ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಚಾಮುಂಡೇಶ್ವರಿ ಪ್ರೇರಣೆ ನೀಡಲಿ: ನಾಡೋಜ ಹಂ.ಪ.ನಾಗರಾಜಯ್ಯ

Update: 2024-10-03 05:42 GMT

ಮೈಸೂರು, ಅ.3: ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ. ಈ ಸಮಸ್ಯೆಯಿಂದ ಯುವಜನರು ಹತಾಶರಾಗಿದ್ದಾರೆ. ಆದ್ದರಿಂದ ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ ಎಂದು ದಸರಾ ಉದ್ಘಾಟಕ ನಾಡೋಜ ಸಾಹಿತಿ ಹಂ.ಪ.ನಾಗರಾಜಯ್ಯ ಹೇಳಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಗುರುವಾರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ಕ್ಕೆ ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವೇರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

ಅವರ ಭಾಷಣದ ಪೂರ್ಣ ರೂಪ ಇಂತಿದೆ....

ಪ್ರಭುತ್ವಗಳಲ್ಲಿ ಪ್ರಜಾಪ್ರಭುತ್ವ ಮುಡಿಯ ಮಾಣಿಕ್ಯ ಕಳೆದ ತಿಂಗಳು ಸೆಪ್ಟೆಂಬರ್ 15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಚಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಬಹುತ್ವದ ಮಹತ್ವವನ್ನು ಮನಗಾಣಿಸುವ ವಿಶ್ವದಾಖಲೆಯ ಮಾನವ ಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂ ಅಭಿನಂದನಾರ್ಹವೂ ಆಗಿದೆ.

ವರಸೆ ವರಸೆಯಾಗಿ ಆನೇಕ ಭಾಗ್ಯಗಳ ಮಳೆಗರೆದಿರುವ ಈ ಸರ್ಕಾರ ನಡೆಸಿದ ಅರ್ಥಪೂರ್ಣವಾದ ಮಾನವಸರಪಣಿ ಯೋಜನೆಯೂ ಅಮೂರ್ತರೂಪದ ಇನ್ನೊಂದು ಸೃಜನಾತ್ಮಕಭಾಗ್ಯವೆಂದೇ ಪರಿಗಣಿಸುತ್ತೇನೆ. ಏಕೆಂದರೆ ಸೇತುವೆಗಳನ್ನು ಧ್ವಂಸ ಮಾಡಿ ಕಂದರ ಪ್ರಪಾತಗಳನ್ನು ನಿರ್ಮಿಸುತ್ತಿರುವ ದುರಂತವನ್ನು ನಿವಾರಿಸಲು ಮನುಷ್ಯ ಮನುಷ್ಯರನ್ನು, ರಾಷ್ಟ್ರ ರಾಷ್ಟ್ರಗಳನ್ನು ಕೂಡಿಸುವ ಸರಪಳಿಗಳು ಇಂದಿನ ಜರೂರು.

ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬದ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವದು ಆ ಪರಿಕಲ್ಪನೆಯ ಮುಂದುವರಿಕೆಯಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸಿದ್ಧಾಂತವನ್ನು ಮಾನ್ಯಮಾಡಿದಂತೆ. ಜನಮುಖ ಕಾಳಜಿಯನ್ನು ಎತ್ತಿಹಿಡಿದಂತೆ. ಈ ಪವಿತ್ರ ದಸರಾ ಉತ್ಸವಸರಣೆ ಕಾರ್ಯಕ್ರಮದ ಉದ್ಘಾಟನೆಯನ್ನು, ನಮ್ಮ ನಾಡಿನ ಪ್ರಜೆಗಳ ಪರವಾಗಿ, ವಿನಯ ಮತ್ತು ಧನ್ಯತಾ ಭಾವದಿಂದ ನೆರವೇರಿಸುತ್ತಿದ್ದೇನೆ.

ಆಸ್ತಿಕತೆ ನಾಸ್ತಿಕತೆ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ, ದೇವಾಲಯಕ್ಕೆ ಬಂದವರೆಲ್ಲಾ ಆಸ್ತಿಕರೆಂದಾಗಲಿ, ಒಳಗೆ ಬರದೆ ದೂರ ಉಳಿದವರೆಲ್ಲ ನಾಸ್ತಿಕರೆಂದಾಗಲಿ ಅಲ್ಲ. ಎಲ್ಲ ದೇಶ ಕಾಲಗಳಲ್ಲೂ ಸಮಾಜ ಮಾನ್ಯ ಮಾಡಿದ ಶಿಷ್ಟ ಪರಂಪರೆಯ ಪ್ರೋತವೊಂದು ಜೀವಂತವಾಗಿರುತ್ತದೆ. ಕನ್ನಡಿಗರು ಹತ್ತುದಿನಗಳ ಈ ದೊಡ್ಡ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಕೆಲವು ಹಬ್ಬಗಳು ಆಯಾ ಮತಧರ್ಮದವರಿಗಷ್ಟೇ ಸೀಮಿತವಾಗಿರುತ್ತದೆ. ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವ ಜನಾಂಗದ ಹಬ್ಬ.

ಅನೇಕ ಹಬ್ಬಗಳು ಒಂದೆರಡು ದಿನಗಳಿಗೆ ಸೀಮಿತವಾದರೆ ದಸರೆಯು ಪಾಡ್ಯದಂದು ಅಡಿಯಿಟ್ಟು ಬಿದಿಗೆ ತದಿಗೆಗಳನ್ನು ದಾಟಿ ದಶಮಿಯವರೆಗೆ ಹತ್ತುದಿನಗಳು ನಡೆಯುವ ಪರ್ವ, ಮೈಸೂರು ಒಡೆಯರು ಶ್ರದ್ಧಾಭಕ್ತಿಗಳಿಂದ ವೈಭವದಿಂದ ಆಚರಿಸಿದರು. ಅದು ನಾಡಿನ ಉದ್ದಗಲಗಳಲ್ಲಿ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ನನ್ನ ಬಾಲ್ಯದ ನೆನಪು ಮರುಕಳಿಸುತ್ತಿದೆ. ಪ್ರತಿವರ್ಷ ನವರಾತ್ರಿಯಲ್ಲಿ ನನ್ನ ತಾಯಿ ಜಾಕಾಯಿ ಪೆಟಾರಿಯಿಂದ ತನ್ನ ತವರುಮನೆಯ ಬಳುವಳಿಯಾಗಿ ತಂದಿದ್ದ ಎರಡು ಬಚ್ಚಣಿಗೆ ಬೊಂಬೆ ಮತ್ತಿತರ ಪ್ರದರ್ಶನ ವಸ್ತುಗಳನ್ನು ತೆಗೆದು ಕೊಡುತ್ತಿದ್ದರು. ನನ್ನ ತಮ್ಮತಂಗಿಯರೊಂದಿಗೆ ನೂರಾರು ಬೊಂಬೆಗಳನ್ನು ಅಲಂಕರಿಸಿ ಮೆಟ್ಟಿಲು ಮೆಟ್ಟಿಲಾಗಿ ಪೇರಿಸಿದ ಹಲಗೆಗಳ ಮೇಲೆ ಒಪ್ಪವಾಗಿ ಜೋಡಿಸುತ್ತಿದ್ದೆವು. ಮರದಲ್ಲಿ ಮಾಡಿದ ಆ ಎರಡು ಬಚ್ಚಣಿಗೆ ಬೊಂಬೆಗಳನ್ನು ದೂರ ದೂರ ಇಟ್ಟರೆ ನನ್ನತಾಯಿ ಕೂಡಲೆ ಮಕ್ಕಳೇ ಅವು ಎರಡಿದ್ದರೂ ಒಂದೇನೆ. ಅವು ಜೋಡಿ, ಅವು ಶಾಶ್ವತ ದಂಪತಿಗಳು, ಅವನ್ನು ಅಗಲಿಸಬಾರದು. ಈ ಬೊಂಬೆಗಳಂತೆ ಆಗಲದೆ ಗಂಡಹೆಂಡತಿ ಬಾಳಿ ಎಂದು ನನ್ನ ತಾಯಿತಂದೆ ಹರಸಿ ಕೊಟ್ಟಿರುವರು. ಇವು ಬರೀ ಮರದ ಬೊಂಬೆಗಳಲ್ಲ, ಮನೆ ಬೆಳಗುವ ಜೋಡಿ." ನನ್ನಮ್ಮ ಹೇಳಿದ ಮಾತುಗಳನ್ನು ಈಗಲೂ ಮೆಲಕು ಹಾಕುತ್ತೇನೆ. ಜೋಡಿ, ಬೊಂಬೆಗಳು ಆದರ್ಶವನ್ನು ಬಿತ್ತುವ ರೂಪಕಗಳು, ಮೆಟಫರ್ಸ್, ಆರಮನೆ, ರಾಜರಾಣಿ, ದೇವತೆಗಳು, ಇತ್ಯಾದಿ ಮಾತುಗಳು ಆಲಂಕಾರಿಕ ರೂಪಕಗಳು. ಸಹನೆ ಸೌಹಾರ್ದದಿಂದ ಬಾಳಿದರೆ, ನೆಮ್ಮದಿ ಇದ್ದರೆ ಪ್ರತಿ ಮನೆಯೂ ಅರಮನೆಯೇ, ಎಲ್ಲರೂ ರಾಜರಾಣಿಯರೇ.

ನವರಾತ್ರಿಯ ತೆಂಕಣಗಾಳಿಗೆ ಮೈಸೂರು ಮೈಕೊಡವಿ, ಪೊರೆಬಿಟ್ಟು, ಶೃಂಗಾರಗೊಂಡು, ಕಂಗೊಳಿಸುತ್ತದೆ. ಮೈಸೂರೆಂದರೆ ದಸರ, ಜಂಬೂಸವಾರಿ ಎಂಬ ಮಾತು ಲೋಕಪ್ರಸಿದ್ಧಿ ಪಡೆಯಿತು. ಪ್ರಜಾಪ್ರಭುತ್ವ ಬಂದಮೇಲೆ ಕೆಲವು ಬದಲಾವಣೆ ಆದುವು. ಈ ಬದಲಾವಣೆ ಸ್ವರೂಪದಲ್ಲೇ ಹೊರತು ಸತ್ವದಲ್ಲಿ ಅಲ್ಲ. ಚುನಾಯಿತ ಸರಕಾರ ಈ ಹಬ್ಬವನ್ನು ಜನಮುಖಿಯಾಗಿಸಿದರು. ಇದು ಅರಮನೆಯ ಹಬ್ಬವಲ್ಲ, ಜನರು ಆರಿಸಿದ ಸರಕಾರ ನಡೆಸುವ ಉತ್ಸವವನ್ನಾಗಿಸಿ ಇನ್ನಷ್ಟು ಅರ್ಥಪೂರ್ಣವಾಗಿ ಹಿಂದಿನಂತೆಯೇ ಸಂಭ್ರಮದಿಂದ ನಡೆಸುತ್ತಿದ್ದಾರೆ. ಸರಕಾರ ಮತ್ತು ಜನರು ಒಟ್ಟಿಗೆ ಹೆಜ್ಜೆ ಹಾಕುವ ಈ ನಾಡ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಾಯಃ ಇನ್ನು ಮುಂದಿನ ತಲೆಮಾರಿಗೆ ಸಿಗದೆ ಮರೆಯಾಗಬಹುದಾದ ಈ ಮಣ್ಣಿನ ಈ ನೆಲದ ಘಮಲು, ದೇಸಿಯ ಸೊಗಡು ತುಂಬಿರುವ ಹಬ್ಬ ನಿಲ್ಲಬಾರದು. ಈ ಆಚರಣೆಯಿಂದ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕಿರು ಪರಿಚಯ ಇಂದಿನ ಹೊಸ ತಲೆಮಾರಿನವರಿಗೆ ಆಗುತ್ತದೆ. ದೇಹಿ ವಾದ್ಯ ಮೇಳಗಳು, ಕಲೆ, ಕುಣಿತ, ಹಾಡು, ಸ್ತಬ್ಧಚಿತ್ರಗಳು, ಬಣ್ಣದ ವೇಷಗಳು, ಕುದುರೆಗಳ ಸಂಚಲನ, ಜಂಬೂ ಸವಾರಿ, ಮುಂತಾದವುಗಳ ಪರಿಚಯ ಶಾಲಾಕಾಲೇಜಲ್ಲಿ ಸಿಗುವುದಿಲ್ಲ. ಹೊಸ ತಲೆಮಾರಿಗೆ ನಮ್ಮ ನಾಡಿನ ಬಹುರೂಪಿ ಸಂಸ್ಕೃತಿಯ ಮತ್ತು ಆಸ್ಥಿತೆಯ ಆಯಾಮ ಅನುಭವವಾಗುತ್ತದೆ.

ದಸರ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ಇನ್ನು ಮುಂದೆಯೂ ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ನಾಡಿನ ಉದ್ದಗಲಗಳಲ್ಲಿ ಗರಡಿಮನೆಗಳು ಇದ್ದುವು. ನಾನು ಮಂಡ್ಯದಲ್ಲಿ ಆರನೆಯ ತರಗತಿ ವಿದ್ಯಾರ್ಥಿ ಆಗಿದ್ದಾಗ 1948ರಲ್ಲಿ ನಡೆದ ಘಟನೆ ನೆನಪಾಗುತ್ತದೆ. ಆಗ ಮೈಸೂರು ಉಸ್ತಾದ್ ಟೈಗರ್ ರಾಮು ಎಂಬ ಪೈಲ್ವಾನರು ತುಂಬಾ ಜನಪ್ರಿಯರಾಗಿದ್ದರು. ಅದನ್ನು ಕಂಡು ನಾನು ಪೈಲ್ವಾನ್ ಆಗಬೇಕೆಂದು ಗರಡಿ ಮನೆಗೆ ಹೋಗುತ್ತಿದ್ದೆ. ತಲೆತುಂಬ ಗುಂಗರು ಕೂದಲಿತ್ತು. ಆದರೆ ಉಸ್ತಾದ್ ಕಾಳಪ್ಪನವರು ಗರಡಿಯಲ್ಲಿ ಕ್ರಾಪು ಸರಿಯಲ್ಲವೆಂದರು, ಸರಿ ನಾನು ತಲೆಬೋಳಿಸಿ ಮನೆಗೆ ಹೋದೆ. ನಮ್ಮ ಚಿಕ್ಕಪ್ಪ 'ಎಂಥಾ ತಪ್ಪು ಮಾಡಿದೆಯೋ ಬೇಕೂಫ, ತಂದೆ ಬದುಕಿರುವಾಗ ತಲೆಬೋಳಿಸಿ ಅಪಶಕುನವಾಯಿತು' ಎಂದು ಚೆನ್ನಾಗಿ ಬೈದು ಗರಡಿಮನೆಗೆ ಕಾಲಿಡದಂತೆ ಮಾಡಿದರು. ಆದರಿಂದ ಈ ನಾಡಿಗೆ ಒಬ್ಬ ಶ್ರೇಷ್ಠ ಪೈಲ್ವಾನ ಸಿಗಬಹುದಾದ ಅವಕಾಶ ತಪ್ಪಿತಲ್ಲಾ ಎಂದು ಈಗಲೂ ವ್ಯಸನವಿದೆ!

ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮು ಮಾಡಿರಬೇಕೆಂಬ ಗುಮಾನಿ ನನಗಿದೆ. ಹೌದು ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ, ಆದರೆ ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ.

ಅಭೀಷ್ಟವರಪ್ರದಾಯಿನಿ ಎಂದು ಭಕ್ತರು ಆರಾಧಿಸುವ ದೇವಿ ಚಾಮುಂಡಾಂಬಿಕೆಗೆ ಪೊಡಮಟ್ಟು ಮೂರು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ.

ಇಸ್ರೇಲ್-ಪ್ಯಾಲಸ್ಟೈನ್, ರಷಿಯಾ-ಉಕ್ರೈನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕನ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೇ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕೆಂದು ಬೇಡುತ್ತೇನೆ.

ಹೆಣ್ಣು ಭ್ರೂಣ ಹತ್ಯೆ ತಡೆಯಲೂ ಚಾಮುಂಡಾದೇವಿಯು ತಾಯಿತಂದೆಯರಿಗೆ ಸದ್ಬುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ, ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೆ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಾಸನ ಸಭೆ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗ ಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ ಖಂಡನೀಯ ಕೂಡ.

ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ.

ಕನ್ನಡ ನಾಡು ನುಡಿ ನೆಲ ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ವಿನಂತಿಸುತ್ತೇನೆ.

ಸರಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ. ಕೆಡವುವುದು ಸುಲಭ, ಕಟ್ಟುವುದು ಕಷ್ಟ ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ, ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿ. ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದುವರ್ಷದಲ್ಲಿ ಸಜ್ಜಾಗಬಹುದು.

ದಿನನಿತ್ಯ ಪತ್ರಿಕೆಗಳಲ್ಲಿ ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಆವಾಚ್ಯ ಶಬ್ದಗಳ ಬಳಕೆ ಓದಿ. ಯುವಕರು ಇದನ್ನೇ ಮಾದರಿಯಾಗಿ ಮುಂದುವರಿಸಿದರೆ ಏನು ಗತಿ ಎಂದು ಜನರು ಬೇಸರಗೊಂಡಿದ್ದಾರೆ. ತಾಯಿ ಚಾಮುಂಡೇಶ್ವರೀದೇವಿ, ಇನ್ನು ಮುಂದೆ ಈ ಪದ್ಧತಿ ನಿಂತು ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಹಮ್ಮಿಕೊಂಡಿರುವ ಯೋಜನೆ ಯೋಚನೆಗಳನ್ನು ನಿರೂಪಿಸುವಂತೆ ಸ್ಫೂರ್ತಿ ಕೊಡಬೇಕೆಂದು ಪ್ರಾರ್ಥಿಸುತ್ತೇನೆ.

ಕರ್ನಾಟಕದ ಜನರ ಪ್ರತಿನಿಧಿಯಾಗಿ ಈ ನಾಡ ಹಬ್ಬವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ನನ್ನ 88 ವರ್ಷದ ದೀರ್ಘ ಜೀವನದಲ್ಲಿ ಮರೆಯಲಾಗದ ಮಧುರ ಸ್ಮೃತಿಯ ಕ್ಷಣಗಳನ್ನು ಕಲ್ಪಿಸಿಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಸರಕಾರಕ್ಕೆ ಅಂತಃಕರಣ ತುಂಬಿದ ಕೃತಜ್ಞತೆಗಳು.

ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರುವರ್ಷ ಸಹಪಾತಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ.

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News