ಬೀದರ್ | ಮೂಲಭೂತ ಸೌಕರ್ಯ ಒದಗಿಸಲು ಪೌರಾಯುಕ್ತರಿಗೆ ಮನವಿ

ಬೀದರ್ : ನಗರದ ಶಾಹಾಪೂರ ಗೇಟ್ ವಾರ್ಡ್ ನಂಬರ್ 31 ರಲ್ಲಿ ಸಾರ್ವಜನಿಕರು ಸುಮಾರು 3 ರಿಂದ 4 ವರ್ಷಗಳಿಂದ ವಾಸವಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಅಂಬೇಡ್ಕರ್ ಯುವ ಸೇನೆ ಒತ್ತಾಯಿಸಿದೆ.
ಇಂದು ನಗರ ಸಭೆ ಪೌರಾಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಶಾಹಾಪೂರ ಗೇಟ್ ವಾರ್ಡ್ ನಂಬರ್ 31 ರ ವಾರ್ಡ್ ನಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಒಳಚರಂಡಿ, ಹಾಗೂ ಬೀದಿದೀಪ ಇಲ್ಲದೆ ಜನ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಮತದಾನದ ಸಮಯದಲ್ಲಿ ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಅವರಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿಲ್ಲ ಎಂದು ದೂರಿದರು.
ಕೂಡಲೇ ಈ ವಾರ್ಡ್ ನಲ್ಲಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ನಿತೀಶ ಉಪ್ಪೆ, ರಾಜಕುಮಾರ್ ಗುನ್ನಳ್ಳಿ, ಸಂಜೀವಕುಮಾರ್ ಮೊರೆ, ಪ್ರಭಾಕರ್ ಎಕಂಬೇಕರ್, ದಿನೇಶ್, ಶಿರೋಮಣಿ, ಧನರಾಜ್, ಫಿಜರ್, ದಯಾನಂದ್ ಹಾಗೂ ಕೈಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.