ಕುವೆಂಪು ಬರೆದಿರುವ ನಾಡಗೀತೆಯನ್ನು ವಿಜಯೇಂದ್ರ ಸರಿಯಾಗಿ ಓದಲಿ: ಡಿ.ಕೆ.ಶಿವಕುಮಾರ್

ಗದಗ : ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರಿಯಾಗಿ ಓದಲಿ. ಯಾರು, ಯಾರು ಸೇರಿದರೆ ನಮ್ಮ ನಾಡು ಶಾಂತಿಯ ತೋಟ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ‘ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು’ ಎಂಬ ನೀತಿ ಅನುಸರಿಸಲು ಹೊರಟು ಕುವೆಂಪು ಕಲ್ಪಿಸಿದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿರುವ ಟ್ವೀಟ್ ಕುರಿತು ರವಿವಾರ ಗದಗದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಮುಸ್ಲಿಂ, ಸಿಖ್, ಜೈನ, ಪಾರ್ಸಿ, ಬೌದ್ದರು ಇವರೆಲ್ಲಾ ನಮ್ಮ ದೇಶದ ಹಾಗೂ ಕರ್ನಾಟಕದ ಪ್ರಜೆಗಳು. ನಾವು ಎಲ್ಲಾ ಅಲ್ಪಸಂಖ್ಯಾತರು, ಹಿಂದುಳಿದವರ ಬಗ್ಗೆ ಚಿಂತನೆ ಮಾಡುತ್ತೇವೆ. ‘ಸಮಬಾಳು ಸಮಪಾಲು’ ಎನ್ನುವ ವಿಜಯೇಂದ್ರ ಅಲ್ಪಸಂಖ್ಯಾತರಲ್ಲಿ ಯಾರದರೊಬ್ಬರನ್ನು ವಿಧಾನಪರಿಷತ್ ಸದಸ್ಯ, ರಾಜ್ಯಸಭಾ ಸದ್ಯಸರನ್ನಾಗಿ, ಕೇಂದ್ರ ಸಂಪುಟದಲ್ಲಿ ಮಂತ್ರಿ ಮಾಡಲಿ ಶಿವಕುಮಾರ್ ಹೇಳಿದರು.
ಅವರ ಪಕ್ಷದಲ್ಲಿ ಇಬ್ಬರು ಕ್ರೈಸ್ತರು, ಮೂರು ಜನ ಮುಸ್ಲಿಮರಿಗೆ ಅವಕಾಶ ಮಾಡಿಕೊಡಲಿ. ಹೀಗೆ ಮಾಡಿದಾಗ ಮಾತ್ರ ವಿಜಯೇಂದ್ರ ಅವರಿಗೆ ಸಮಬಾಳು ಸಮಪಾಲು ಎಂದು ಮಾತನಾಡಲು ಒಂದು ಅವಕಾಶ ಸಿಗುತ್ತದೆ ಎಂದು ಅವರು ತಿಳಿಸಿದರು.