ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಪರಾಗ್ವೆ, ಕಾಂಬೋಡಿಯ ನಿಯೋಗ ಭೇಟಿ
Update: 2025-04-04 21:18 IST

ಬೆಂಗಳೂರು : ಭಾರತದಲ್ಲಿನ ಪರಾಗ್ವೆ ರಾಯಭಾರಿ ಫ್ಲೆಮಿಂಗ್ ಡುವಾರ್ಟೆ ಹಾಗೂ ಕಾಂಬೋಡಿಯ ಕೌನ್ಸುಲ್ ಕಾರ್ತಿಕ್ ತಲ್ಲಂ ನೇತೃತ್ವದ ನಿಯೋಗ ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ(ಬಿಸಿಯು) ಶುಕ್ರವಾರದಂದು ಭೇಟಿ ನೀಡಿದ್ದು, ಶೈಕ್ಷಣಿಕ ಸಹಭಾಗಿತ್ವ ಕುರಿತು ವಿಚಾರ ವಿನಿಮಯ ನಡೆಸಿದೆ.
ಇದೇ ವೇಳೆ ವಿವಿಯ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಟಿ.ಜವರೇಗೌಡ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಬಿ.ರಮೇಶ್, ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ನಿಯೋಗದ ಸದಸ್ಯ ನವಾಬ್ ನಜಾಫ್ ಆಲಿ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ, ಸ್ಮಾರ್ಟ್ ಸಿಟಿ ಯೋಜನೆ ಮುಂತಾದ ಕ್ಷೇತ್ರಗಳಲ್ಲಿ ಬಿಸಿಯು ಈಗಾಗಲೇ 12 ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ಜಂಟಿ ಸಹಭಾಗಿತ್ವ ಮಾಡಿಕೊಂಡಿದೆ. ಉನ್ನತ ಶಿಕ್ಷಣ ಸಚಿವರ ಭೇಟಿಯ ನಂತರ ಕಾಂಬೋಡಿಯಾ ಮತ್ತು ಪರಾಗ್ವೆ ದೇಶಗಳ ಜೊತೆಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳುವುದಾಗಿ ವಿವಿಯ ಮೂಲಗಳು ತಿಳಿಸಿವೆ.