ಕಲಬುರಗಿ | ಸೇತುವೆ ಬಳಿ ಬೈಕ್‌ ನಿಲ್ಲಿಸಿ ಯುವಕ ನಾಪತ್ತೆ : ಆತ್ಮಹತ್ಯೆ ಶಂಕೆ

Update: 2025-04-04 16:34 IST
ಕಲಬುರಗಿ | ಸೇತುವೆ ಬಳಿ ಬೈಕ್‌ ನಿಲ್ಲಿಸಿ ಯುವಕ ನಾಪತ್ತೆ : ಆತ್ಮಹತ್ಯೆ ಶಂಕೆ
  • whatsapp icon

ಕಲಬುರಗಿ : ಇತ್ತೀಚೆಗೆ ಕಲಬುರಗಿ ಹೊರವಲಯದ ಕುರಿಕೋಟಾ ಸೇತುವೆ ಮೇಲಿಂದ ಯುವಕನೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊರ್ವ ಯುವಕ ಕುರಿಕೋಟಾ ಸೇತುವೆ ಮೇಲೆ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಯುವಕನ ಪತ್ತೆಗಾಗಿ ಪೊಲೀಸರು ಶುಕ್ರವಾರ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಹಾಗಾಂವ್ ಗ್ರಾಮದ ನಿವಾಸಿ ಕಲಬುರಗಿ ನಗರದ ಕರುಣೇಶ್ವರ್ ಬಡಾವಣೆಯ ಬಾಡಿಗೆ ಮನೆಯಲ್ಲಿ ಇದ್ದ ಪ್ರಥಮೇಶ್ ಸಿದ್ದರಾಮೇಶ್ ಗುಂಡೂರ್ಕರ್ (22) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ಶಂಕಿಸಲಾಗಿದೆ.

ಕಲಬುರಗಿ ನಗರದ ಗ್ರಂಥಾಲಯಕ್ಕೆ ಹೋಗುವುದಾಗಿ ಹೇಳಿ ಹೋದ ಯುವಕ ಪ್ರಥಮೇಶ್, ತನ್ನ ಅಕ್ಕನ ಸ್ಕೂಟಿ ತೆಗೆದುಕೊಂಡು ಗುರುವಾರ ಮಧ್ಯಾಹ್ನ ಹಳೆಯ ಕುರಿಕೋಟಾ ಸೇತುವೆ ಮೇಲೆ ನಿಲ್ಲಿಸಿ, ಬಳಿಕ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾನೆ ಎನ್ನಲಾಗುತ್ತಿದೆ.

ಯುವಕ ಗುರುವಾರ ಮಧ್ಯಾಹ್ನವೇ ಜಿಗಿದಿರುವುದು ಶಂಕಿಸಲಾಗಿದೆ, ನಿಖರ ಕಾರಣ ತಿಳಿದುಬಂದಿಲ್ಲ, ಮೃತದೇಹ ಪತ್ತೆಗಾಗಿ ನಮ್ಮ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್ಐ ಅವರು ತಿಳಿಸಿದ್ದಾರೆ.

ಘಟನೆ ಮಹಾಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚೆಗೆ ಹಳೆಯ ಕುರಿಕೋಟಾ ಬ್ರಿಡ್ಜ್ ಮೇಲಿಂದ ಜಿಗಿದು ಹಲವು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಸರಕಾರ ಕೂಡಲೇ ಸೇತುವೆಗೆ ಬೇಲಿ ಅಥವಾ ರಕ್ಷಣಾತ್ಮಕ ವಸ್ತು ನಿರ್ಮಿಸಿ ಸೇತುವೆ ಮೇಲಿಂದ ನದಿಯಲ್ಲಿ ಯಾರು ಜಿಗಿಯದಂತೆ ಕ್ರಮ ವಹಿಸಬೇಕೆಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News