ಸುಂಟಿಕೊಪ್ಪ ಸರಣಿ ಕಳ್ಳತನ ಪ್ರಕರಣ : ಆರೋಪಿಯ ಬಂಧನ

Update: 2024-02-16 17:04 GMT

ಸಾಂದರ್ಭಿಕ ಚಿತ್ರ

ಮಡಿಕೇರಿ: ಇತ್ತೀಚೆಗೆ ಸುಂಟಿಕೊಪ್ಪದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಿಕ್ಕಮಂಡೂರು ಗ್ರಾಮದ ನಿವಾಸಿ ಮೊಹಮ್ಮದ್ ಅಶ್ರಫ್ (43) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿಂದ ರೂ.15 ಸಾವಿರ ನಗದು, ವಾಚ್ ಮತ್ತು ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ಫೆ.28 ರಂದು ಸುಂಟಿಕೊಪ್ಪದ ನಿವಾಸಿ ಕೆ.ಎಂ.ಹಸೈನಾರ್ ಅವರ ಟಿನೇಜ್ ಕಲೆಕ್ಷನ್ಸ್ ಬಟ್ಟೆ ಅಂಗಡಿಯ ಬೀಗವನ್ನು ಮುರಿದು ಕ್ಯಾಶ್ ಟೇಬಲ್‍ನಲ್ಲಿದ್ದ ರೂ.1ಲಕ್ಷ ನಗದು, ವಾಚ್ ಮತ್ತು ಬಟ್ಟೆಗಳನ್ನು ಕಳ್ಳತನ ಮಾಡಲಾಗಿತ್ತು. ಅಲ್ಲದೆ ಸುರೇಶ್.ಹೆಚ್.ಕೆ ಅವರ ಎ.ಆರ್ ಕನ್ಸಲ್ಟಿಂಗ್ ಅಂಗಡಿಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನೂ ಕದ್ದೊಯ್ಯಲಾಗಿತ್ತು ಎನ್ನಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಕಳ್ಳರ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು. ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತದ ಸಿಪಿಐ ರಾಜೇಶ್.ಕೆ, ಸುಂಟಿಕೊಪ್ಪ ಠಾಣೆಯ ಪಿಎಸ್‍ಐಗಳಾದ ಶ್ರೀಧರ್.ಎಂ.ಸಿ, ನಾಗರಾಜು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.

ಸದರಿ ಎರಡು ಪ್ರಕರಣಗಳ ಮತ್ತೊಬ್ಬ ಆರೋಪಿ ಇಜಾಜ್ ಎಂಬುವವನನ್ನು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ಈಗಾಗಲೇ ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News