ಕೆ.ಸಿ. ಬೆನ್ನಿ ಅವರ ಕಾರ್ಯಕ್ಷಮತೆಗಾಗಿ ತಿಂಗಳ ಪೊಲೀಸ್ ಪ್ರಶಸ್ತಿ

ಮಂಗಳೂರು, ಎ.13: ರಾಜ್ಯ ಮೀಸಲು ಪೊಲೀಸ್ ತಂಡದ ಏಳನೆ ಮಂಗಳೂರು ಪಡೆಯ ಸಹಾಯಕ ಉಪ ನಿರೀಕ್ಷಕ ಕೆ.ಸಿ ಬೆನ್ನಿಯವರ ಕಾರ್ಯ ಕ್ಷಮತೆಗಾಗಿ ಅವರಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಂಡೆಂಟ್ ಸತ್ಯನಾರಾಯಣ ಅವರು ತಿಂಗಳ ಪೊಲೀಸ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವಿಭಾಗದ ಮಂಗಳೂರು ಏಳನೆ ಪಡೆಯ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ‘ಗಸ್ತಿನ ಪಡೆಯೊಳಗೊಬ್ಬ, ಶಿಸ್ತಿನ ಅಧಿಕಾರಿ’ ಎಂಬ ಪ್ರಶಂಸೆಗೆ ಪಾತ್ರರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಸಿ. ಬೆನ್ನಿ ಅವರು 1997ರಂದು ರಾಜ್ಯದ ಮೀಸಲು ಪೊಲೀಸ್ ವಿಭಾಗ ಮೈಸೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಭರ್ತಿ ಗೊಂಡಿದ್ದರು. ನಾಲ್ಕು ವರ್ಷಗಳ ಸೇವೆಯ ಬಳಿಕ ಮಂಗಳೂರಿಗೆ ವರ್ಗಾವಣೆ ಗೊಂಡು 2015 ರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಮುಂಬಡ್ತಿ ಪಡೆದ ಕೆ.ಸಿ ಬೆನ್ನಿ ಯವರು ಮಂಗಳೂರಿನಲ್ಲಿಯೇ ಕರ್ತವ್ಯಕ್ಕೆ ನಿಯೋಜನೆಗೊಂಡು ಬಳಿಕ ಕೆ.ಸಿ, ಬೆನ್ನಿಯವರಿಗೆ 2022 ರಲ್ಲಿ ಎಆರ್ಎಸ್ಐ ಹುದ್ದೆಗೆ ಮುಂಬಡ್ತಿ ನೀಡಿದ್ದು ಹಾಸನಕ್ಕೆ ವರ್ಗಾವಣೆ ಗೊಂಡಿದ್ದರು, ಮತ್ತೆ ಒಂದು ವರ್ಷ ಆರು ತಿಂಗಳ ಕಾಲ ಹಾಸನ ದಲ್ಲಿ ಸೇವೆ ಸಲ್ಲಿಸಿ 2023 ನವೆಂಬರ್ ತಿಂಗಳಲ್ಲಿ ಮರಳಿ ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಇಲಾಖೆಯೊಳಗಿನ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರಲ್ಲದೆ, ಪಡೆಯ ಕೇಂದ್ರ ಸ್ಥಾನದ ಶಿಬಿರ ನಾಯಕರ ಕಚೇರಿಯ ದಾಸ್ತಾನು ಕೊಠಡಿಯಲ್ಲಿ ಸಲ್ಲಿಸುತ್ತಿದ್ದ ದೀರ್ಘಾವಧಿಯ ಸೇವೆ ಸಲ್ಲಿಸಿದ್ದಾರೆ. ಚುನಾವಣೆಯಂತಹ ಬಿರುಸಿನ ಕರ್ತವ್ಯ ಸೇರಿದಂತೆ ಇಲಾಖೆಯೊಳಗಡೆ ನಡೆಯುತ್ತಿದ್ದ ಪೊಲೀಸ್ ರಿಕ್ರೂಟ್ಮೆಂಟ್, ಪೊಲೀಸ್ ಕ್ರೀಡೋತ್ಸವ ಮತ್ತಿತರ ಉನ್ನತ ಅಧಿಕಾರಿಗಳ ಭೇಟಿ ಸಂದರ್ಭಗಳಲ್ಲಿ ಕೆ.ಸಿ. ಬೆನ್ನಿಯವರ ಕಾರ್ಯವೈಖರಿ ಪ್ರಮುಖವಾಗಿದ್ದು, ಹಿರಿಯ ಅಧಿಕಾರಿಗಳಿಂದ ಹಲವಾರು ಫಾರಿತೋಷಕ ಫಲಕಗಳಿಗೆ ಭಾಜನರಾಗಿದ್ದರು.
ರಕ್ತದಾನದ ಮೂಲಕವೂ ಗುರುತಿಸಿಕೊಂಡಿರುವ ಕೆ.ಸಿ. ಬೆನ್ನಿಯವರು, ಸತತ ಮೂವತ್ತು ಬಾರಿ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇಲಾಖೆಯ ವಸತಿಗೃಹವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡದ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಮನೆಯೊಳಗೆ ಪ್ರವೇಶಿಸಿ ವಿದ್ಯುತ್ ಸ್ವಿಚ್ಗಳನ್ನು ಬಂದ್ ಮಾಡುವುದರೊಂದಿಗೆ ಅಡುಗೆ ಕೋಣೆಯೊಳಗೆ ತುಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದರು.