ಮುಸ್ಲಿಮರಿಗೆ ಈದ್ ಕಿಟ್ ನೀಡುತ್ತಿರುವುದು ಬಿಜೆಪಿಯ ಓಲೈಕೆ ರಾಜಕಾರಣವಲ್ಲವೆ? : ಸಚಿವ ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಮಝಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್ ನವರು ಮಾಡಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್ ನವರು ಈದ್ ಕಿಟ್ ಕೊಟ್ಟರೆ ಬಿಜೆಪಿ ನಾಯಕರು ಈಗಾಗಲೇ ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ರಾದ್ದಾಂತ ಮಾಡುತ್ತಿದ್ದರು. ಆದರೆ ಈಗ ʼಸೌಗಾತ್-ಎ-ಮೋದಿʼ ಹೆಸರಿನಲ್ಲಿ ಬಿಜೆಪಿಯ ನಾಯಕರೇ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷ್ಟೀಕರಣವಲ್ಲವೆ? ಇದು ಓಲೈಕೆ ರಾಜಕಾರಣವಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ́ಸೌಗಾತ್-ಎ-ಮೋದಿʼ ಅಭಿಯಾನದ ಮೂಲಕ ಈದ್ಗೆ ಮುಂಚಿತವಾಗಿ ದೇಶಾದ್ಯಂತ 32 ಲಕ್ಷ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಕಿಟ್ಗಳನ್ನು ವಿತರಿಸುತ್ತಿದೆ. ಬಿಜೆಪಿಯ ಈ ಅಭಿಯಾನವು ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.