ಬೆಂಗಳೂರು | ‘ಮಳೆ ನೀರು’ ಒಳಚರಂಡಿಗೆ ಸೇರ್ಪಡೆ : ʼದಂಡ ಅಭಿಯಾನʼ ಆರಂಭಿಸಿದ ಜಲಮಂಡಳಿ

Update: 2024-05-27 16:06 GMT

ಬೆಂಗಳೂರು : ಮಳೆ ನೀರು ಇಂಗಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಳೆ ನೀರು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡುವವರ ವಿರುದ್ದ ದಂಡ ಅಭಿಯಾನ ನಡೆಸಲಾಗುತ್ತಿದೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆನೀರು ಕೋಯ್ಲು ಪದ್ದತಿಯ ಅಳವಡಿಕೆಯ ಮೂಲಕ ನೀರನ್ನು ಸದ್ಬಳಕೆ ಮಾಡುವುದು ಕಡ್ಡಾಯವಾಗಿದೆ. ಆದರೆ, ಹಲವಾರು ಕಡೆಗಳಲ್ಲಿ ಈ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡುವ ಮೂಲಕ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಲಾಗುತ್ತಿದೆ ಎಂದರು.

ನಗರದಲ್ಲಿ ಬೀಳುವ ಮಳೆಯನ್ನು ಸಮರ್ಪಕವಾಗಿ ಬಳಕೆ ಮಾಡುವುದರಿಂದ ನಗರದ ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಬಹುದಾಗಿದೆ. ಕೆಲವಡೆ ಮಳೆ ನೀರು ಕೊಯ್ಲು ಪದ್ದತಿಯ ಮೂಲಕ ಸಂಗ್ರಹಿಸಲಾದ ನೀರನ್ನು ಒಳಚರಂಡಿಗೆ ನೇರವಾಗಿ ಹರಿಯಬಿಡಲಾಗುತ್ತಿದೆ. ಇದರಿಂದ ಮಳೆ ನೀರು ಒಳಚರಂಡಿಗೆ ಸೇರ್ಪಡೆಗೊಂಡು ಪೋಲಾಗುವುದಲ್ಲದೇ, ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಅವರು ತಿಳಿಸಿದರು.

ಮಳೆ ನೀರು ಪೋಲಾಗುವುದನ್ನು ತಡೆಗಟ್ಟುವುದು ಹಾಗೂ ಜನರು ಮಳೆ ನೀರನ್ನು ಸಮರ್ಪಕವಾಗಿ ಹಿಡಿದು ಅದನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಮೀಕ್ಷೆ ಮಾಡಿ ದಂಡ ವಿಧಿಸಿ: ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ನೇರವಾಗಿ ಒಳಚರಂಡಿಗೆ ಮಳೆ ನೀರನ್ನು ಹರಿಸುತ್ತಿರುವ ಬಗ್ಗೆ ಸರ್ವೇ ಮಾಡಬೇಕು. ನೇರವಾಗಿ ಒಳಚರಂಡಿಗೆ ಸೇರುತ್ತಿರುವ ನೀರನ್ನು ತಡೆಗಟ್ಟಬೇಕು ಹಾಗೂ ಹೀಗೆ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚನೆ ಅಧಿಕಾರಿಗಳಿಗೆ ನೀಡಿದರು.

ಮಳೆ ನೀರು ಕೊಯ್ಲು ಹಾಗೂ ಇಂಗು ಗುಂಡಿ ನಿರ್ಮಾಣದ ಬಗ್ಗೆ ಸಮೀಕ್ಷೆ ನಡೆಸಿ: ಮಳೆ ನೀರು ಕೋಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಇದುವರೆಗೂ ಅಳವಡಿಸಿಕೊಳ್ಳದೇ ಇರುವಂತಹ ಕಟ್ಟಡಗಳ ಬಗ್ಗೆ ಜಲಮಂಡಳಿಯ ವತಿಯಿಂದ ಸಮೀಕ್ಷೆಯನ್ನು ನಡೆಸಲಾಗುವುದು. ಈ ಮೂಲಕ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳದೇ ಇರುವ ಹಾಗೂ ಅಳವಡಿಸಿಕೊಳ್ಳುವ ಮೂಲಕ ಆಗುತ್ತಿರುವ ಅನುಕೂಲತೆಗಳ ಬಗ್ಗೆ ಮಾಹಿತಿಯನ್ನು ಕ್ರೋಡೀಕರಿಸಲಾಗುವುದು ಎಂದು ಅವರು ತಿಳಿಸಿದರು.

ನಗರದಲ್ಲಿ ಬೀಳುತ್ತಿರುವ ಮಳೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವ ಮೂಲಕ ನಗರದ ನೀರಿನ ಅಭಾವವನ್ನು ನಿರ್ವಹಿಸಲು ಸಾಧ್ಯವಿದೆ. ಈ ಬಗ್ಗೆ ಮಾನ್ಯ ಉಪಮುಖ್ಯಮಂತ್ರಿಗಳು ನೀಡಿರುವ ನಿರ್ದೇಶನದಂತೆ ಮುಂಜಾಗ್ರತಾ ಕ್ರಮಗಳಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ನೀರಿನ ಕೊರತೆಯನ್ನು ನಿರ್ವಹಿಸಿದ ರೀತಿಯಲ್ಲಿಯೇ ಮಳೆಗಾಲವನ್ನು ನಿರ್ವಹಿಸಲು ಇದು ಬಹಳ ಮುಖ್ಯ ಕ್ರಮವಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News