ಬೆಂಗಳೂರು | ಡಿಸಿಪಿ ಕಚೇರಿ ಎದುರಲ್ಲೇ ಯುವತಿಗೆ ಕಿರುಕುಳ ಆರೋಪ: ದೂರು ದಾಖಲು

Update: 2023-11-13 15:09 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ನ.13: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಬಟ್ಟೆ ಎಳೆದಾಡಿ ಯುವಕನೊಬ್ಬ ಕಿರುಕುಳ ನೀಡಿರುವ ಘಟನೆ ಇಲ್ಲಿನ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯ ಮುಂಭಾಗದಲ್ಲಿಯೇ ನಡೆದಿದ್ದು, ಈ ಬಗ್ಗೆ ಯುವತಿಯು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದು ವರದಿಯಾಗಿದೆ.

ದೂರುದಾರ ಯುವತಿ ಕೂಡ್ಲು ಗೇಟ್ ಬಳಿ ಕೆಲಸ ಮಾಡುತ್ತಿದ್ದು, ನ.6ರಂದು ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ಕನಕಪುರ ಮುಖ್ಯರಸ್ತೆಯ ಕಡೆಯಿರುವ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಳು. ಆ ಸಂದರ್ಭದಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಿರುವ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಮುಂಭಾಗದಲ್ಲಿ ಆಕೆಯ ಬಟ್ಟೆ ಎಳೆದಾಡಿ, ಅಶ್ಲೀಲವಾಗಿ ನಿಂದಿಸಿದ್ದಾನೆ. ನಂತರ ಕನಕಪುರ ಮುಖ್ಯರಸ್ತೆಯ ಸರ್ಕಲ್ ಬಳಿ ತನ್ನ ದ್ವಿಚಕ್ರ ವಾಹನ ಯೂಟರ್ನ್ ಮಾಡಿಕೊಂಡು ತೆರಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಯನಗರ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿಯು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News