ಗಗನಸಖಿ ಜತೆ ಅಸಭ್ಯ ವರ್ತನೆ: ವಿಮಾನಯಾನಿಯ ಬಂಧನ
Update: 2023-11-20 07:40 IST

Photo: PTI
ಬೆಂಗಳೂರು: ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದ ಗಗನಸಖಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯ ರವೀಂದರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಬಳಿಕ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.
ಪಾನಮತ್ತನಾಗಿದ್ದ ಪ್ರಯಾಣಿಕ ಗಗನಸಖಿ ಜತೆ ಅಸಭ್ಯವಾಗಿ ವರ್ತಿಸಿದ್ದು, ಎಚ್ಚರಿಕೆ ನೀಡಿದ ಬಳಿಕವೂ ಪದೇ ಪದೇ ಆಕೆಯ ಕೈ ಹಿಡಿದು ಕಿರುಕುಳ ನೀಡಿದ ಎಂದು ಇಂಡಿಗೊ ಅಧಿಕಾರಿ ವರುಣ್ ಕುಮಾರ್ ಹೇಳಿದ್ದಾರೆ.
ಈ ಅಸಭ್ಯ ವರ್ತನೆಯನ್ನು ಗಮನಿಸಿದ ಸಹ ಪ್ರಯಾಣಿಕ, ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ವಿಮಾನದ ಕ್ಯಾಪ್ಟನ್, ಈತನನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿದರು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ವಿಮಾನ ಸಿಬ್ಬಂದಿ ದೂರು ದಾಖಲಿಸಿದರು.ಇಂಡಿಗೊ ಅಧಿಕಾರಿ ವರುಣ್ ಕುಮಾರ್ ಈ ಘಟನೆಯನ್ನು ಶನಿವಾರ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಅಧಿಕೃತವಾಗಿ ವರದಿ ಮಾಡಿದ್ದು, ಆರೋಪಿ ಸಿಂಗ್ ನನ್ನು ಭಾನುವಾರ ಬಂಧಿಸಲಾಗಿತ್ತು.