ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದ ಬಗ್ಗೆ ಜಗತ್ತು ಎಚ್ಚೆತ್ತುಕೊಳ್ಳಬೇಕಿದೆ: ಎ.ಪಿ ಉಸ್ತಾದ್

ಬೆಂಗಳೂರು: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯಗಳು ರಾಕ್ಷಸೀಯವಾಗಿದ್ದು, ವಿಶ್ವದ ಜನತೆಯು ಇದರ ವಿರುದ್ಧ ಜಾಗೃತಗೊಳ್ಳಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆದ ರೂಹಾನಿ ಇಜ್ತಿಮಾದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಪ್ಪಂದಗಳನ್ನು ಉಲ್ಲಂಘಿಸಿ ಇಸ್ರೇಲ್ ಮುಂದುವರಿಸುತ್ತಿರುವ ಹಿಂಸಾಚಾರವು ದುರಹಂಕಾರದ ಸಂಕೇತವಾಗಿದ್ದು, ಜಗತ್ತು ಇದನ್ನು ಒಟ್ಟಾಗಿ ಎದುರಿಸಬೇಕೆಂದು ಹೇಳಿದರು.
ಪ್ರಾರ್ಥನೆಯು ವಿಶ್ವಾಸಿಗಳ ಅತ್ಯಂತ ದೊಡ್ಡ ಆಯುಧವಾಗಿದ್ದು, ಪವಿತ್ರ ತಿಂಗಳಲ್ಲಿ ನಾವು ವಿಶ್ವ ಶಾಂತಿ ಮತ್ತು ಫೆಲಸ್ತೀನ್ ವಿಮೋಚನೆಗಾಗಿ ಪ್ರಾರ್ಥಿಸಬೇಕೆಂದು ಎ.ಪಿ ಉಸ್ತಾದರು ಕರೆ ನೀಡಿದರು.
ಮಾ.21 ಸಂಜೆ 4 ಗಂಟೆಗೆ ಆರಂಭವಾದ ಕಾರ್ಯಕ್ರಮ ಮಾ.22 ಬೆಳಗಿನ ಜಾವ 4 ಗಂಟೆಗೆ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ, ಡಾ. ಮುಹಮ್ಮದ್ ಅಫ್ಸಲುದ್ದೀನ್ ಜುನೈದ್(ಸಿರಾಜ್ ಬಾಬಾ), ಹಝ್ರತ್ ಮೌಲಾನಾ ಮುಹಮ್ಮದ್ ಹಾರೂನ್, ಸ್ಪೀಕರ್ ಯು.ಟಿ ಖಾದರ್, ಸಿ.ಎಂ. ಇಬ್ರಾಹಿಂ, ಎನ್.ಕೆ.ಎಂ ಶಾಫಿ ಸಅದಿ, ಎಸ್.ಅಬ್ದುಲ್ ರಹ್ಮಾನ್ ಹಾಜಿ ಮತ್ತಿತರರು ಮಾತನಾಡಿದರು.
ಸೈಯ್ಯದ್ ಝೈನುದ್ದೀನ್ ತಂಙಳ್ ಕೂರಿಕ್ಕುಝಿ ದಿಕ್ರ್ ಮಜ್ಲಿಸ್ ಮತ್ತು ಸಮಾರೋಪ ಪ್ರಾರ್ಥನೆಗೆ ನೇತೃತ್ವ ವಹಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಶಬೀರಲಿ ಹಝ್ರತ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ಮಾನ್ ಶರೀಫ್ ಸ್ವಾಗತಿಸಿ, ಜಲೀಲ್ ಹಾಜಿ ಧನ್ಯವಾದ ಅರ್ಪಿಸಿದರು.



