ಇರಾನ್‌: ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸೋರಿಕೆಯಿಂದ ಸ್ಪೋಟ; 30 ಮಂದಿ ಮೃತ್ಯು

Update: 2024-09-22 06:33 GMT

ಸಾಂದರ್ಭಿಕ ಚಿತ್ರ

ತೆಹ್ರಾನ್: ಪೂರ್ವ ಇರಾನ್‌ನ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸೋರಿಕೆ ಕಾರಣದಿಂದ ಸ್ಫೋಟ ಸಂಭವಿಸಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.

ಇರಾನ್ ನ ರಾಜಧಾನಿ ತೆಹ್ರಾನ್‌ನ ಆಗ್ನೇಯಕ್ಕೆ 540 ಕಿ.ಮೀಟರ್ ದೂರದ ತಬಾಸ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಾವು ಸಂಭವಿಸಿದೆ. ಸ್ಫೋಟದ ಸಮಯದಲ್ಲಿ ಸುಮಾರು 70 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿ ಹೇಳಿದೆ.

ತೈಲ ಉತ್ಪಾದನಾ ದೇಶ ಇರಾನ್ ವಿವಿಧ ಖನಿಜಗಳಿಂದ ಸಮೃದ್ಧವಾದ ದೇಶವಾಗಿದೆ. ಇರಾನ್‌ನ ಗಣಿಗಾರಿಕೆ ಉದ್ಯಮಕ್ಕೆ ಇದು ಮೊದಲ ದುರಂತವಲ್ಲ. 2013ರಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 11 ಕಾರ್ಮಿಕರು ಸಾವನ್ನಪ್ಪಿದ್ದರು. 2009ರಲ್ಲಿ ನಡೆದ ಘಟನೆಗಳಲ್ಲಿ 20 ಕಾರ್ಮಿಕರು ಮೃತಪಟ್ಟಿದ್ದರು. 2017ರಲ್ಲಿ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಕನಿಷ್ಠ 42 ಜನರು ಸಾವನ್ನಪ್ಪಿದ್ದರು. ಇರಾನ್ ನ ಗಣಿಗಾರಿಕೆ ಪ್ರದೇಶಗಳಲ್ಲಿನ ಸುರಕ್ಷತಾ ಮಾನದಂಡಗಳಲ್ಲಿನ ಕೊರತೆ ಮತ್ತು ಅಸಮರ್ಪಕ ತುರ್ತು ಸೇವೆಗಳು ಇಂತಹ ಸಾವು-ನೋವುಗಳಿಗೆ ಕಾರಣವಾಗುತ್ತಿವೆ ಎಂದು ವರದಿಗಳು ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News