ಕಲಬುರಗಿ | ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ ಆರೋಪ : ಅಧಿಕಾರಿಗಳ ವಜಾಕ್ಕೆ ದತ್ತು ಹಯ್ಯಾಳಕರ್ ಆಗ್ರಹ

ಕಲಬುರಗಿ: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 2018-19ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕಲಬುರಗಿ ನಗರದ ತಾರ್ಫೈಲ್ ಬಡಾವಣೆಯಲ್ಲಿ ನಿರ್ಮಿಸಿದ ಮನೆಗಳು ಕಳಪೆಯಾಗಿದ್ದು, ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾರ್ಡ್ ನಂ.54ರಲ್ಲಿ ಬರುವ ತಾರ್ಫೈಲ್ ಪ್ರದೇಶದಲ್ಲಿ 350ಕ್ಕೂ ಹೆಚ್ಚು ಮನೆಗಳ ಪೈಕಿ 300 ಮನೆಗಳನ್ನು ನಿರ್ಮಿಸಲಾಗಿದೆ. ಆ ಮನೆಗಳೆಲ್ಲ ಅವೈಜ್ಞಾನಿಕ ನಿರ್ಮಾಣ ಮತ್ತು ಕಳಪೆಯಾಗಿರುವುದರಿಂದ ಮನೆಗಳು ಶಿಥಿಲಗೊಂಡು, ಅವುಗಳೆಲ್ಲ ಮಳೆಗಾಲದಲ್ಲಿ ಸೋರುತ್ತಿವೆ. ಈ ಕುರಿತು ಮಂಡಳಿಗೆ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.
40 ಸಾವಿರದಿಂದ 50 ಸಾವಿರ ರೂ. ವರೆಗೆ ಖರ್ಚು ಮಾಡಿ 50 ಮನೆಗಳ ಫಲಾನುಭವಿಗಳು ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಯಾವುದೇ ರೀತಿಯ ಧನ ಸಹಾಯ ಮತ್ತು ಕಟ್ಟಡದ ಕಚ್ಚಾ ಸಮಾಗ್ರಿಗಳು ಕೊಟ್ಟಿರುವುದಿಲ್ಲ, ಹಣ ನೀಡಿಲ್ಲ. ಇದರಿಂದಾಗಿ ಅವರು ಸೋರಿಕೆ ಮನೆಯಲ್ಲಿಯೇ ವಾಸವಿದ್ದು, ಈ ಕಡೆ ಸಾಲ ಕಟ್ಟಲಾಗದೆ ಇನ್ನೊಂದಡೆ ಬೇರೆ ಕಡೆಗೆ ಹೋಗಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ನಾಳೆ ಸಿಎಂ ಕಲಬುರಗಿಗೆ ನಗರಕ್ಕೆ ಆಗಮಿಸುತ್ತಿರುವ ಪ್ರಯುಕ್ತ ತಾರ್ಫೈಲ್ ಬಡಾವಣೆಯಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆದಿರುವ ಕುರಿತು ಮನವಿ ನೀಡಲು ಅವಕಾಶ ಮಾಡಿಕೊಡಬೇಕು, ಇಲ್ಲದಿದ್ದರೆ ಸಿಎಂಗೆ ಧಿಕ್ಕಾರ ಕೂಗುಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ ಬೀದರಕರ, ಬಸವರಾಜ, ಶ್ರೀದೇವಿ, ರಾಜು ಹೊಸಮನಿ ಸೇರಿದಂತೆ ಇತರರು ಇದ್ದರು.