ಮೈಸೂರಿನ ಚಾಮುಂಡಿ ಬೆಟ್ಟ ರಾಜವಂಶಸ್ಥರ ಖಾಸಗಿ ಆಸ್ತಿ, ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ: ಪ್ರಮೋದಾದೇವಿ ಒಡೆಯರ್

Update: 2024-08-12 12:57 GMT

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟ ರಾಜವಂಶಸ್ಥರ ಖಾಸಗಿ ಆಸ್ತಿ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬಾರದು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋಟ್೯ ನಲ್ಲಿ ತಡೆಯಾಜ್ಞೆ ತಂದಿದ್ದಾರೆ.

ಈ ಸಂಬಂಧ ನಗರದ ಅರಮನೆ ಆವರಣದಲ್ಲಿ ಸೋಮವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ನಮಗೆ ಸೇರಿದ್ದು, ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಸರಿಯಲ್ಲ.‌ ಚಾಮುಂಡಿ ಬೆಟ್ಟ ಬೆಟ್ಟವಾಗೆ ಉಳಿಯಬೇಕು. ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ 2024 ರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು.‌ ಈ ಸಂಬಂಧ ನಾವು ಹೈಕೋಟ್೯ ನಲ್ಲಿ ದಾವೆ ಹೂಡಿದ್ದು ಜುಲೈ 26 ರಂದು ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಆದೇಶ ಪ್ರತಿ ಬಿಡುಗಡೆ ಮಾಡಿದರು.

ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಮೇಲೆ ರಾಜರ ಆಸ್ತಿಯನ್ನು ಭಾರತ ಸರ್ಕಾರ ವಶಕ್ಕೆ ಪಡೆಯುವ ವೇಳೆ ಕೆಲವು ಜಾಗಗಳನ್ನು ರಾಜವಂಶಸ್ಥರಿಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಚಾಮುಂಡಿ ಬೆಟ್ಟ, ರಾಜೇಂದ್ರ ವಿಲಾಸ ಅರಮನೆ, ದೇವಿ ಕೆರೆ, ನಾರಾಯಣಸ್ವಾಮಿ ದೇವಸ್ಥಾನ, ಮಹಾಬಲೇಶ್ವರ ದೇವಸ್ಥಾನ ಸೇರಿದಂತೆ ಹಲವು ಜಾಗಗಳು ರಾಜವಂಶಸ್ತರಿಗೆ ಸೇರಿದ್ದು, ಅಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಭಿವೃದ್ಧಿ ಮಾಡುವಂತಿಲ್ಲ ಎಂದು ಹೇಳಿದರು.

ಭಾರತ ಸರ್ಕಾರದ ಗೃಹ ಸಚಿವಾಲಯ 1974 ರಲ್ಲಿ ರಾಜವಂಶಸ್ಥರಿಗೆ ಸೇರಿದ ಆಸ್ತಿಗಳನ್ನು ಅವರ ಸುಪರ್ದಿಗೆ ಬಿಟ್ಟುಕೊಡಬೇಕು ಎಂಬ ಆದೇಶವನ್ನು ಆಯಾಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿದೆ. ಆದರೂ ರಾಜ್ಯ ಸರ್ಕಾರ ನಮಗೆ ಸೇರಿದ ಆಸ್ತಿಗಳನ್ನು ಬಿಟ್ಟುಕೊಡದೆ ತಾನೇ ನಿರ್ವಹಣೆ ಮಾಡುತ್ತಿದೆ ಎಂದು ಆಸಮಧಾನ ಹೊರಹಾಕಿದರು.

ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೊದಲ ಮುಖ್ಯಮಂತ್ರಿಗಳಿಂದಲೂ ಅರಮನೆಯವರಿಗೆ ತೊಂದರೆ ಉಂಟಾಗುತ್ತಿದೆ. ಅದು ಹೊಸದೇನಲ್ಲ.‌ ಆವಾಗಿನಿಂದಲೂ ನಾವು ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿ ಕಾನೂನು ಮೂಲಕವೇ ಹೋರಾಟ ಮಾಡಿಕೊಂಡು ಬರುತ್ತಿದ್ದೆವೆ.‌ ಇದೇನು ನಮಗೆ ಹೊಸದಲ್ಲ, ನಾನು ಯಾವ ಒಬ್ಬ ವ್ಯಕ್ತಿಯ ವಿರುದ್ಧವೂ ಮಾತನಾಡುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಮೈಸೂರು ನಗರ ಸೇರಿದಂತೆ ರಾಜ್ಯದ ಇತರೆಡಗಳಲ್ಲೂ ನಮ್ಮ ಖಾಸಗಿ ಆ ಗಳಿವೆ. ಮೈಸೂರು‌ ನಗರದಲ್ಲೇ ನಮ್ಮ ಹಲವಾರು ಜಮೀನನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಒಬ್ಬರ ಜಮೀನು ವಶಕ್ಕೆ ಪಡೆದು ಬದಲಿ ನಿವೇಶನ ಕೊಡುವುದಾದರೆ ನಮ್ಮ ಜಮೀನನ್ನು ವಶಕ್ಕೆ ಪಡೆದ ಮೇಲೆ ಬದಲಿ ಜಮೀನನ್ಮು ನಮಗೂ ಕೊಡಬೇಕಲ್ಲವೆ? ಹಾಗಾದರೆ ಒಬ್ಬರಿಗೊಂದು ನ್ಯಾಯವೆ ಎಂದು ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿರುವ ನಿವೇಶನದ ಕುರಿತು ಪರೋಕ್ಷವಾಗಿ ಪ್ರಶ್ನಿಸಿದರು.

ದಿವಂಗತ ಶ್ರೀಕಂಠದತ್ತ ಚಾಮರಾಜ ಒಡೆಯರ್ ಅವರು ಆವತ್ತಿನ ಸಂದರ್ಭಕ್ಕೆ ಮತ್ತು ಅಂದಿನ ಪರಿಸ್ಥಿತಿಯಲ್ಲಿ ಚಾಮುಂಡಿ ಬೆಟ್ಟ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು ನಿಜ. ಆದರೆ ಇಂದಿನ‌ ಪರಿಸ್ಥಿತಿ ಬೇರೆ ಇದೆ. ರಾಜ್ಯ ಸರ್ಕಾರ ನಮಗೆ ನಿರ್ವಹಣೆ  ಮಾಡಿ ಎಂದರೆ ಅದನ್ನು ಮುಂದೆ ನೋಡುತ್ತೇವೆ ಎಂದು ಹೇಳಿದರು.

ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ:

ಮೈಸೂರು ನಗರದ ಕುರುಬಾರಹಳ್ಳಿ ಸರ್ವೆ 4 ಒಟ್ಟು 250 ಎಕರೆ ಆಸ್ತಿಯನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದು ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಿ ಹಂಚಿಕೆಯನ್ನು ಮಾಡಿತ್ತು.‌ ಈ ಸಂಬಂಧ ಕಾನೂನು ಹೋರಾಟ ಮಾಡಿ ಸುಪ್ರೀಂ ಕೋಟ್೯ ನಲ್ಲಿ ನಮ್ಮಂತೆ ಆದೇಶ ಬಂದಿದೆ. ಆದರೆ ಅದನ್ನು ಬಿಟ್ಟುಕೊಡಬೇಕು ಎಂಬ ಪರಿಜ್ಞಾನವೂ ರಾಜ್ಯ ಸರ್ಕಾರಕ್ಕೆ ಇಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದರ ವಿರುದ್ಧವೂ ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ರಾಜ್ಯ ಸರ್ಕಾರ ಎಷ್ಟೇ ವಿಳಂಬ ಮಾಡಿದರೂ ಮುಂದೆ ಒಂದು ದಿನ ನಮಗೆ ಕೊಡಲೇ ಬೇಕಲ್ಲವೇ ಎಂದು ಸುಮ್ಮನಿದ್ದೇವೆ ಎಂದು ಪ್ರಮೋದಾದೇವಿ ಹೇಳಿದರು.

ನನ್ನ ಮಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದನಾಗಿರಬಹುದು. ಅದಕ್ಕೂ ನಮ್ಮ ಖಾಸಗೀ ಆಸ್ತಿಗೂ ಸಂಬಂಧವಿಲ್ಲ. ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆತರ್ ಅವರು ನಾಲ್ಕು ಬಾರಿ ಸಂಸದರಾಗಿದ್ದರು. ಆವಾಗಲೇ ರಾಜಕೀಯ ಪ್ರಭಾವ ಬಳಸಿ ನಮ್ಮ ಖಾಸಗಿ ಆಸ್ತಿಗಳನ್ನು ವಶಕ್ಕೆ ಪಡೆಯಲಿಲ್ಲ ಈಗ ರಾಜಕೀಯ ಪ್ರಭಾವ ಬಳಸುತ್ತೇನೆಯೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಮ್ಮ ಖಾಸಗಿ ಆಸ್ತಿಗಳನ್ನು ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ಅದನ್ನು ಯಾವುದೇ ರಾಜಕೀಯ ಪ್ರಭಾವ ಬಳಸದೆ ಕಾನೂನು ಮೂಲಕವೇ ಹೋರಾಟ ಮಾಡಿ ಅವುಗಳೆಲ್ಲವನ್ನು ವಶಕ್ಕೆ ಪಡೆಯುತ್ತೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News