ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ?

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಉಪಸಭಾಪತಿ ಪ್ರಾಣೇಶ್ ಅವರಿಗೆ ಪತ್ರವನ್ನು ರವಾನಿಸಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ವೈಯಕ್ತಿಕ ಕಾರಣಗಳಿಂದ ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಮಾರ್ಚ್ 31ರ ಒಳಗೆ ಸ್ವೀಕರಿಸಬೇಕು. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಬೇಕು ಎಂದು ಉಪಸಭಾಪತಿಗೆ ಬರೆದ ಪತ್ರದಲ್ಲಿ ಬಸವರಾಜ ಹೊರಟ್ಟಿ ವೈರಲ್ ಆದ ಪತ್ರದಲ್ಲಿ ಆಗ್ರಹಿಸಿದ್ದಾರೆ. ಆದರೆ ವೈರಲ್ ಆದ ಪತ್ರದಲ್ಲಿ ಯಾವುದೇ ಸಹಿ ಇಲ್ಲ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಸವರಾಜ ಹೊರಟ್ಟಿ, ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತಂದಿದೆ. ಸದನದಲ್ಲಿ ನಡೆದ ಬೆಳೆವಣಿಗೆಯನ್ನು ನಿಯಂತ್ರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂದು ಹೇಳಿಕೊಂಡಿದ್ದರು.
ಉಪಸಭಾಪತಿ ಪ್ರಾಣೇಶ್ ಸ್ಪಷ್ಟನೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಸಭಾಪತಿ ಪ್ರಾಣೇಶ್, "ಇದು ನಕಲಿ ಪತ್ರ. ಇದಕ್ಕೆ ಯಾವುದೇ ಮಾನ್ಯತೆ ಇಲ್ಲ. ಪತ್ರದಲ್ಲಿ ಸಹಿ ಹಾಕದೆ ಇರುವುದೇ ಮೊದಲು ಅನುಮಾನ ಮೂಡಿಸಿದೆ. ಅವರಿಗೆ ಬೇಸರವಾಗಿದೆ ಎಂಬುದನ್ನು ಅವರು ಪ್ರಕಟಿಸಿದ್ದಾರೆ. ಆದರೆ ರಾಜೀನಾಮೆ ನೀಡುವ ವಿಷಯ ಚರ್ಚಿಸಿಲ್ಲ, ನನಗೂ ತಿಳಿಸಿಲ್ಲ. ಅವರ ರಾಜೀನಾಮೆ ನಿರ್ಧಾರದ ಬಗ್ಗೆ ಮಾಹಿತಿಯಿಲ್ಲ. ಪತ್ರ ವ್ಯವಹಾರ ನಡೆದಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.