ಬೀದರ್ | ದೇವರ ದಾಸಿಮಯ್ಯ ಜಯಂತಿ ಅದ್ಧೂರಿಯಾಗಿ ಆಚರಿಸಲು ನಿರ್ಧಾರ : ಶಿವಕುಮಾರ್ ಶೀಲವಂತ್

ಶಿವಕುಮಾರ್ ಶೀಲವಂತ್
ಬೀದರ್ : ಏ.2 ರಂದು ದೇವರ ದಾಸಿಮಯ್ಯ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಜಯಂತಿ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 9: 30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ರಥ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಈ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಶಿವಾಜಿ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕರಿಯಪ್ಪ ಸರ್ಕಲ್ ಮೂಲಕ ಹಾದು ಚನ್ನಬಸವ ಪಟ್ಟದೇವರು ರಂಗಮಂದಿರಕ್ಕೆ ತಲುಪಲಿದೆ. ರಂಗಮಂದಿರದಲ್ಲಿ 11:30 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಜಿಲ್ಲಾಡಳಿತದಿಂದ ಆದೇಶ ನೀಡಲಾಗುವುದು. ಎರಡು ದಿವಸ ನಗರದ ಎಲ್ಲಾ ಸರ್ಕಲ್ಗಳಿಗೆ ದೀಪಾಲಂಕಾರ ಮಾಡಬೇಕು. ಹಾಗೆಯೇ ಜಯಂತಿಗೆ 3 ಕಲಾ ತಂಡಗಳು ನೀಡಲಾಗುವುದು. ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಶೇಖರ್ ಅಮಲಾಪೂರೆ, ರಾಮಕೃಷ್ಣ ಸಾಳೆ, ಮೋಹನ್ ಬಾಚಾ, ಮಾಹದೇವ್ ಚೌಡೆಕರ್, ಶರಣಪ್ಪ ಹಾವಗೊಂಡ್, ಪ್ರಶಾಂತ್ ಸಿಂದ್ರೆ, ಅಶೋಕ್ ಎಲಿ, ಬಸವರಾಜ್ ನೇಕಾರ ಹಾಗೂ ಬಾಬುರಾವ್ ಕ್ಯಾಡೆ ಮತ್ತು ಇತರೆ ಸಮಾಜದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.