ಬೆಂಗಳೂರು | ಕೆಂಗೇರಿ ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಮೃತ್ಯು ; ಒಂದು ಮೃತದೇಹ ಪತ್ತೆ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕೆಲವುದಿನಗಳಿಂದ ನಿರಂತರವಾಗಿ ಮೆಳೆಯಾಗುತ್ತಿದ್ದು, ಈ ಮಧ್ಯೆ ನಗರದ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಪೈಕಿ ಇಂದು(ಅ.22) ಒಂದು ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮೃತ ಮಕ್ಕಳನ್ನು ಶ್ರೀನಿವಾಸ್ (ಜಾನ್ ಸೀನಾ) (15) ಮತ್ತು ಮಹಾಲಕ್ಷ್ಮೀ (13) ಎಂದು ಗುರುತಿಸಲಾಗಿದೆ. ಸೋಮವಾರ(ಅ.22) ಸಂಜೆ ಈ ದುರ್ಘಟನೆ ನಡೆದಿದ್ದು, ಮೃತ ಮಕ್ಕಳ ತಾಯಿ ಬಿಬಿಎಂಪಿ ಪೌರಕಾರ್ಮಿಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಕೆಂಗೇರಿ ಸಮೀಪದ ಹರ್ಷ ಲೇಔಟ್ ಗೆ ಬಂದು ನೆಲೆಸಿದ್ದರು. ಕೆಲಸದ ನಿಮಿತ್ತ ತಾಯಿ ಹೊರ ಹೋಗಿದ್ದರು. ಸೋಮವಾರ ಸಂಜೆ ಬಟ್ಟೆ ಒಗೆಯಲು ಹೋಗಿದ್ದ ಅಣ್ಣ, ತಂಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಇದೇ ವೇಳೆ ತನ್ನ ಇಬ್ಬರು ಮಕ್ಕಳನ್ನು ಹುಡುಕಿಕೊಂಡು ಬಂದ ತಾಯಿಗೆ, ಬಟ್ಟೆ ಹಾಗೂ ಪಾತ್ರೆ ಕೆರೆಯ ಬಳಿ ಪತ್ತೆಯಾಗಿದೆ.
ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಕೆಂಗೇರಿ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ರಾತ್ರಿಯವರೆಗೂ ಮೃತದೇಹ ಪತ್ತೆಯಾಗಲಿಲ್ಲ.
ಬಾಲಕನ ಮೃತದೇಹ ಪತ್ತೆ :
ಮಂಗಳವಾರ(ಅ.22) ಅಗ್ನಿಶಾಮಕ ದಳ ಸಿಬ್ಬಂದಿ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮೃತ ಬಾಲಕನ ಶ್ರೀನಿವಾಸ್ (ಜಾನ್ ಸೀನಾ) ಮೃತದೇಹ ಪತ್ತೆಯಾಗಿದೆ. ಮಹಾಲಕ್ಷ್ಮಿಗಾಗಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.