‘ಆಪ್’ನ ಮತ್ತೋರ್ವ ಶಾಸಕ ರಾಜೀನಾಮೆ
Update: 2019-01-16 17:49 GMT
ಹೊಸದಿಲ್ಲಿ, ಜ.16: ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಬುಧವಾರ ಪಂಜಾಬ್ನ ಶಾಸಕ ಬಲ್ದೇವ್ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ಪಕ್ಷದ ಮೂಲಸಿದ್ಧಾಂತಕ್ಕೆ ತಿಲಾಂಜಲಿ ಇತ್ತು ದ್ವಿಮುಖ ಧೋರಣೆ ತಳೆಯುತ್ತಿದ್ದಾರೆ ಎಂದು ಸಿಂಗ್ ದೂರಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವ ತ್ಯಜಿಸಲು ನೋವಾಗುತ್ತಿದೆ. ಆದರೆ ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷದಲ್ಲಿ ಮುಂದುವರಿಯಲು ಇಚ್ಛೆಯಿಲ್ಲ ಎಂದು ‘ಆಪ್’ ಸಂಚಾಲಕ ಅರವಿಂದ ಕೇಜ್ರಿವಾಲ್ಗೆ ಬರೆದಿರುವ ಪತ್ರದಲ್ಲಿ ಸಿಂಗ್ ತಿಳಿಸಿದ್ದಾರೆ. ಇದೇ ರೀತಿಯ ಕಾರಣ ನೀಡಿ ಜನವರಿ 6ರಂದು ಶಾಸಕ ಸುಖ್ಪಾಲ್ ಸಿಂಗ್ ಖೈರಾ ‘ಆಪ್’ಗೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೆ ಪಂಜಾಬ್ ಶಾಸಕರಾಗಿದ್ದ ಎಚ್ಎಸ್ ಫೂಲ್ಕ ಇತ್ತೀಚೆಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.