ಬೆಂಗಳೂರು | ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ : ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲು

Update: 2024-05-17 15:04 GMT

ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ವರದಿಯಾಗಿದೆ.

ಸಂಧ್ಯಾ(31) ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಜಯಪ್ರಕಾಶ್ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಜಯಪ್ರಕಾಶ್ ಹಾಗೂ ಸಂಧ್ಯಾಗೆ ವಿವಾಹವಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗನಿದ್ದು, ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇದೇ ಕಾರಣಕ್ಕೆ ಜಯಪ್ರಕಾಶ್ ಹಾಗೂ ಆತನ ಕುಟುಂಬದವರು ಸಂಧ್ಯಾಳನ್ನು ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಅಲ್ಲದೇ ಒಂದು ವರ್ಷದ ಹಿಂದೆ ಗರ್ಭಪಾತವಾಗಿದ್ದರಿಂದ ದೈಹಿಕವಾಗಿ ದಪ್ಪವಾಗಿದ್ದ ಸಂಧ್ಯಾಳನ್ನು ಆಕೆಯ ಪತಿ ಅವಮಾನಿಸುತ್ತಿದ್ದು, ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ಸಂಧ್ಯಾ ಮೇ 16ರ ಗುರುವಾರ ರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಜಯಪ್ರಕಾಶ್ ಹಾಗೂ ಆತನ ಕುಟುಂಬದವರ ಕಿರುಕುಳದಿಂದ ಸಂಧ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ತಂದೆ ಆರೋಪಿಸುತ್ತಿದ್ದಾರೆ.

ಮೃತಳ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಠಾಣಾ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News