀಡಿರುವ ಬೆಂಬಲದ ಬಗ್ಗೆಯೂ ಯೋಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.