ಬೆಂಗಳೂರು | ವೃತ್ತಿ ನೈಪುಣ್ಯತೆಗೆ ಎಐ ತಂತ್ರಜ್ಞಾನದ ಪ್ರಾಮುಖ್ಯತೆ ಅರಿಯಿರಿ : ರಾಕೇಶ್ ಸಿಂಗ್

ಬೆಂಗಳೂರು : ವೃತ್ತಿ ನೈಪುಣ್ಯತೆಗೆ ಎಐ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ರವರು ತಿಳಿಸಿದರು.
ನಗರದ ಅರಮನೆ ಆವರಣದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸನ್ನದ್ದು ಲೆಕ್ಕಿಗರ ಸಂಘವು ಆಯೋಜಿಸಿರುವ 37ನೇ ವಾರ್ಷಿಕ ಸಮ್ಮೇಳನ ಸಮಾವೇಶವನ್ನು ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಎಐ) ಪರಿವರ್ತನೆಯು ಉತ್ತೇಜಕ ಮತ್ತು ಲಾಭದಾಯಕ ವೃತ್ತಿಜೀವನದ ಚಲನೆಯಾಗಿದೆ. ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳ ಆಗರವಾಗಿದೆ. ಈ ನಿಟ್ಟಿನಲ್ಲಿ ಸಮಾವೇಶ ಆಯೋಜನೆ ಶ್ಲಾಘನೀಯ. ತ್ವರಿತ ಸೇವೆ ಹಾಗೂ ಒತ್ತಡ ರಹಿತ ಕಾರ್ಯ ನಿರ್ವಹಣೆಗೆ AI ತಂತ್ರಜ್ಞಾನ ಸಹಕಾರಿಯಾಗಿದೆ ಎಂದರು.
ಸಂಘದ ಅಧ್ಯಕ್ಷ ಸಿಎ ವಿಜಯಕುಮಾರ್ ಎಂ.ಪಟೇಲ್ ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿರುವವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್ ಪರಿಣಾಮಕಾರಿಯಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ವೃತ್ತಿಯಲ್ಲಿ ಬಳಸಿಕೊಳ್ಳಲು ನಿರ್ಧರಿಸಿದೆ. ವರ್ತಮಾನದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಪ್ರಾಮುಖ್ಯತೆ ಪಡೆದಿದೆ. ಇಂದಿನ ಸಮಾವೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಯಾಮಗಳು ಮತ್ತು ಬಳಕೆ ಕುರಿತು ಮಾಹಿತಿ, ಸಂವಹನ ನಡೆಯಲಿದೆ. ಈ ಹಂತದಲ್ಲಿ ಸವಾಲುಗಳು ಹಾಗೂ ಸಮರ್ಪಕವಾಗಿ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ಗಳು, ನೈಪುಣ್ಯತೆ ಪಡೆದ ತಂತ್ರಜ್ಞಾನರಿಂದ ಮಾರ್ಗದರ್ಶನ ಪಡೆಯುವರು. ಈ ಸಮಾವೇಶದ ಸಂದರ್ಭದಲ್ಲಿ 7ಕ್ಕೂ ಹೆಚ್ಚು ಎಐ ಪರಿಕರಗಳನ್ನು ವೃತ್ತಿಪರರಿಗೆ ಉಚಿತವಾಗಿ ಒದಗಿಸಲಾಗುವುದು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಜಯಕುಮಾರ್ ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಪ್ರೊ.ಡಾ.ನಿಗಮ್ ಎಸ್.ನುಗ್ಗೇಹಳ್ಳಿ ಮಾತನಾಡಿ, ವೃತ್ತಿಪರರು ಕಾಲಾನು ಕಾಲಕ್ಕೆ ಬದಲಾಗುವ ತೆರಿಗೆ ಕಾಯ್ದೆ ಅರಿವು ಮತ್ತು ನಿರ್ವಹಣೆಯನ್ನು ತಿಳಿಯಬೇಕು. ವೃತ್ತಿಯ ಯಶಸ್ಸಿಗೆ ನಿಯಮಗಳು ಮತ್ತು ತತ್ವಗಳ ವ್ಯತ್ಯಾಸವನ್ನು ಅರಿತು ಮುನ್ನೆಡೆಯಿರಿ. ತೆರಿಗೆಗೆ ಸಂಬಂದಿತ ಸಮಸ್ಯೆಗಳು ಎದುರಾದಾಗ ಲೆಕ್ಕಾಚಾರದ ಮಾದರಿಗೆ ಒತ್ತಡ ರಹಿತ ಕ್ರಮಗಳನ್ನು ಅನುಸರಿಸಿ, ಇದಕ್ಕೆ ಪೂರಕವಾದ ತಂತ್ರಜ್ಞಾನ ಗಳ ಅರಿವು ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಸಮಾವೇಶದಲ್ಲಿ ಗಣ್ಯರಾದ ಪ್ರೊ.ಡಾ.ನಿಗಮ್ ಎಸ್.ನುಗ್ಗೇಹಳ್ಳಿ, ಸಂಘದ ಚೇರ್ಮನ್ ಸಿಎ ವಿಜಯಕುಮಾರ್ ಎಂ.ಪಟೇಲ್, ವೈಸ್ ಚೇರ್ಮನ್ ಸಿಎ ಶಿವಪ್ರಕಾಶ್ ವಿರಕ್ತಮಠ, ಕಾರ್ಯದರ್ಶಿ ಸಿಎ ಪ್ರವೀಣ್ ಎಸ್.ಶೆಟ್ಟರ್ ಮತ್ತು ಗಣ್ಯರು ಉಪಸ್ಥಿತರಿದ್ದರು. ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಇಂದಿನಿಂದ ಎರಡು ದಿನಗಳ ಈ ಸಮಾವೇಶ ನಡೆಯಲಿದೆ.
ಚಿತ್ರ ಶೀರ್ಷಿಕೆ :
ಕರ್ನಾಟಕ ರಾಜ್ಯ ಸನ್ನದ್ದು ಲೆಕ್ಕಿಗರ ಸಂಘ (ಕೆಎಸ್ ಸಿಎಎ) ವು ಅರಮನೆ ಆವರಣದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಆಯೋಜಿಸಿರುವ 37ನೇ ವಾರ್ಷಿಕ ಸಮ್ಮೇಳನ ಸಮಾವೇಶವನ್ನು ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಸಂಘದ ಚೇರ್ಮನ್ ಸಿಎ ವಿಜಯಕುಮಾರ್ ಎಂ.ಪಟೇಲ್, ಪ್ರೊ ಡಾ ನಿಗಮ್ ಎಸ್ ನುಗ್ಗೇಹಳ್ಳಿ, ವೈಸ್ ಚೇರ್ಮನ್ ಸಿಎ ಶಿವಪ್ರಕಾಶ್ ವಿರಕ್ತಮಠ, ಕಾರ್ಯದರ್ಶಿ ಸಿಎ ಪ್ರವೀಣ್ ಎಸ್ ಶೆಟ್ಟರ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.