ಸೇವೆಗಳು ಸಮಾಜಕ್ಕೆ ಮಾದರಿಯಾಗಲಿ: ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ

Update: 2024-05-19 17:59 GMT

ಮಂಗಳೂರು: ನಮ್ಮ ಪ್ರತಿಯೊಂದು ಸೇವೆಗಳು ಸಮುದಾಯಕ್ಕೆ ಮತ್ತು ಸಮಾಜಕ್ಕೆ ಮಾದರಿಯಗಬೇಕಿದೆ. ಈ ನಿಟ್ಟಿನಲ್ಲಿ ಕೆಸಿಎಫ್ ಸಂಘಟನೆಯು ಕಳೆದ ಹತ್ತು ವರ್ಷದಲ್ಲಿ ಶ್ಲಾಘನೀಯ ಸೇವೆಯನ್ನು ಮಾಡಿದೆ ಎಂದು ಭಾರತದ ಗ್ರಾಂಡ್ ಮುಫ್ತಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.

ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ದಶಮಾನೋತ್ಸವ ಪ್ರಯುಕ್ತ ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೆಸಿಎಫ್ ಅನೇಕ ಸಮಾಜಮುಖಿ ಯೋಜನೆಗಳನ್ನು ಮಾಡಿವೆ. ಮುಂದೆಯೂ ಮಾಡಲು ಕಟಿಬದ್ಧವಾಗಿದೆ. ಉತ್ತರ ಕರ್ನಾಟಕದಲ್ಲಿ ದೀನೀ ಸೇವೆಯ ಜೊತೆಗೆ ಕಾರುಣ್ಯ ಯೋಜನೆಗಳ ಅನುಷ್ಠಾನಕ್ಕೆ ಕೆಸಿಎಫ್ ಶಕ್ತಿ ತುಂಬಿದೆ. ಮುಸ್ಲಿಮರನ್ನು ತೀವ್ರವಾದಿಗಳು ಎಂದು ಈಗಲೂ ತಪ್ಪಾಗಿ ಬಿಂಬಿಸಲಾಗುತ್ತಿದೆ. ಮುಸ್ಲಿಮರು ಸಹಿಷ್ಣುಗಳು, ಸಮಾಜದ ಉನ್ನತಿಗಾಗಿ ಶ್ರಮಿಸುವವರು ಎಂಬುದಕ್ಕೆ ಕೆಸಿಎಫ್ ಸಹಿತ ವಿವಿಧ ಸಂಘಟನೆಗಳು ನಡೆಸುವ ಸಾಮಾಜಿಕ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ ಎಂದು ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ನುಡಿದರು.

ಅಂತಾರಾಷ್ಟ್ರೀಯ ಸಮಾವೇಶದ ಸಮರೋಪ ಉದ್ಘಾಟಿಸಿ ಮಾತನಾಡಿದ ಸುನ್ನಿ ಜಂ ಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ "ಉದ್ಯೋಗ ಅರಸಿಕೊಂಡು ಗಲ್ಫ್ ರಾಷ್ಟ್ರಗಳಿಗೆ ತೆರಳಿದ ಸುನ್ನಿ ಕಾರ್ಯಕರ್ತರು ಸ್ಥಾಪಿಸಿದ ಕೆಸಿಎಫ್ ಸಂಘಟನೆಯ ಸೇವೆ ಅಪಾರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದೀನಿ ಸೇವೆಗೈಯ್ಯುವಲ್ಲಿ ಕೆಸಿಎಫ್ ಮುಂಚೂಣಿಯಲ್ಲಿದೆ ಎಂದರು.

ಮೌಲಾನಾ ಪೆರೋಡ್ ಅಬ್ದುರ‌್ರಹ್ಮಾನ್ ಸಖಾಫಿ ಮುಖ್ಯಭಾಷಣಗೈದರು. ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಸಂದೇಶವನ್ನು ವಾಚಿಸಲಾಯಿತು. ಸೈಯದ್ ಕುಂಬೋಳ್ ತಂಙಳ್, ಶೇಕ್ ಸೈಯದ್ ಇಬ್ರಾಹೀಂ ಖಲೀಲ್ ತಂಙಳ್ ಅಲ್‌ಬುಖಾರಿ, ಉಳ್ಳಾಲ ಖಾಝಿ ಸೈಯದ್ ಕೂರತ್ ತಂಙಳ್, ಯೆನೆಪೋಯ ವಿವಿಯ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲ ಕುಂಞಿ, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ, ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಾಫಿ ಸಅದಿ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ, ಮಾಜಿ ಶಾಸಕ ಮೊಯ್ದಿನ್ ಬಾವಾ, ಫೈನಾನ್ಸಿಯಲ್ ಕಂಟ್ರೋಲರ್ ಅಲಿ ಮುಸ್ಲಿಯಾರ್ ಬಹರೈನ್, ಹುಸೈನ್ ಸಅದಿ ಕೆಸಿ ರೋಡ್, ಅಬ್ದುರ‌್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬೂಸುಫಿಯಾನ್ ಮದನಿ, ಎಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫಿಯಾನ್ ಸಖಾಫಿ, ಜಿಎಂ ಕಾಮಿಲ್ ಸಖಾಫಿ, ಕೆಕೆಎಂ ಕಾಮಿಲ್ ಸಖಾಫಿ, ಕೆಸಿಎಫ್ ದಶಮಾನೋತ್ಸವ ಸಮ್ಮೇಳನ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕರ್ ರೈಸ್ಕೋ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಕೀರ್ ಹಾಜಿ ಹೈಸಮ್ ಸ್ಟೀಲ್, ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಸ್ವಾಗತ ಸಮಿತಿಯ ಕಾರ್ಯನಿರ್ವಾಹಕ ಸಂಚಾಲಕ ಸಲೀಂ ಕನ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ಸ್ವಾಗತಿಸಿದರು. ಎಸ್ಪಿ ಹಂಝ ಸಖಾಫಿ, ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕೆಸಿಎಫ್ ಅಂತಾರಾಷ್ಟ್ರೀಯ ವೇದಿಕೆಯ ಅಧ್ಯಕ್ಷ ಡಿಪಿ ಯೂಸುಫ್ ಸಖಾಫಿ ಬೈತಾರ್ ಕಾರ್ಯಕ್ರಮ ನಿರ್ವಹಿಸಿದರು.

ಕೆಸಿಎಫ್ ದಶಮಾನೋತ್ಸವ ಪ್ರಯುಕ್ತ ಅರ್ಹ ಕುಟುಂಬಕ್ಕೆ ಮನೆ ನಿರ್ಮಾಣ, ಸರಕಾರಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಕೊಳವೆ ಬಾವಿ ಸಹಿತ ವಿವಿಧ ೧೦ ಯೋಜನೆಗಳನ್ನು ಸಮಾಜಕ್ಕೆ ಅರ್ಪಿಸಲಾಯಿತು. ರಕ್ತದಾನ ಶಿಬಿರದಲ್ಲಿ 250ಕ್ಕೂ ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕೆಸಿಎಫ್ ಇಹ್ಸಾನ್ ಸೇವಕರನ್ನು ಸನ್ಮಾನಿಸಲಾಯಿತು. ಕುಟುಂಬ ಸಂಗಮ, ವಿದ್ಯಾರ್ಥಿ ಸಮಾವೇಶ, ಎಕ್ಸಲೆನ್ಸಿ ಮೀಟ್, ಪ್ರತಿನಿಧಿ ಸಮ್ಮೇಳನವೂ ನಡೆಯಿತು.






 








 


 


 


 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News