ಕಲಬುರಗಿ | ಹೆಣ್ಣಿನ ಕತ್ತಲ ಬದುಕಿಗೆ ಬೆಳಕಾಗಿ ಬಂದವರು ಡಾ.ಅಂಬೇಡ್ಕರ್ : ಡಾ.ಇಂದುಮತಿ ಪಾಟೀಲ್

ಕಲಬುರಗಿ : ಹೆಣ್ಣಿನ ಕತ್ತಲ ಬದುಕಿಗೆ ಬೆಳಕಾಗಿ ಬಂದವರು ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ ಎಂದು ಫರಹತಾಬಾದ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಇಂದುಮತಿ ಪಿ. ಪಾಟೀಲ್ ಹೇಳಿದರು.
ಕಲಬುರಗಿಯ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಡಾ.ಅಂಬೇಡ್ಕರ್ ವಿಚಾರ ವೇದಿಕೆ ಆಯೋಜಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯ ನಿಮಿತ್ತ ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನು ಧರ್ಮಶಾಸ್ತ್ರ ಮಹಿಳೆಯರನ್ನು ಅಡುಗೆ ಮನೆಯ ಕತ್ತಲ ಕೋಣೆಯಲ್ಲಿ ಕೊಳೆಯುವಂತೆ ಮಾಡಿತ್ತು. ಯಾವ ಸ್ವಾತಂತ್ರ್ಯವನ್ನು ನೀಡದೆ ಹೆಣ್ಣನ್ನು ಬಂಧಿಸಲಾಗಿತ್ತು. ಹೀಗೆ ಅಶಕ್ತರಾಗಿದ್ದ ಭಾರತೀಯ ಮಹಿಳೆಯರಿಗೆ ಸಂವಿಧಾನದಲ್ಲಿ ಸಮಾನ ಅವಕಾಶ ಕಲ್ಪಿಸಿ ಹೆಣ್ಣಿನ ಕತ್ತಲ ಬದುಕಿಗೆ ಬೆಳಕಾಗಿ ಬಂದವರು ಡಾ.ಬಾಬಾ ಸಾಹೇಬ ಅಂಬೇಡ್ಕರ್. ಹಿಂದೂ ಕೋಡ್ಬಿಲ್ ಜಾರಿಯಾಗದ ಕಾರಣ ಮಹಿಳೆಯರಿಗಾಗಿಯೇ ಮಂತ್ರಿ ಪದವಿಯನ್ನು ತ್ಯಾಗ ಮಾಡಿದ ಮಹಾನ್ ತ್ಯಾಗಿ ಅಂಬೇಡ್ಕರ್ ಆಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾದ್ಯಾಪಕರಾದ ಡಾ.ಬಿ.ಕೃಷ್ಣಪ್ಪ, ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕರಾದ ಡಾ.ಗಾಂಧೀಜಿ ಮೋಳೆಕರ, ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ವಿಜಯಕುಮಾರ, ಪೀಪಲ್ ಎಜುಕೇಷನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ ಅವರು ಮಾತನಾಡಿದರು.
ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಹರ್ಷವರ್ಧನ ಅವರು ವಂದಿಸಿದರು. ಪ್ರಾಧ್ಯಾಪಕರುಗಳಾದ ಡಾ.ನಿರ್ಮಲಾ ಸಿರಗಾಪುರ, ಡಾ.ಸಿದ್ದಪ್ಪ ಎಸ್.ಕಾಂತ, ಡಾ.ಸುದರ್ಶನ ಮದನಕರ್, ಡಾ.ವಸಂತ ವಿ.ನಾಶಿ, ಡಾ.ಶಿವಕುಮಾರ್ ಸಿ.ಎಸ್, ಡಾ.ಸಿದ್ದಾರ್ಥ ಮದನಕರ್, ಡಾ.ಕರಿಬಸಪ್ಪ, ಡಾ.ದತ್ತುರಾಯ ಮೊದಲಾದವರು ಉಪಸ್ಥಿತರಿದ್ದರು.