ಕೋಮು ದ್ವೇಷವನ್ನು ಹುಟ್ಟುಹಾಕಲು ವಿಡಿಯೋ, ಜಾಹೀರಾತು ಪ್ರಕಟ : ಬಿಜೆಪಿ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2024-05-06 14:43 GMT

ಬೆಂಗಳೂರು: ಬಿಜೆಪಿ ಕರ್ನಾಟಕವು ಶನಿವಾರದಂದು(ಮೇ 4) ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಕೋಮು ದ್ವೇಷವನ್ನು ಹುಟ್ಟುಹಾಕಲು ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಚುನಾವಣಾ ಕಾನೂನು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಬಿಜೆಪಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಲಾಯರ್ಸ್ ಆಸೋಸಿಯೇಶನ್ ಫಾರ್ ಜಸ್ಟೀಸ್(ಎಐಎಲ್‌ಎಜೆ), ಬಹುತ್ವ ಕರ್ನಾಟಕ ಸೇರಿದಂತೆ  ಸಾಮಾಜಿಕ ಕಾಳಜಿಯುಳ್ಳ ನಾಗರಿಕರು ಹಾಗು ನಾಗರೀಕ ಸಂಸ್ಥೆಗಳ ತಂಡ ಒತ್ತಾಯಿಸಿದೆ.

ಸೋಮವಾರ ಸಂಘಟನೆಯು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ಬಿಜೆಪಿ ಮುಸ್ಲಿಂ ಸಮುದಾಯ ಹಾಗು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ವೀಡಿಯೊ ಹಂಚಿಕೊಂಡಿದೆ. ಮುಸ್ಲಿಂ ಸಮುದಾಯವು ಇತರ ಸಮುದಾಯಗಳ ವೆಚ್ಚದಲ್ಲಿ ಎಲ್ಲ ಹಣವನ್ನು ತಿನ್ನುತ್ತಿದೆ, ಹಾಗೆಯೇ ಮುಸ್ಲಿಂ ಸಮುದಾಯವು ಇತರ ಸಮುದಾಯಗಳನ್ನು ಹೊರಹಾಕುತ್ತಿದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಹೀಗಾಗಿ ಈ ವಿಡಿಯೋ ಮುಸ್ಲಿಂ ಸಮುದಾಯದ ವಿರುದ್ಧದ ದಾಳಿಯಾಗಿದೆ ಎಂದು ಟೀಕಸಿದೆ.

ಬಿಜೆಪಿಯು ಮೇ 5ರಂದು ಖಾಸಗಿ ದಿನಪತ್ರಿಕೆಯ ಮುಖಪುಟದ ಪೂರ್ತಿ ಪುಟದಲ್ಲಿ ಜಾಹಿರಾತೊಂದನ್ನು ಪ್ರಕಟಿಸಿದೆ. ಜಾಹೀರಾತಿನಲ್ಲಿ “ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಕಾಂಗ್ರೆಸ್ ಸಂಚು ರೂಪಿಸಿದೆ. ನನ್ನ ಕೊನೆಯ ಉಸಿರು ಇರುವವವರೆಗೂ, ಎಸ್‌ಸಿ, ಎಸ್ಟಿ ಹಾಗು ಒಬಿಸಿ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಬಿಡುವುದಿಲ್ಲ - ಪ್ರಧಾನಿ ಶ್ರೀ ನರೇಂದ್ರ ಮೋದಿ” ಎಂದು ಬರೆದಿದೆ. ಈ ಜಾಹೀರಾತು ಸುಳ್ಳು ಸುದ್ದಿಯಾಗಿದೆ ಎಐಎಲ್‌ಎಜೆ ಆರೋಪಿಸಿದೆ.

ಸಂವಿಧಾನದ ಕಲಂ 15(4)ರ ಪ್ರಕಾರ ಮೀಸಲಾತಿಯನ್ನು ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂತಿದೆ. ಇದರ ಪ್ರಕಾರ ಕರ್ನಾಟಕದಲ್ಲಿ ದೇವೆಗೌಡರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿತ್ತು. ಮುಸ್ಲಿಂ ಸಮುದಾಯಕ್ಕೆ ದೇಶದಲ್ಲೇ ಎಲ್ಲೂ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿಲ್ಲ ಹಾಗು ನೀಡುವದಾಗಿ ಕಾಂಗ್ರೆಸ್ ಪಕ್ಷ ಸಹ ಎಲ್ಲೂ ತಿಳಿಸಿಲ್ಲ. ಹಾಗಾಗಿ, ಬಿಜೆಪಿ ಈ ಸುಳ್ಳು ಸುದ್ದಿ ಮೂಲಕ ಮುಸ್ಲಿಂ ಸಮುದಾಯದ ಮೇಲೆ ದ್ವೇಷವನ್ನು ಹಬ್ಬಿಸಲು ಹೊರಟಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳಿಗೆ ಯಾವುದೇ ಮನವಿ ಮಾಡಬಾರದು. ಮಸೀದಿಗಳು, ಚರ್ಚ್‌ಳು, ದೇವಾಲಯಗಳು ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಯಾಗಿ ಬಳಸಬಾರದು ಎಂದು ಚುನಾವಣಾ ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ದೂರಿನಲ್ಲಿ ನೆನಪಿಸಲಾಗಿದೆ.

ಬಿಜೆಪಿ ಪಕ್ಷವು ನೀತಿ ಸಂಹಿತಿ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ಉಸ್ತುವಾರಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಿಜೆಪಿ, ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ, ಬಿಜೆಪಿ ರಾಜ್ಯಾಧ್ಯಕ್ಷರ ಬಿ.ವೈ. ವಿಜಯೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದೆ.

ಬಿಜೆಪಿ ಕರ್ನಾಟಕವು ಎಕ್ಸ್ ಸಾಮಾಜಿಕ ತಾಣದಲ್ಲಿ ಎರಡು ದಿವಸ ಟ್ವೀಟ್ ಮಾಡದ ಹಾಗೆ ಆದೇಶಿಸಬೇಕು. ಈಗ ಮಾಡಿರುವ ಕೋಮು ದ್ವೇಷದ ಟ್ವೀಟ್‌ಅನ್ನು ಡಿಲೀಟ್ ಮಾಡಿಸಬೇಕು. ಬಿಜೆಪಿ ಕರ್ನಾಟಕ ಪ್ರಕಟಿಸಿದ ದಿನಪತ್ರಿಕೆಯ ಸುಳ್ಳು ಜಾಹೀರಾತಿಗೆ ಸಂಬಂಧಿಸಿ ನರೇಂದ್ರ ಮೋದಿಗೆ ನೋಟಿಸ್ ಜಾರಿ ಮಾಡಬೇಕು. ಹಾಗೆಯೇ ಅದೇ ಸೈಜ್‌ನ ಸ್ಪಷ್ಟಿಕರಣ ಜಾರಿಯಾಗುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದೆ.

ಇದೇ ತರಹದ ಉಲ್ಲಂಘನೆಗಳಿಗೆ ಚುನಾವಣಾ ಆಯೋಗವು ಭಾರತ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಸಿ.ರಾವ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು. ಹಾಗಾಗಿ ತಾವು ಈ ವಿಷಯದಲ್ಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಲ್ ಇಂಡಿಯಾ ಲಾಯರ್ಸ್ ಆಸೋಸಿಯೇಶನ್ ಫಾರ್ ಜಸ್ಟೀಸ್(ಎಐಎಲ್‌ಎಜೆ) ಮನವಿ ಮಾಡಿದೆ.

ತಂಡದಲ್ಲಿ ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ದ್ವೇಷದ ಮಾತಿನ ವಿರುದ್ಧ ಜನಾಂದೋಲನ (CAHS), ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ಸ್ ಅಸೋಸಿಯೇಷನ್ (AIDWA), ನಾವೆದ್ದು ನಿಲ್ಲದಿದ್ದರೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಎಸ್ (PUCL) ಮುಂತಾದ ಪ್ರಗತಿಪರ ಸಂಘಟನೆಗಳಿಂದ ಪ್ರತಿನಿಧಿಗಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News