ಕಲಬುರಗಿ | ಗಂಡೋರಿ ನಾಲದಲ್ಲಿ ಇಬ್ಬರ ನಾಪತ್ತೆ ಪ್ರಕರಣ; ಎರಡು ದಿನಗಳ ಬಳಿಕ ಮೃತದೇಹ ಪತ್ತೆ

ಮೃತರು
ಕಲಬುರಗಿ : ಕಮಲಾಪುರ ತಾಲೂಕಿನ ಗಂಡೋರಿನಾಲ ಜಲಾಶಯದಲ್ಲಿ ಸ್ನಾನಕ್ಕಿಳಿದ ಇಬ್ಬರು ನೀರಲ್ಲಿ ಮುಳುಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬುಧವಾರ ಇಬ್ಬರ ಮೃತದೇಹ ಪತ್ತೆಯಾಗಿದೆ.
ಕಲಬುರಗಿ ನಗರದ ಟಿಪ್ಪು ಚೌಕ್ ನಿವಾಸಿ ಆಸಿಫ್ ಹಮೀದ್(43) ಹಾಗೂ ಮಾಲಗತ್ತಿ ಕ್ರಾಸ್ ನಿವಾಸಿ ನಿಝಾಮ್ ಚೋಟು (30) ಮೃತರು ಎಂದು ಗುರುತಿಸಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಆಸಿಫ್ ಹಮೀದ್, ನಿಝಾಮ್ ಚೋಟು ಸಹಿತ ಆರು ಮಂದಿ ಗೆಳೆಯರು ಗಂಡೋರಿನಾಲ ಜಲಾಶಯಕ್ಕೆ ಬಂದಿದ್ದರು. ಈ ವೇಳೆ ಆರು ಮಂದಿ ಜಲಾಶಯಕ್ಕೆ ಇಳಿದಿದ್ದಾರೆ. ಈ ವೇಳೆ ನಾಲ್ವರು ಜಲಾಶಯ ದಂಡಿಯಲ್ಲಿ ಈಜಾಡಿದ್ದರೇ, ಆಸಿಫ್ ಹಮೀದ್, ಹಾಗೂ ನಿಝಾಮ್ ಚೋಟು ನೀರಿನ ಆಳಕ್ಕೆ ಇಳಿದಿದ್ದರೆನ್ನಲಾಗಿದೆ.
ಆಳ ನೀರಿನಿಂದ ದಂಡಿಗೆ ಬರಲು ಆಗದೆ ಅವರಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಇದೀಗ ಸತತ ಎರಡು ದಿನಗಳ ಕಾಲ ಅಗ್ನಿಶಾಮಕ ಈಜುಗಾರರ ತಂಡ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಗಾಂವ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.