ಮೂಡಿಗೆರೆ: ಮನೆ ಮಾಲಕನಿಗೆ ಖಾರದ ಪುಡಿ ಎರಚಿ, ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಸುಲಿಗೆ

Update: 2024-02-16 09:27 GMT

ಚಿಕ್ಕಮಗಳೂರು, ಫೆ.16: ನಾಲ್ವರು ಅಪರಿಚಿತರ ತಂಡವೊಂದು ಮನೆ ಮಾಲಕನಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಮಾರಕಾಯುಧ ಇಟ್ಟು ಬೆದರಿಸಿ ಮನೆಯಲ್ಲಿದ್ದ ಸುಮಾರು 5 ಲಕ್ಷ ರೂ. ನಗದು, 30 ಗ್ರಾಂನ ಮಾಂಗಲ್ಯ ಸರವನ್ನು ಸುಲಿಗೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬವರ ಮನೆಯಲ್ಲಿ ಈ ಸುಲಿಗೆ ನಡೆದಿದೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ನಾಲ್ವರು ಅಪರಿಚಿತ ಯುವಕರ ತಂಡ ಮನೆಯ ಮೇಲೆ ದಾಳಿ ನಡೆಸಿ ಮನೆ ಮಾಲಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ನಗ-ನಗದು ಸುಲಿಗೆ ಮಾಡಿದ್ದಾರೆ ಎಂದು ದೂರಲಾಗಿದೆ.

ಈ ವೇಳೆ ತಡೆಯಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬವರ ಕೈಗೆ ಕಳ್ಳರು ಹರಿತವಾದ ಆಯುಧದಿಂದ ಗಂಭೀರ ಹಲ್ಲೆ ಮಾಡಿದ್ದಾರೆ. ಈ ವೇಳೆ ಕಾರ್ಮಿಕ ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ ಕಳ್ಳರ ಪೈಕಿ ಮೂವರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಪರಾರಿಯಾಗುವ ಯತ್ನದಲ್ಲಿ ಓರ್ವ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತು ಕೂತಿದ್ದ ಎನ್ನಲಾಗಿದ್ದು, ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News