ಬರೆದ ಮುನ್ನುಡಿಗಳೆಲ್ಲಾ ಅಚ್ಚಾಗುತ್ತವೆಯೇ?
ಬರೆದ ಎಲ್ಲಾ ಮುನ್ನುಡಿಗಳು ಪ್ರಕಟವಾಗಿವೆಯೇ ಎಂದು ಹುಡುಕಿದರೆ, ನಿಷ್ಠುರವಾಗಿ ಕಟುವಾದ ವಿಮರ್ಶೆ ಮಾಡಿದ ಎಷ್ಟೋ ಮುನ್ನುಡಿಗಳು ಪ್ರಕಟವಾಗದೆ ಸಾವನ್ನಪ್ಪಿವೆ. ಇಂತಹ ಮುನ್ನುಡಿಗಳಿಗೆ ಮರುಜೀವ ತುಂಬಿ ಮಾತನಾಡಿಸಿದರೆ, ಕನ್ನಡ ಸಾಹಿತ್ಯದ ಮರೆಮಾಚಿದ ಕಟು ಸತ್ಯಗಳು ಬಯಲಾಗಬಹುದು. ಅಥವಾ ಕಟುತ್ವವಿಲ್ಲದ, ನಿಷ್ಠುರತೆ ಇಲ್ಲದ ಮುನ್ನುಡಿಗಳ ಮಿತಿಯ ಚರ್ಚೆಗೆ ಹೊಸ ಆಯಾಮವನ್ನೂ ನೀಡಬಹುದು.;

ನಾನೊಂದು ಕವಿತಾ ಸಂಕಲನಕ್ಕೆ ಮುನ್ನುಡಿ ಬರೆದುಕೊಟ್ಟೆ. ಅವರು ಇದು ಬಹಳ ಕಟುವಾಯಿತು ಚೂರು ಸಾಫ್ಟ್ ಮಾಡಿಕೊಡಿ ಎಂದರು. ಪ್ರಕಟಿಸದಿದ್ದರೂ ಪರವಾಗಿಲ್ಲ ಅಭಿಪ್ರಾಯವನ್ನು ಬದಲಿಸುವುದಿಲ್ಲ ಎಂದೆ. ಅವರು ಮುನ್ನುಡಿಯನ್ನು ಬಿಟ್ಟು ಕವನ ಸಂಕಲನ ಪ್ರಕಟಿಸಿ ಅದ್ದೂರಿಯಾಗಿ ಬಿಡುಗಡೆಗೊಳಿಸಿದರು. ಇನ್ನೊಬ್ಬ ಕಥೆಗಾರ್ತಿ ಮುನ್ನುಡಿಗೆ ಕಥೆಗಳನ್ನು ಕಳಿಸಿದರು. ನಾನು ಇಡಿಯಾಗಿ ಕಥೆಗಳನ್ನು ಓದಿ, ಇವು ಕಥೆಗಳಲ್ಲ ಘಟನಾವಳಿಗಳ ವರದಿ, ಹಾಗಾಗಿ ಮುನ್ನುಡಿ ಬರೆಯಲಾರೆ ಎಂದು ನಿರಾಕರಿಸಿದೆ. ನಂತರ ಬೇರೊಬ್ಬರ ಮುನ್ನುಡಿಯೊಂದಿಗೆ ಪ್ರಕಟಿಸಿದರು. ಹಲವು ಪ್ರಶಸ್ತಿಗಳೂ ಬಂದವು. ಪ್ರಶಸ್ತಿಗಳು ಬಂದಾಗಲೆಲ್ಲಾ ಕಥೆಗಾರ್ತಿ ಇರಿಯುವ ಕತ್ತಿಯಂತೆ ವಾಟ್ಸ್ಆ್ಯಪ್ ಮಾಡಿ ಚುಚ್ಚುತ್ತಿದ್ದರು. ರಕ್ತ ವಸರಿದರೂ ನಾನು ಚುಚ್ಚಿಸಿಕೊಂಡು ಮೌನವಾಗಿದ್ದೆ. ಮತ್ತೊಬ್ಬ ಕಥೆಗಾರರ ಮುನ್ನುಡಿಯ ಕಥೆಯೂ ಇದೇ ಆಯಿತು. ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ಬರೆಯದಿರುವ ನನ್ನ ಆಯ್ಕೆ ಸ್ವಾತಂತ್ರ್ಯವನ್ನು ಪ್ರೀತಿಯಿಂದಲೇ ಒಪ್ಪಿಸಿದೆ. ಇದಾದ ಮೇಲೆ ಮುನ್ನುಡಿಗಳ ಬಗ್ಗೆಯೇ ಯೋಚಿಸುತ್ತಿದ್ದಾಗ ಮುನ್ನುಡಿ ಎಂಬ ಸಮುದ್ರದ ಅಲೆಗಳು ಅಪ್ಪಳಿಸತೊಡಗಿದವು.
‘ಮುನ್ನುಡಿ’ ಎನ್ನುವ ಪದವೇ ‘ನುಡಿ’ ‘ಮಾತು’ ಎನ್ನುವ ಮೌಖಿಕ ಸಂಕೇತವನ್ನು ಸೂಚಿಸುತ್ತಿದೆ. ಬದಲಾಗಿ ಅಕ್ಷರರೂಪಿ ಗ್ರಂಥಗಳಿಗೆ ‘ಬರಹ’ ಸೂಚಿ ಆರಂಭವೊಂದಿರಬೇಕಿತ್ತು ಅನ್ನಿಸುತ್ತದೆ. ಹಾಗೆ ನೋಡಿದರೆ ಮುನ್ನುಡಿಗೆ ಬದಲಾಗಿ ‘ಮುಂಬರಹ’ ಎಂತಲೋ, ‘ಮುಂಪೀಠಿಕೆ’ ಎಂತಲೋ ಇರಬೇಕಿತ್ತು. ಇದು ಲಿಖಿತ ರೂಪದ ಪಠ್ಯವೊಂದಕ್ಕೆ ಓದುಗರನ್ನು ಮಾತಿನ ಮೂಲಕ ಆಹ್ವಾನಿಸುವುದನ್ನು ಸಾಂಕೇತಿಸುತ್ತಿದೆ. ಇಲ್ಲಿ ಪುಸ್ತಕವೊಂದರ ಬಗ್ಗೆ ಮೈಕು ಹಿಡಿದು ಪರಿಚಯಿಸುವವರ ಚಿತ್ರವೊಂದು ಕಣ್ಣೆದುರು ಬರುತ್ತದೆ. ಮುನ್ನುಡಿಗೆ ಪರ್ಯಾಯವಾಗಿ ಅನೇಕ ಸಮಾನಾರ್ಥಕ ಪದಗಳು ಬಳಕೆಯಾದರೂ ಈ ಎಲ್ಲಾ ಪದಗಳ ತಾಯಿ ‘ಮುನ್ನುಡಿ’. ಹಾಗೆ ನೋಡಿದರೆ ಮುನ್ನುಡಿಗೆ ಪರ್ಯಾಯವಾಗಿ ಕನ್ನಡದಲ್ಲಿ ಮತ್ತು ಇತರ ಭಾಷೆಗಳಲ್ಲಿ ಬಳಕೆಯಾದ ನುಡಿಗಟ್ಟುಗಳ ಒಂದು ಪದಕೋಶವನ್ನೇ ತಯಾರಿಸಬಹುದು. ಪ್ರೊ. ರಹಮತ್ ತರೀಕೆರೆ ಅವರು ಬರೆದ ಮುನ್ನುಡಿಗಳನ್ನೆಲ್ಲಾ ಸೇರಿಸಿ ‘ಬಾಗಿಲ ಮಾತು’ ಎಂದು ಪುಸ್ತಕಕ್ಕೆ ಚಂದದ ಹೆಸರು ಕೊಟ್ಟಿದ್ದಾರೆ.
ಸರಳವಾಗಿ ಹೇಳುವುದಾದರೆ ಮುನ್ನುಡಿ ಪುಸ್ತಕವೊಂದರ ಪ್ರವೇಶಿಕೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ದೈವ ಪ್ರಾರ್ಥನೆ, ಗುರುಸ್ತುತಿ, ಪೋಷಕರ ಮತ್ತು ಸ್ವಪರಿಚಯ, ಕೃತಿಯ ವಸ್ತು, ಪೂರ್ವಸೂರಿಗಳ ನೆನಪು, ಕುಕವಿ ನಿಂದೆ ಮೊದಲಾದ ಸಂಗತಿಗಳನ್ನು ಕೃತಿಕಾರನೇ ಕಾವ್ಯದ ಭಾಗವಾಗಿಯೇ ಆರಂಭಿಸಿದ್ದು ಕಾಣುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಲೇಖಕರು ಕೃತಿ ಮೊದಲಿಗೆ ಬರೆಯುತ್ತಿದ್ದ ‘ಪ್ರೊಲಾಗ್’ (prologue) ಮುನ್ನುಡಿಗೆ ಸಮೀಪವಿದ್ದಂತಿದೆ. ಕನ್ನಡ ಸಂದರ್ಭದಲ್ಲಿ ಸಾಮಾನ್ಯವಾಗಿ 19ನೇ ಶತಮಾನದ ನಂತರ ಪ್ರಾಚೀನ ಕೃತಿಗಳ ಸಂಪಾದನೆ, ಸ್ವತಂತ್ರ ಕೃತಿ ರಚನೆಗಳ ಆರಂಭದ ಜತೆ ‘ಮುನ್ನುಡಿ’ ಅಡಿಯಿಟ್ಟಿರಬೇಕು. ಮೊದಲು ಕೃತಿ ಸಂಪಾದಕರೇ ಪ್ರಸ್ತಾವನೆ ರೂಪದಲ್ಲಿ ಪ್ರಾಚೀನ ಕೃತಿ, ಕೃತಿಕಾರರ ಬಗ್ಗೆ ಪರಿಚಯ ಬರೆದರು. ಈ ಮುನ್ನುಡಿಗಳನ್ನು ಆಧರಿಸಿಯೇ ನಾವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಂಡಿದ್ದೇವೆ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯಾಭ್ಯಾಸಿಗಳು ಮುನ್ನುಡಿಗೆ ಋಣಿ.
ಮುನ್ನುಡಿಗಳು ಪ್ರಧಾನವಾಗಿ ಎರಡು ತೆರನಾಗಿವೆ. ಬರಹಗಾರ್ತಿ/ಗಾರರು ತಾವೇ ತಮ್ಮ ಕೃತಿಗೆ ಮುನ್ನುಡಿ ರೂಪದ ಮೊದಲ ಮಾತು ಬರೆಯುವುದು. ಇದು ಸಾಮಾನ್ಯವಾಗಿ ಸಂಪಾದಿತ ಕೃತಿ, ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ ಮೊದಲಾದ ಕೃತಿಗಳಲ್ಲಿ ಈ ಮಾದರಿ ಹೆಚ್ಚು ಕಾಣುತ್ತದೆ. ಎರಡನೆಯದು ಬೇರೊಬ್ಬರಿಂದ ತನ್ನ ಕೃತಿಗೆ ಮುನ್ನುಡಿ ಬರೆಯಿಸಿಕೊಳ್ಳುವುದು. ಇದು ಕಾವ್ಯ, ಕಥೆ, ಕಾದಂಬರಿ, ಪ್ರಬಂಧ, ನಾಟಕ ಮೊದಲಾದ ಪ್ರಕಾರಗಳಲ್ಲಿ ಹೆಚ್ಚು ಕಾಣುತ್ತದೆ. ಈ ಎರಡನೇ ಮಾದರಿಯ ಮುನ್ನುಡಿ ಪ್ರಕಾರವೇ ಇಂದು ಬೃಹತ್ತಾಗಿ ಬೆಳೆದಿದೆ. ಅದೊಂದು ಸಂಶೋಧನೆ ಮಾಡತಕ್ಕ ಪ್ರಕಾರವಾಗಿಯೂ ಇದೆ. ಮುನ್ನುಡಿಯ ಬಹುರೂಪಿ ಮೀಮಾಂಸೆಯನ್ನು ರೂಪಿಸಿರುವುದು ಕೂಡ ಎರಡನೇ ಪ್ರಕಾರವೆ. ಸದ್ಯಕ್ಕೆ ಕನ್ನಡ ವಿವಿಯ ಸಂಶೋಧಕರೊಬ್ಬರು ಆಯ್ದ ಮುನ್ನುಡಿಗಳ ಕುರಿತು ಪಿಎಚ್.ಡಿ. ಸಂಶೋಧನೆ ಕೈಗೊಳ್ಳುವ ಹಂತಕ್ಕೆ ಮುನ್ನುಡಿ ಬೆಳೆದಿದೆ.
ಆಯಾ ಕೃತಿ ಪ್ರಕಾರದ ಚಾರಿತ್ರಿಕ ಸಂಗತಿಗಳ ನೆಲೆಯಲ್ಲಿ ಪ್ರಸ್ತುತ ಕೃತಿಯನ್ನು ಗುರುತಿಸುವುದು ಅಥವಾ ಅದೇ ಕೃತಿಕಾರರ ಇತರ ಕೃತಿಗಳ ಜತೆ, ಸಮಕಾಲೀನರ ಜತೆ ಹೋಲಿಸಿ ಸದ್ಯದ ಕೃತಿಯನ್ನು/ಕೃತಿ ಪ್ರಕಾರವನ್ನು ಬೆಲೆಗಟ್ಟುವುದು ಮುಖ್ಯವಾದ ಲಕ್ಷಣ. ಅದೀಗ ಹಾರೈಕೆ, ಆಶೀರ್ವಚನ, ಉಪದೇಶ, ಹೊಗಳಿಕೆ, ಮುಖಸ್ತುತಿ, ಸ್ವಪ್ರತಿಷ್ಠೆಯನ್ನು ಹೆಚ್ಚಿಸುವಿಕೆ, ಮುನ್ನುಡಿಕಾರ್ತಿ/ಕಾರ ತಾನೇ ಹಿರಿತನವನ್ನು ಆರೋಪಿಸಿಕೊಂಡು ತನ್ನ ಪಾಂಡಿತ್ಯ ಪ್ರದರ್ಶಿಸುವಿಕೆಗೆ ಮುನ್ನುಡಿ ಬಲಿಯಾಗಿ ತನ್ನ ಶಕ್ತಿಯನ್ನು ಕಳೆದುಕೊಂಡು ಸದ್ಯಕ್ಕೆ ಅಪೌಷ್ಟಿಕತೆಯಿಂದ ನರಳುವ ಮಗುವಿನಂತಾಗಿದೆ.
ಕಥೆಗಾರ್ತಿ/ಕಥೆಗಾರ, ಕವಯಿತ್ರಿ/ಕವಿ ವಿಮರ್ಶಕಿ/ವಿಮರ್ಶಕ ಎನ್ನುವಂತೆ ಮುನ್ನುಡಿಕಾರ್ತಿ/ಮುನ್ನುಡಿಕಾರ ಎನ್ನುವ ಪ್ರತ್ಯೇಕ ವೃತ್ತಿನಾಮವೊಂದಿಲ್ಲ. ನಾನಂತೂ ಈತನಕ ಲೇಖಕರೊಬ್ಬರು ತಮ್ಮ ಹೆಸರಿನ ಕೆಳಗೆ ಮುನ್ನುಡಿಕಾರರು ಎಂದು ಬರೆದುಕೊಂಡಿರುವುದನ್ನು ನೋಡಿಲ್ಲ. ಕವಿಗೋಷ್ಠಿ, ಕಥಾಗೋಷ್ಠಿಯನ್ನು ನಡೆಸಿದ ಹಾಗೆ ಮುನ್ನುಡಿಗೋಷ್ಠಿ ನಡೆದಂತಿಲ್ಲ. ಅಂತೆಯೇ ಬರಹದ ದಿಕ್ಕನ್ನು, ರಚನಾ ವಿನ್ಯಾಸಗಳನ್ನು ಚರ್ಚಿಸುವ ಕಥಾಕಮ್ಮಟ, ಕಾವ್ಯಕಮ್ಮಟದಂತೆ ಮುನ್ನುಡಿಕಾರರ ಕಮ್ಮಟವೊಂದು ಆಯೋಜನೆಗೊಂಡಂತಿಲ್ಲ. ಉತ್ತಮ ಮುನ್ನುಡಿಗಳನ್ನು ಆಯ್ದು ಪ್ರಶಸ್ತಿಯನ್ನೂ ನೀಡಿದಂತಿಲ್ಲ. ಮುನ್ನುಡಿಕಾರರ ಸಮಾವೇಶವೊಂದು ಆಯೋಜನೆಗೊಂಡಂತಿಲ್ಲ. ಆದರೆ ಮುನ್ನುಡಿಗಳನ್ನು ಕುರಿತೇ ಒಂದಷ್ಟು ಲೇಖನಗಳು ಮಾತ್ರ ಬಂದಿವೆ. ಅಂಕಣ ಬರಹಕ್ಕೆ ಮೊದಲಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಹಾ.ಮಾ. ನಾಯಕರಂತೆ ಕೇವಲ ತಾನು ಇತರರಿಗೆ ಬರೆದ ಮುನ್ನುಡಿಗಳನ್ನು ಸಂಕಲಿಸಿ ಕೇಂದ್ರ/ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆಯುವುದೊಂದು ಬಾಕಿ ಇದೆ. ಆಸಕ್ತ ಮುನ್ನುಡಿಕಾರರು ಇದನ್ನು ಗಂಭೀರವಾಗಿ ಪರಿಗಣಿಸಬಹುದು.
ಈ ಎಲ್ಲಾ ಕಾರಣದಿಂದ ಮುನ್ನುಡಿಯೊಂದು ಸ್ವತಂತ್ರ ಪ್ರಕಾರವಾಗದೆ ಬರಹದ ಎಲ್ಲಾ ಪ್ರಕಾರದೊಳಗೂ ಬೆರೆತ ಕಲಬೆರಕೆಯಾಗಿದೆ. ಹಾಗೆ ನೋಡಿದರೆ ಮುನ್ನುಡಿ ಎಂಬುದು ಬರಹಗಾರ್ತಿ/ಗಾರರು ಹಾಕುವ ತಾತ್ಕಾಲಿಕ ವೇಷದಂತೆ ಕಾಣುತ್ತದೆ. ಹಾಗಾಗಿ ಎಲ್ಲಾ ಬರಹಗಾರರೊಳಗೂಬ್ಬ ‘ಮುನ್ನುಡಿಕಾರ್ತಿ/ಕಾರ ಗೌಪ್ಯವಾಗಿ ಅಡಗಿ ಕೂತಂತೆಯೂ, ಕೃತಿಯೊಂದಕ್ಕೆ ಮುನ್ನುಡಿ ಬರೆಸುವ ಲೇಖಕಿ/ಲೇಖಕರು ಈ ಮುನ್ನುಡಿ ಪ್ರತಿಭೆಯನ್ನು ಬಡಿದೆಬ್ಬಿಸುವಂತೆಯೂ, ಆಗ ಮುನ್ನುಡಿ ಪ್ರಜ್ಞೆ ಎಚ್ಚರಾಗಿ ಕಣ್ಣುಜ್ಜಿಕೊಂಡು ಬರೆಯಲು ತೊಡಗಿದಂತೆಯೂ ಕಲ್ಪಿಸಿಕೊಳ್ಳಿ. ಆಗ ಮುನ್ನುಡಿಯ ಚಿತ್ರವೊಂದಕ್ಕೆ ಆಕಾರ ಬರಬಹುದು.
ಬರಹಗಾರರ ಹಿರಿತನ ಗೊತ್ತಾಗುವುದು ಸಹ ಮೊದಲು ಮುನ್ನುಡಿ ಬರೆಯುವ ಅಹವಾಲು ಬಂದಾಗ. ಮೊದಲ ಮುನ್ನುಡಿ ಅವಕಾಶಕ್ಕೆ ಲೇಖಕ ಭಯಗೊಂಡು ರೋಮಾಂಚನ ಅನುಭವಿಸಿರಬಹುದು. ಅದು ಮೊದಲ ಪ್ರೇಮಪತ್ರ ಬರೆವಾಗಿನ ಅನುಭವಕ್ಕೆ ಸಮೀಪವಿರಬಹುದು. ಹುಡುಗಿಯೊಬ್ಬಳು ಮೊದಲು ಋತುಚಕ್ರಕ್ಕೆ ಒಳಗಾದಾಗ ‘ದೊಡ್ಡವಳಾದಳು’ ಎಂದು ಗ್ರಾಮೀಣ ಪ್ರದೇಶದಲ್ಲಿ ಕರೆಯುತ್ತಾರೆ. ಅಂತೆಯೇ ಮೊದಲ ಮುನ್ನುಡಿ ಅವಕಾಶ ಬಂದಾಗ ಬರಹಗಾರರಿಗೆ ಹೀಗೆ ದೊಡ್ಡವರಾದಂತಹ ಅನುಭವ ಆಗಿರಲಿಕ್ಕೆ ಸಾಕು. ಬರಹಗಾರರಿಂದ ಮೊದಲ ಮುನ್ನುಡಿ ಅನುಭವ ಎಂಬ ಲೇಖನ ಸರಣಿಯೊಂದನ್ನು ಬರೆಯಿಸಿದರೆ ಅದರ ಮಧುರ/ಕಹಿ ಅನುಭವಗಳು ಮುನ್ನುಡಿಗಳ ಅಧ್ಯಯನಕ್ಕೊಂದು ಉಪಯುಕ್ತ ಆಕರವಾಗುತ್ತದೆ. ದೇಜಗೌ ಇತರರಿಗೆ ಬರೆದ ಮುನ್ನಡಿಗಳನ್ನು ಸಂಕಲಿಸಿ ‘ಮುನ್ನುಡಿ ಕನ್ನಡಿ’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಮುನ್ನುಡಿಗಳನ್ನು ಕುರಿತೇ ಮುನ್ನುಡಿ ಬರೆದಿದ್ದಾರೆ. ಇದನ್ನೊಮ್ಮೆ ಗಮನಿಸಬಹುದು.
ಮುನ್ನುಡಿ ಬಗ್ಗೆಯೇ ಲೇಖಕರಲ್ಲಿ ವಿಭಿನ್ನ ಕಥೆಗಳು ಅನುಭವಗಳೂ ಇರಲಿಕ್ಕೆ ಸಾಧ್ಯವಿದೆ. ಕೆಲವರಾದರೂ ತಮ್ಮ ಆತ್ಮ ಕಥೆಗಳಲ್ಲಿ ಇದರ ಎಳೆಗಳನ್ನು ದಾಖಲಿಸಿದ್ದಾರೆ. ಅಂತೆಯೇ ಲಲಿತ ಪ್ರಬಂಧಕ್ಕೆ ಮುನ್ನುಡಿಯ ಆಚೆ ಈಚಿನ ಸಂಗತಿಗಳಿಂದಲೇ ಸಾಕಷ್ಟು ಅಂಶಗಳು ಸಿಗುತ್ತವೆ. ಆಸಕ್ತರು ಗಿರಡ್ಡಿಯವರ ‘ಮುನ್ನುಡಿ ಎಂಬ ವ್ರತ’ ಎಂಬ ಪ್ರಬಂಧವನ್ನು ಗಮನಿಸಿ. ಕವಿ ಬೇಂದ್ರೆಯವರು ತಾನು ಮುನ್ನುಡಿಗೆ ಒಪ್ಪಿಕೊಂಡ ಕೃತಿ ಇಷ್ಟವಾಗದಿದ್ದರೆ ಇದರಿಂದ ಪಾರಾಗಲು ಸಂಕೀರ್ಣ ಪದ್ಯವೊಂದನ್ನು ಬರೆದು ಅದೇ ಮುನ್ನುಡಿ ಎಂದು ಕೊಡುತ್ತಿದ್ದರಂತೆ. ಬರೆಸಿಕೊಂಡಾತ ಅರ್ಥವಾಗದಿದ್ದರೂ ಪುನೀತ. ನಾನು ಕೇಳಿದ ಸಣ್ಣದೊಂದು ಮುನ್ನುಡಿ ಕಥೆ ಹೀಗಿದೆ, ಪ್ರಸಿದ್ಧ ಭಾಷಾಶಾಸ್ತ್ರಜ್ಞರೊಬ್ಬರಿಗೆ ಕಿರಿಯ ಭಾಷಾತಜ್ಞರೊಬ್ಬರು ಕೆಲವು ಚಾರಿತ್ರಿಕ ಪುಸ್ತಕಗಳಿಗೆ ಬರೆದ ಮುನ್ನುಡಿಗಳ ಝೆರಾಕ್ಸ್ ಕಳಿಸಿ ಹೀಗೆ ಮುನ್ನುಡಿ ಬರೆಯಬೇಕೆಂದು ತಾಕೀತು ಮಾಡಿದ್ದರಂತೆ. ಇದರಿಂದ ಕೋಪಗೊಂಡ ಹಿರಿಯ ಭಾಷಾತಜ್ಞರು ನಿದರ್ಯವಾಗಿ ಲೇಖಕರ ಹಸ್ತಪ್ರತಿ ಮತ್ತು ಮುನ್ನುಡಿಗಳ ಝೆರಾಕ್ಸ್ಗಳಿಗೆ ಅಗ್ನಿಸ್ಪರ್ಶ ಮಾಡಿ ಕೋಪಶಮನ ಮಾಡಿಕೊಂಡರಂತೆ.
ಬರೆದ ಎಲ್ಲಾ ಮುನ್ನುಡಿಗಳು ಪ್ರಕಟವಾಗಿವೆಯೇ ಎಂದು ಹುಡುಕಿದರೆ, ನಿಷ್ಠುರವಾಗಿ ಕಟುವಾದ ವಿಮರ್ಶೆ ಮಾಡಿದ ಎಷ್ಟೋ ಮುನ್ನುಡಿಗಳು ಪ್ರಕಟವಾಗದೆ ಸಾವನ್ನಪ್ಪಿವೆ. ಇಂತಹ ಮುನ್ನುಡಿಗಳಿಗೆ ಮರುಜೀವ ತುಂಬಿ ಮಾತನಾಡಿಸಿದರೆ, ಕನ್ನಡ ಸಾಹಿತ್ಯದ ಮರೆಮಾಚಿದ ಕಟು ಸತ್ಯಗಳು ಬಯಲಾಗಬಹುದು. ಅಥವಾ ಕಟುತ್ವವಿಲ್ಲದ, ನಿಷ್ಠುರತೆ ಇಲ್ಲದ ಮುನ್ನುಡಿಗಳ ಮಿತಿಯ ಚರ್ಚೆಗೆ ಹೊಸ ಆಯಾಮವನ್ನೂ ನೀಡಬಹುದು. ಮುನ್ನುಡಿಯ ಅವಿಮರ್ಶಾತ್ಮಕ ಲಕ್ಷಣವನ್ನರಿತೇ ಕೆಲವು ವಿಮರ್ಶಕ/ಕಿಯರು ತಮ್ಮ ಮುನ್ನುಡಿ ಚೂರು ಕಟುವಾದರೆ ‘‘ನಿಮಗೆ ಇಷ್ಟವಾದರೆ ಹಾಕಿಕೊಳ್ಳಿ. ಇಲ್ಲವೆಂದರೆ ಬಿಟ್ಟರೂ ಅಡ್ಡಿಯಿಲ್ಲ’’ ಎಂಬ ವಿನಯದ ಮಾತನ್ನೂ ಸೇರಿಸುವುದಿದೆ.
ಮುನ್ನುಡಿಯಾಚೆಯ ಸತ್ಯಗಳು ಎಂದು ಈಗಾಗಲೇ ಕೃತಿಯೊಂದಕ್ಕೆ ಮುನ್ನುಡಿ ಬರೆದವರಿಂದಲೇ ಅದೇ ಕೃತಿಯ ಬಗ್ಗೆ ನಿಜದ ಅಭಿಪ್ರಾಯ ಕೇಳಿಕೊಂಡರೆ, ಅಪ್ಪಿತಪ್ಪಿ ಆ ಲೇಖಕರು ಮುನ್ನುಡಿಯಾಚೆಗಿನ ಸತ್ಯವನ್ನು ಬರೆದುಕೊಟ್ಟರೆ ಹೇಗಿರಬಹುದೆಂದು ಕಲ್ಪಿಸಿಕೊಳ್ಳಿ. ಆಗ ಮುನ್ನುಡಿ ಬರೆಸಿಕೊಂಡ ಬರಹಗಾರರ ಸ್ಥಿತಿ ಏನಾಗಬಹುದು ಯೋಚಿಸಿ. (ಕೆಲವರಿಗೆ ಹೃದಯಾಘಾತವೂ ಆಗಬಹುದು) ಇಂತಹ ಬರಹಗಳನ್ನು ಸಂಪಾದಿಸಿದರೆ, ಕನ್ನಡ ವಿಮರ್ಶೆಗೊಂದು ವಿಭಿನ್ನ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ. ಹೀಗೆ ಮೊದಲ ಮುನ್ನುಡಿ ಮತ್ತು ನಂತರದ ಅಭಿಪ್ರಾಯವನ್ನು ತಾಳೆನೋಡಿ ವ್ಯತ್ಯಾಸ ಗುರುತಿಸಲು ಸಾಧ್ಯವಾದರೆ ಅದು ನಿಜವಾದ ಮುನ್ನುಡಿಗಳ ‘ಪೋಸ್ಟ್ ಮಾರ್ಟಮ್’ ಆಗುತ್ತದೆ.
ಮುನ್ನುಡಿಗಳಿಗೆ ಎಂತಹುದೇ ಮಿತಿಯಿದ್ದರೂ ಕೆಲವು ಚಾರಿತ್ರಿಕ ಮಹತ್ವದ ಮುನ್ನುಡಿಗಳು ಇಲ್ಲದಿಲ್ಲ. ಕನ್ನಡದಲ್ಲಿ ಕೆಲವು ಪ್ರಮುಖ ಮುನ್ನುಡಿಗಳನ್ನು ಗುರುತಿಸಬಹುದು. ತಕ್ಷಣಕ್ಕೆ ಹೊಳೆದ ಕೆಲವನ್ನು ಗುರುತಿಸುವುದಾದರೆ, ಪೂರ್ಣಚಂದ್ರ ತೇಜಸ್ವಿ ತಮ್ಮ ‘ಅಬಚೂರಿನ ಪೋಸ್ಟ್ ಆಫೀಸ್’ ಕಥಾ ಸಂಕಲನಕ್ಕೆ ಬರೆದ ಮುನ್ನುಡಿ ‘ಹೊಸ ದಿಗಂತದ ಕಡೆಗೆ’, ಜಿ.ರಾಜಶೇಖರ್ ಅವರು ಅಡಿಗರ ‘ಸುವರ್ಣಪುತ್ತಳಿ’ ಸಂಕಲನಕ್ಕೆ ಬರೆದ ಮುನ್ನುಡಿ, ಬಿ.ಎಂ.ಶ್ರೀ.ಯವರ ‘ಇಂಗ್ಲಿಷ್ ಗೀತಗಳು’ ಕೃತಿಗೆ ತೀನಂಶ್ರೀ ಅವರು ಬರೆದ ಮುನ್ನುಡಿ, ರಾವ್ಬಹದ್ದೂರರ ‘ಗ್ರಾಮಾಯಾಣ’ ಕಾದಂಬರಿಗೆ ಕೀರ್ತಿನಾಥ ಕುರ್ತಕೋಟಿ ಅವರು ಬರೆದ ಮುನ್ನುಡಿ, ಲಂಕೇಶರು ‘ಅಕ್ಷರ ಹೊಸಕಾವ್ಯ’ಕ್ಕೆ ಬರೆದ ಮುನ್ನುಡಿ, ಬೇಂದ್ರೆಯವರು ‘ಗರತಿಹಾಡು’ ಸಂಕಲನಕ್ಕೆ ಬರೆದ ಮುನ್ನುಡಿ... ಹೀಗೆ ಅವರವರ ಆಯ್ಕೆಯ ಅತ್ಯುತ್ತಮ ಮುನ್ನುಡಿಗಳನ್ನು ಪಟ್ಟಿ ಮಾಡಬಹುದು. ಆದರೆ ಅತಿ ಕೆಟ್ಟ ಮುನ್ನುಡಿಗಳ ಪಟ್ಟಿ ಮಾಡಲು ಹೊರಟರೆ, ಖಂಡಿತಾ ಕಿಲೋಮೀಟರ್ಗಟ್ಟಲೆ ಕೆಟ್ಟ ಮುನ್ನುಡಿಗಳು ಕ್ಯೂ ನಿಲ್ಲುವ ಸಾಧ್ಯತೆ ಇದೆ.