ಬೀದರ್ | ಅಕ್ಷರ ದಾಸೋಹ ನೌಕರರ ಗೌರವ ಧನ ಹೆಚ್ಚಿಸಲು ಮನವಿ

ಬೀದರ್ : ಅಕ್ಷರ ದಾಸೋಹ ನೌಕರರ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಅಕ್ಷರ ದಾಸೋಹ ನೌಕರರ ಸಂಘವು ಮನವಿ ಮಾಡಿದೆ.
ಇಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಫೆ.28 ರಿಂದ ಮಾ.1 ರವರೆಗೆ ಕೇರಳದಲ್ಲಿ ನಡೆದ ಅಖಿಲ ಭಾರತ ಸಭೆಯಲ್ಲಿನ ತೀರ್ಮಾನದಂತೆ ಅಕ್ಷರ ದಾಸೋಹ ನೌಕರರ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ.
ಕೇಂದ್ರ ಸರ್ಕಾರ ಬರೀ 600 ರೂ. ಕೊಟ್ಟು ನಮ್ಮನ್ನು ದುಡಿಸಿಕೊಳ್ಳುತ್ತಿದೆ. 2010 ರಿಂದ ಕೇಂದ್ರ ಸರ್ಕಾರ ಒಂದು ನಯಾಪೈಸೆ ಕೂಡ ಹೆಚ್ಚಳ ಮಾಡಿಲ್ಲ. ದಿನೆ ದಿನೇ ಕೆಲಸ ಹೆಚ್ಚಾಗುತ್ತಿದೆ. ಹಾಲು, ಗಂಜಿ ಹಾಗೂ ಅಡುಗೆ ಮಾಡಿ ಮೊಟ್ಟೆ ಬೇಯಿಸಿ ಸುಲಿದು ಪಾತ್ರೆ ತೊಳೆಯಬೇಕಾಗಿದೆ. ಇದಲ್ಲದೆ ಇನ್ನಿತರ ಕೆಲಸ ಹೆಚ್ಚಾಗುತ್ತಿದೆ. ಕೆಲಸಕ್ಕೆ ತಕ್ಕಂತೆ ನಮಗೆ ಗೌರವ ಧನ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಖಾ ಹಮಿಲಾಪೂರಕರ್, ಜಿಲ್ಲಾ ಕಾರ್ಯದರ್ಶಿ ರುಕ್ಮಿಣಿ ರತನ್, ಖಜಾಂಚಿ ಪುಷ್ಪಾ ಮಜಿಗೆ, ಜಿಲ್ಲಾ ಸಹ ಕಾರ್ಯದರ್ಶಿ ಶಿವುಗೊಂಡ, ಸಂಗಮಿತ್ರಾ, ಕಂಶಿಲಾ, ಕಾರ್ಯಕರ್ತರಾದ ಮಲ್ಲಮ್ಮಾ, ಹಲೀಮಾ, ಸವಿತಾ, ಶ್ರೀದೇವಿ ಹಾಗೂ ಶಶಿಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.