ವಿಕೇಂದ್ರೀಕರಣವಾದರೆ ಕನ್ನಡಿಗರು ನಿರಾಶ್ರಿತರಾಗುವ ಸಂಭವವಿದೆ : ಡಾ.ಪುರುಷೋತ್ತಮ ಬಿಳಿಮಲೆ

Update: 2024-08-20 13:56 GMT

ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ರಾಜ್ಯ ರಾಜಧಾನಿ ವಿಕೇಂದ್ರೀಕರಣವಾದರೆ ಕನ್ನಡಿಗರು ಕನ್ನಡನಾಡಿನಲ್ಲಿಯೇ ನಿರಾಶ್ರಿತರಾಗುವ ಸ್ಥಿತಿ ಉಂಟಾಗಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ವಿಕಾಸಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ‘ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ’ ಶಿಬಿರದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ ಎಂದರು.

ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ವಿಕೇಂದ್ರೀಕರಣದ ಬಗ್ಗೆ ನಮಗೆ ಆತಂಕವಿಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ಅನ್ಯಭಾಷಿಕರು ನೆಲೆಸಿದ್ದಾರೆ. ಹಲವು ಬಡವಾಣೆಗಳಲ್ಲಿ ಸ್ಥಳೀಯರೇ ನಿರಾಶ್ರಿತರಾಗಿದ್ದು, ಇಂತಹ ಸಂದರ್ಭದಲ್ಲಿ ಬೆಂಗಳೂರು ವಿಕೇಂದ್ರೀಕರಣವಾದರೆ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆಯ ಚುಕ್ಕಾಣಿ ಹಿಡಿದರೆ ಕನ್ನಡ ಭಾಷೆ, ಕನ್ನಡಿಗರು ಮತ್ತಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಬಹುದೆ ಎಂಬ ಆತಂಕ ಪ್ರಾಧಿಕಾರಕ್ಕಿದೆ ಎಂದು ಅವರು ಹೇಳಿದರು.

ಹೀಗಾಗಿ ಬೆಂಗಳೂರು ವಿಕೇಂದ್ರೀಕರಣವಾದಾಗ ಪಾಲಿಕೆಗೆ ಆಯ್ಕೆಯಾಗುವ ಸದಸ್ಯರುಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾತಿನಿಧ್ಯ ಇರುವಂತೆ ಮತ್ತು ಮಹಾಪೌರರು ಹಾಗೂ ಉಪ ಮಹಾಪೌರರ ಹುದ್ದೆ ಕನ್ನಡಿಗರಿಗೆ ಮೀಸಲಿರುವಂತೆ ಕಾನೂನನ್ನು ರೂಪಿಸಲು ಸಾಧ್ಯವೇ ಎಂಬ ಅಂಶವನ್ನು ಪರಿಗಣಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗೆ ಮನವಿ ಮಾಡಿದೆ ಎಂದು ಬಿಳಿಮಲೆ ತಿಳಿಸಿದರು.

ಕನ್ನಡ ಭಾಷೆ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಮನೆ ಮತ್ತು ಶಾಲೆಗಳಿಗೆ ಕನ್ನಡ ಭಾಷೆ ಬೇಕಾಗಿಲ್ಲ. ವಿದ್ವಾಂಸರಿಗೆ ಮಾತ್ರವೇ ಕನ್ನಡದ ಅವಶ್ಯಕತೆ ಇದೆ. ಆದರೆ, ವಿದ್ವಾಂಸರ ಕೃತಿಗಳಿಗೆ ಮಾರುಕಟ್ಟೆ ಇಲ್ಲದೆ, ಮಾರುಕಟ್ಟೆಗೆ ಕನ್ನಡ ಬೇಡದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕನ್ನಡ ಭಾಷೆ ಪತನದ ದಿಕ್ಕಿಗೆ ಸಾಗುತ್ತಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ ಎಂದು ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ಬಹುರಾಷ್ಟ್ರೀಯ ಕಂಪೆನಿಗಳು ಹೆಚ್ಚಾಗುತ್ತಿವೆ. ಇಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತಿವೆ. ಖಾಸಗಿ ವಲಯದಲ್ಲಿ ಗ್ರೂಪ್ ‘ಸಿ ಮತ್ತು ಡಿ’ ಹುದ್ದೆಗಳಲ್ಲಿ ಕನ್ನಡಿಗರನ್ನು ನೇಮಿಸುವಂತೆ ಮೀಸಲಾತಿ ಜಾರಿಗೆ ತಂದರೆ ಅದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸುವುದಿಲ್ಲ. ಆ ರೀತಿಯಾಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಹಿನ್ನಡೆ ಉಂಟಾಗುತ್ತಿದೆ. ಇದರಿಂದಾಗಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ರಾಜ್ಯಗಳ ಅಸ್ಮಿತೆಯೇ ಭಾರತದ ಒಕ್ಕೂಟ ವ್ಯವಸ್ಥೆಯ ತಳಪಾಯ. ಆದರೆ, ರಾಜ್ಯಗಳ ಅಸ್ಮಿತೆ ಪತನಮುಖಿಯಾಗುತ್ತಿದ್ದರೆ ಒಕ್ಕೂಟ ವ್ಯವಸ್ಥೆ ಭದ್ರವಾಗಿರಲು ಸಾಧ್ಯವೇ ಎಂದು ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದರು.

ಕನ್ನಡೇತರರಿಗೆ ಕನ್ನಡ ಕಲಿಸಲು ಹೊಸ ಬಗೆಯ ಪ್ರಯೋಗಗಳಾಗಬೇಕು. ಮತ್ತಷ್ಟು ವಿನೂತನವಾಗಿ ಕನ್ನಡ ಕಲಿಸುವ ಕಾರ್ಯವಾಗಬೇಕು. ಕನ್ನಡ ಕಲಿಕಾ ಕೇಂದ್ರಗಳು ಶಿಕ್ಷಕ ಕೇಂದ್ರಿತವಾಗುವುದಕ್ಕಿಂತ ವಿದ್ಯಾರ್ಥಿ ಕೇಂದ್ರಿತವಾಗಬೇಕು. ಆ ನಿಟ್ಟಿನಲ್ಲಿ ಹೊಸ ತಲೆಮಾರಿನ ಕನ್ನಡ ಶಿಕ್ಷಕರು ಯೋಚಿಸಬೇಕು ಎಂದು ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.

ಹಿರಿಯ ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಇವತ್ತಿನ ದಿನಗಳಲ್ಲಿ ಕನ್ನಡೇತರರಿಗಿಂತ ಮುಖ್ಯವಾಗಿ ಕನ್ನಡಿಗರಿಗೆ ಕನ್ನಡ ಕಲಿಸುವ ಅನಿವಾರ್ಯತೆ ಎದುರಾಗಿದೆ. ಅನ್ಯ ಭಾಷೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಭಾಷಾ ಸೌಹಾರ್ದತೆಯನ್ನು ಕಾಪಾಡುವ ಗುಣ ಕನ್ನಡ ಭಾಷೆ ಮತ್ತು ಕನ್ನಡಿಗರಿಗಿದೆ ಎಂದರು.

ಕನ್ನಡೇತರರು ಮತ್ತು ಕನ್ನಡಿಗರು ಇಬ್ಬರು ಕನ್ನಡ ಭಾಷೆಯನ್ನು ಕಲಿಯಬೇಕು. ಭಾಷೆ ಕಲಿಯಲು ಮಾತನಾಡುವುದು ಮುಖ್ಯ. ಮಾತನಾಡುವ ಕನ್ನಡ ಕಲಿತರೆ ಕನ್ನಡೇತರರು ನಮ್ಮ ಸಂಸ್ಕೃತಿಯೊಳಗೆ ಪ್ರವೇಶಿಸಿದಂತೆ. ಸಂಸ್ಕೃತಿಗೂ ಮತ್ತು ಭಾಷೆಗೂ ಅವಿನಾಭಾವ ಸಂಬಂಧವಿದೆ ಎಂದು ಹಂಪಾನಾ ಹೇಳಿದರು.

ಕಾರ್ಯಕ್ರಮದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿ ಪ್ರೊ.ಅಬ್ದುಲ್ ರೆಹಮಾನ್ ಪಾಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್ ಮತ್ತು ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News