ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ-2024 ಘೋಷಣೆ

Update: 2024-09-15 16:36 GMT

ಬೆಂಗಳೂರು : ಚಿಂತಕ ಹಾಗೂ ಸಾಮಾಜಿಕ ಚಳುವಳಿಗಾರ ಜಿ.ರಾಜಶೇಖರ್ ಅವರ ಸೆ.16ರ ಹುಟ್ಟುಹಬ್ಬದ ಪ್ರಯುಕ್ತ ʼರಾಜಶೇಖರ್ ಸ್ಮಾರಕ ಜ್ಞಾನವೇತನʼವನ್ನು ಆರಂಭಿಸಲಾಗಿದೆ.

ಪ್ರಸ್ತುತ ಜ್ಞಾನವೇತನವು, ಜಿ.ರಾಜಶೇಖರ್ ಅವರ ’ಕಾಗೋಡು ಸತ್ಯಾಗ್ರಹ’ದಂತಹ ಕೃತಿಗಳನ್ನು ಕಟ್ಟಲು ಕನ್ನಡದ ಯುವ ಬರಹಗಾರರು, ಸಂಶೋಧಕರು ಹಾಗು ಪತ್ರಕರ್ತರಿಗೆ ಸ್ಪೂರ್ತಿದಾಯಕವಾಗಲಿ ಎಂಬುದು ಇದರ ಉದ್ದೇಶವಾಗಿದೆ.

ಜ್ಞಾನ ವೇತನದ ವಿವರ :

1) ಒಟ್ಟು 1,00,000 ರೂಪಾಯಿ ಮೊತ್ತದ ಜ್ಞಾನವೇತನವನ್ನು, 18-35ರ ವಯಸ್ಸಿನ ಮಿತಿಯಲ್ಲಿ ಇರುವ ಒಬ್ಬ ಅಭ್ಯರ್ಥಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುವುದು.

2) ವೇತನ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸಂಶೋಧನೆಯ ವಿಷಯ ಹಾಗು ಸಂಶೋಧನಾ ವಿಧಾನವನ್ನು ಒಳಗೊಂಡ ಸಂಶೋಧನಾ ಪ್ರಸ್ತಾವನೆ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನಾಂಕ.

3) ಶೈಕ್ಷಣಿಕ ಕ್ಷೇತ್ರದಲ್ಲಿ ನುರಿತರಾಗಿರುವವರು, ಅನುಭವಿ ಲೇಖಕರನ್ನು ಒಳಗೊಂಡ ಸಲಹಾ ಮಂಡಳಿಯು ಒಬ್ಬ ಅಭ್ಯರ್ಥಿಯನ್ನು ವೇತನಕ್ಕೆ ಆಯ್ಕೆ ಮಾಡುತ್ತದೆ.

4) ಆಯ್ಕೆಯಾದ ಅಭ್ಯರ್ಥಿಯು ಸಂಶೋಧನೆಗೆ ಆಯ್ದುಕೊಂಡ ಚಾರಿತ್ರಿಕ ವಿಷಯದ ಮೇಲೆ, ಸಾಕ್ಷಿ-ಪುರಾವೆ ಹಾಗು ಆಳ-ಅಗಲ (narrative journalism) ಉಳ್ಳ ವರದಿಗಳ ಆಧಾರದಲ್ಲಿ ಸಂಶೋಧನೆ ನಡೆಸಬೇಕು. ಸಲಹಾ ಮಂಡಳಿಯು ಸಂಶೋಧನಾ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತದೆ.

5) ಮಹಿಳೆ, ಕಡೆಗಣಿತ ಜಾತಿ ಪಗಂಡ ಹಾಗೂ ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ಯವಿರುತ್ತದೆ.

ಸೂಚಿತ ಸಂಶೋಧನಾ ವಲಯಗಳು:

► ಮತೀಯ ದ್ವೇಷ/ ಕೂಡುಕಟ್ಟು/ ಸಹಬಾಳ್ವೆ - ಇವುಗಳ ಸಾಮಾಜಿಕ- ಸಾಂಸ್ಕೃತಿಕ ಬೇರುಗಳು ; ಇಂದಿನ ವಾಸ್ತವಿಕ ಸ್ಥಿತಿಗತಿ- ಸ್ಥಳ-ವಿದ್ಯಮಾನ ಅಧ್ಯಯನ.

► ಜಾತಿ ಯಜಮಾನಿಕೆ, ಅಸಮಾನತೆ, ಅನ್ಯಾಯಗಳ ಮುಂದುವರಿಕೆಯ ಸಾಮಾಜಿಕ-ರಾಜಕೀಯ ಕಾರಣಗಳು- ಸ್ಥಳ-ವಿದ್ಯಮಾನ ಅಧ್ಯಯನ.

► ಕಡೆಗಣಿತ ಸಮುದಾಯಗಳ ( ಸ್ಥಳ, ಸಮುದಾಯ ನಿರ್ದಿಷ್ಟತೆ ಇರಬೇಕು) ಪ್ರತಿರೋಧ ಚರಿತ್ರೆ ಮತ್ತು ಪ್ರಸ್ತುತ ಪರಿಸ್ಥಿತಿಯ ನೈಜತೆ.

► ಆಧುನಿಕ ಸಾಂಸ್ಥಿಕ ವ್ಯವಸ್ಥೆಗಳ ( ಕಾನೂನು, ನ್ಯಾಯಿಕ, ಆರೋಗ್ಯ, ಶಿಕ್ಷಣ, ಮಹಿಳೆ- ಮಕ್ಕಳ ಕಲ್ಯಾಣ ಇತ್ಯಾದಿ) ವೈಫಲ್ಯದ ಕಾರ್ಯ-ಕಾರಣ -ಪರಿಣಾಮ.

► ಶ್ರಮಿಕರ ಆಂತರಿಕ ವಲಸೆ : ಸಾಮಾಜಿಕ ಕಾರ್ಯ-ಕಾರಣ, ವಲಸೆಯ ನಕ್ಷೆ, ಪ್ರದೇಶ ಭಿನ್ನತೆ, ಹೊರಗಿಡುವಿಕೆ, ಕಡೆಗಣಿಸುವಿಕೆ, ಸಾಮಾಜಿಕ ಪರಿಣಾಮಗಳು.

► ಕಡೆಗಣಿತ ಸಮುದಾಯಗಳ ಕಲ್ಯಾಣಕ್ಕಾಗಿ ವಿಜ್ಞಾನ ತಂತ್ರಜ್ಞಾನ- ವರ್ತಮಾನದ ಸ್ಥಿತಿ ಗತಿ, ಎದುರಿಸಬೇಕಾದ ಸವಾಲುಗಳು, ಸಾಗಬೇಕಾದ ಹಾದಿ.

► ಜೀವಸಂಕುಲ, ಪರಿಸರ ಮತ್ತು ಮಾನವ ಅಸ್ತಿತ್ವದ ಸಮಸ್ಯೆಗಳು.

ಈ ಸೂಚಿತ ವಿಷಯಗಳಲ್ಲದೆ ಸಂಶೋಧನೆಗೆ ಅರ್ಹವಾದ ಸಾಮಾಜಿಕ ಕಾಳಜಿಯ/ಕುತೂಹಲಕರ ವಸ್ತುಗಳಿಗೂ ಅವಕಾಶವಿದೆ. ಸಲಹಾ ಸಮಿತಿಯ ಆಯ್ಕೆಯೇ ಅಂತಿಮವಾಗಿರುತ್ತದೆ.

ಪ್ರಸ್ತಾವನೆಯನ್ನು ಇಮೇಲ್ ಐಡಿ-grskksv@gmail.comಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News