ಮೂರು ಬಾರಿ ಗೆದ್ದರೂ ಕೆಲಸ ಮಾಡದ ಪಿ.ಸಿ.ಮೋಹನ್‍ಗೆ ವಿಶ್ರಾಂತಿ ಕೊಡಿ : ಸಿಎಂ ಸಿದ್ದರಾಮಯ್ಯ

Update: 2024-04-08 16:25 GMT
Photo : x/@siddaramaiah

ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಿ.ಸಿ.ಮೋಹನ್ ಮೂರು ಬಾರಿ ಗೆದ್ದರೂ ಕ್ಷೇತ್ರಕ್ಕೆ, ಬೆಂಗಳೂರಿಗೆ ಮೂರು ಕಾಸಿನ ಕೆಲಸ ಮಾಡಿಲ್ಲ. ಹೀಗಾಗಿ ಇವರಿಗೆ ಈ ಬಾರಿ ಮನೆಗೆ ಕಳುಹಿಸಿ ವಿಶ್ರಾಂತಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸೋಮವಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಪರವಾಗಿ ರಾಜಾಜಿನಗರ, ತಿಮ್ಮಯ್ಯ ರಸ್ತೆ ಸೇರಿ ಹಲವು ಕಡೆ ಬಿರುಸಿನ ಪ್ರಚಾರ ಮಾಡಿ ಅವರು ಮಾತನಾಡಿದರು.

ಪಿ.ಸಿ.ಮೋಹನ್ ಮೂರು ಬಾರಿ ಇಲ್ಲಿಂದ ಗೆದ್ದಿದ್ದಾರೆ. ಸಂಸತ್ತಿನಲ್ಲಿ ಮೂರು ದಿನವಾದರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ? ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಒಂದು ದಿನವೂ ಪ್ರಶ್ನಿಸಿಲ್ಲ. ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಅಭಿವೃದ್ಧಿಯ ಬಗ್ಗೆ ಪಿ.ಸಿ.ಮೋಹನ್ ಒಂದೇ ಒಂದು ದಿನವಾದರೂ ಮಾತಾಡಿದ್ದಾರಾ ಎಂದು ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ, ನೆರೆದಿದ್ದ ಜನ ಸಮುದಾಯ ಇಲ್ಲ ಇಲ್ಲ ಎಂದು ಕೂಗಿತು.

ರಾಜ್ಯದ ಎಲ್ಲ ಕಡೆ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಮೋದಿ ಗಾಳಿ ಎಲ್ಲೂ ಇಲ್ಲ. ಹೀಗಾಗಿ ಈ ಬಾರಿ ಮನ್ಸೂರ್ ಅಲಿ ಖಾನ್ ಗೆಲ್ಲುತ್ತಾರೆ. ನಿಮ್ಮ ಆಶೀರ್ವಾದ ಇರಲಿ ಎಂದು ಸಿದ್ದರಾಮಯ್ಯ ಕೋರಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಭ್ಯರ್ಥಿ ಮನ್ಸೂರ್ ಅಲಿಖಾನ್ ಸೇರಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News