ಕಲಬುರಗಿ ಜಿಲ್ಲೆ ದೊಡ್ಡ ಐಟಿ ಹಬ್ ಆಗಲಿದೆ : ಜಿಲ್ಲಾಧಿಕಾರಿ

ಕಲಬುರಗಿ : ನಮ್ಮ ಕಲಬುರಗಿ ಜಿಲ್ಲೆ ರಾಜ್ಯದ ಮುಂದಿನ ದೊಡ್ಡ ಐಟಿ ಹಬ್ ಆಗಿ ಹೊರಹೊಮ್ಮಲಿದೆ ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹೇಳಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಹಾಗೂ ನಗರದ ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್ ಸಹಭಾಗಿತ್ವದಲ್ಲಿ ಸ್ಥಳೀಯ ನವ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ಮತ್ತು ಮಾರ್ಗದರ್ಶನ ನೀಡಲು ಸಹಾಯವಾಗುವಂತೆ ಕಾರ್ಯತಂತ್ರ ಕೇಂದ್ರ ಮತ್ತು ಸಾಫ್ಟ್ ವೇರ್ ಡೆವಲಪ್ಮೆಂಟ್ ಸೆಂಟರ್ ಅನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಅಭಿವೃದ್ಧಿಗೆ ವೇಗ ನೀಡುವ ಮಹತ್ವದ ಕ್ರಮದಲ್ಲಿ, ಕರ್ನಾಟಕ ಸರ್ಕಾರವು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮೂಲಕ ಕಲಬುರಗಿಯಲ್ಲಿ ವಿಶ್ವ ದರ್ಜೆಯ ಇನ್ಕ್ಯುಬೇಶನ್ ಸೆಂಟರ್ ಮತ್ತು ಆಫ್ಶೋರ್ ಡೆವಲಪ್ ಮೆಂಟ್ ಸೆಂಟರ್ (ಒಡಿಸಿ) ಪ್ರಾರಂಭಿಸುವುದಾಗಿ ಘೋಷಿಸಿದರು.
ರಾಜ್ಯದ ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನು ಹೊರ ಜಿಲ್ಲೆಗಳಾದ ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ಮಂಗಳೂರು ಸೇರಿದಂತೆ ಎರಡನೇ ಸಾಲಿನಲ್ಲಿರುವ ನಗರಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಮತ್ತು 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು 1,000 ಕೋಟಿ ರೂ. ಅನುದಾನ ಈ ಸಾಲಿನಲ್ಲಿ ರಾಜ್ಯ ಸರ್ಕಾರ ಮೀಸಲಿರಿಸದೆ ಎಂದರು.
ಜಾಗತಿಕ ಮಟ್ಟದ ಇನ್ಕ್ಯುಬೇಶನ್ ಸೆಂಟರ್ ತೆರೆಯಲು ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ, ಕೆಡಿಇಎಂ ಮತ್ತು ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್ ನಡುವೆ ಒಡಂಬಡಿಕೆಯ ಮೂಲಕ ಇನ್ಕ್ಯುಬೇಷನ್ ಸೆಂಟರ್ ಅನ್ನು ಘೋಷಿಸಿ ಸಹಿ ಮಾಡಲಾಗಿದೆ. ಇದು ಸ್ಟಾರ್ಟ್ಅಪ್ ಗಳನ್ನು ಪೋಷಿಸಲು, ಉದ್ಯಮಿಗಳನ್ನು ಬೆಂಬಲಿಸಲು ಮತ್ತು ತಂತ್ರಜ್ಞಾನಗಳಲ್ಲಿ ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕಾರ್ಯತಂತ್ರದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಈ ಉಪಕ್ರಮವು ಕರ್ನಾಟಕ ಸರ್ಕಾರದ ಬಿಯಾಂಡ್ ಬೆಂಗಳೂರು ಮಿಷನ್ ಅನ್ನು ಬಲಪಡಿಸುತ್ತದೆ, ರಾಜ್ಯದ ಉದಯೋನ್ಮುಖ ನಗರಗಳು ಮತ್ತು ಪ್ರದೇಶಗಳಲ್ಲಿ, ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ದೃಢವಾದ ಡಿಜಿಟಲ್ ಮತ್ತು ಐಟಿ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು.
ಮತ್ತೊಂದು ಒಡಂಬಡಿಕೆಯನ್ನು ಜಾಗತಿಕವಾಗಿ ಗುರುತಿಸಿಕೊಂಡಿರುವ ಅಮೇರಿಕಾ ದೇಶದ XCEL ಕಾರ್ಪ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದ್ದು, ಈ ಸಂಸ್ಥೆಯು ಕಲಬುರಗಿಯಲ್ಲಿ ಹೊಸ ಕೇಂದ್ರವನ್ನು ಆರಂಭಿಸುತ್ತಿದ್ದು, ಇದರೊಂದಿಗೆ ಕರ್ನಾಟಕದ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ R&D ಹೆಜ್ಜೆಗುರುತುಗಳನ್ನು ವಿಸ್ತರಿಸುತ್ತದೆ. XCEL Corp USA, 2003 ರಿಂದ ಸಾಫ್ಟ್ ವೇರ್ ಆವಿಷ್ಕಾರದಲ್ಲಿ ಜಾಗತಿಕ ನಾಯಕ, ಭಾರತದಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕಾರ್ಯಾಚರಣೆಗಳ ಪ್ರಮುಖ ವಿಸ್ತರಣೆಯನ್ನು ಘೋಷಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಜನರೇಟಿವ್ ಅಲ್, ಕ್ವಾಂಟಮ್ ಕಂಪ್ಯೂಟಿಂಗ್, ಡಿಜಿಟಲ್ ಟ್ರಾನ್ಸ್ ಮೇಷನ್, ಎಂಬೆಡೆಡ್ ಸಿಸ್ಟಮ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ನಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಕಾರ್ಯತಂತ್ರದ ಗಮನವನ್ನು ಹೊಂದಿರುವ ಕಂಪನಿಯು ಕಲಬುರಗಿಯಲ್ಲಿ ಹೊಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಿದೆ ಎಂದರು.
ಜಿಲ್ಲೆಯ ಬೆಳವಣಿಗೆಗೆ ಸಧಾ ಕ್ರಿಯಾಶೀಲರಾಗಿ ದುಡಿಯುತ್ತಿರುವ ಐಟಿ-ಬಿಟಿ ಮತ್ತು ಆರ್ ಡಿ ಪಿಆರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೊಡುಗೆ ಈ ಒಡಂಬಡಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅವರ ಕನಸಿನಂತೆ ಕಲಬುರಗಿಯು ಕರ್ನಾಟಕದ ಭವಿಷ್ಯದ ಬೆಳವಣಿಗೆಯ ಕಥೆಯ ಪ್ರಮುಖ ಭಾಗವಾಗಿದೆ. ಎಕ್ಸ್ಸಿಇಎಲ್ ಕಾರ್ಪೊರೇಷನ್ ನ ಇನ್ಕ್ಯುಬೇಷನ್ ಸೆಂಟರ್ ಮತ್ತು ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರದೊಂದಿಗೆ ನಾವು ಸ್ಥಳೀಯ ಯುವಜನತೆಯ ಸಬಲೀಕರಣಕ್ಕೆ ಅಡಿಪಾಯ ಹಾಕುತ್ತಿದ್ದೇವೆ. ಜಾಗತಿಕ ಅವಕಾಶಗಳು ಮತ್ತು ಈ ಕ್ರಿಯಾತ್ಮಕ ಪ್ರದೇಶದಲ್ಲಿ ಹೂಡಿಕೆ ಮಾಡಲು ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.
ಎಚ್ ಕೆಇ ಸೊಸೈಟಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪಿಡಿಎ ಕಾಲೇಜಿನಲ್ಲಿ ಇನ್ಕ್ಯುಬೇಷನ್ ಸೆಂಟರ್ ಸ್ಥಾಪಿಸಲು ಮುಂದಾಗಿರುವುದು ಮತ್ತು ಈ ಭಾಗದ ಯುವಕರು ಉದ್ಯಮಿಗಳಾಗಲು ಮತ್ತು ಉದ್ಯೋಗ ಸೃಷ್ಟಿಗೆ ಈ ಉಪಕ್ರಮವು ಅಪಾರವಾಗಿ ಸಹಾಯ ಮಾಡುತ್ತದೆ. ಇದು ಸ್ಥಳೀಯ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಈ ಭಾಗದ ಒಟ್ಟಾರೆ ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಕೆಡಿಇಎಂನ ಸಿಇಒ ಸಂಜೀವ್ ಕುಮಾರ್ ಗುಪ್ತಾ, XCEL Corp USA ನ ಸ್ಥಾಪಕ ಮತ್ತು CEO ಜಿತ್ ಗೋಯೆಲ್ ಅವರು ಮಾತನಾಡಿದರು.
ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಆರ್.ಪಾಟೀಲ್ ಅವರು ಈ ಉಪಕ್ರಮದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿ, ಈ ಪಾಲುದಾರಿಕೆಯು ಕಲಬುರಗಿಗೆ ಒಂದು ವರದಾನವಾಗಿದೆ. ಉದ್ಯಮ ಮತ್ತು ಸರ್ಕಾರದ ಬೆಂಬಲದೊಂದಿಗೆ ಶಿಕ್ಷಣವನ್ನು ಸಂಯೋಜಿಸುವ ಮೂಲಕ ನಾವು ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಫಲವತ್ತಾದ ನೆಲವನ್ನು ನಿರ್ಮಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.