ಮಧ್ಯಪ್ರದೇಶ: ಚುನಾವಣಾ ಕಣಕ್ಕಿಳಿದ ಬಿಜೆಪಿಯ ಮೂವರು ಕೇಂದ್ರ ಸಚಿವರು, ಏಳು ಸಂಸದರು!

Update: 2023-09-26 02:14 GMT

ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿರುವ ಬಿಜೆಪಿ ಕಳೆದ 39 ದಿನಗಳಲ್ಲಿ ಎರಡನೇ ಬಾರಿಗೆ ಮತ್ತೊಂದು ಅಚ್ಚರಿಯ ಕಾರ್ಯತಂತ್ರವನ್ನು ಪ್ರದರ್ಶಿಸಿದೆ. ವಿಧಾನಸಭಾ ಚುನಾವಣೆಗೆ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಅಧಿಕಾರಾರೂಢ ಬಿಜೆಪಿ, ಏಳು ಮಂದಿ ಸಂಸದರು ಮತ್ತು ಮೂವರು ಕೇಂದ್ರ ಸಚಿವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ 19 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಬಿಜೆಪಿ ಇದೀಗ 230 ಕ್ಷೇತ್ರಗಳ ಪೈಕಿ 78 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಬಹುಶಃ ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಆಗಸ್ಟ್ 17ರಂದು 39 ಮಂದಿಯ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

ಏಳು ಮಂದಿ ಸಂಸದರು ಮತ್ತು ವಿಜಯವರ್ಗೀಯ ಅವರನ್ನು ಕಣಕ್ಕೆ ಇಳಿಸುವ ಮೂಲಕ ಪಕ್ಷದ ಸಿಎಂ ಅಭ್ಯರ್ಥಿಯನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಪಕ್ಷ ಮಾಡುತ್ತಿದೆ ಎನ್ನುವ ಅಭಿಪ್ರಾಯವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ. ಸುಧೀರ್ಘ ಅವಧಿಗೆ ಸಿಎಂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಥವಾ ಇತರ ಯಾವುದೇ ಮುಖಂಡರನ್ನು ಸಿಎಂ ಅಭ್ಯರ್ಥಿ ಎಂದು ಪಕ್ಷ ಇದುವರೆಗೆ ಘೋಷಿಸಿಲ್ಲ.

ಕ್ಷತ್ರಿಯ ಮುಖಂಡ ನರೇಂದ್ರ ಸಿಂಗ್ ಥೋಮರ್ (ದಿಮಾನಿ), ಪ್ರಹ್ಲಾದ್ ಪಟೇಲ್ (ನರಸಿಂಗಪುರ) ಮತ್ತು ಫಗ್ಗಾನ್ ಸಿಂಗ್ ಕುಲಸ್ತೆ (ನಿವಾಸ್), ವಿಧಾನಸಭಾ ಕಣಕ್ಕೆ ಧುಮುಕುವ ಕೇಂದ್ರ ಸಚಿವರು. ಗಣೇಶ್ ಸಿಂಗ್ (ಸಾತ್ನಾ), ರಾಕೇಶ್ ಸಿಂಗ್ (ಜಬಲ್ಪುರ), ರಿತಿ ಪಾಠಕ್ (ಸಿಧಿ) ಅವರು ಕಣದಲ್ಲಿರುವ ಸಂಸದರು. ಆರು ಬಾರಿಯ ಶಾಸಕ ಕೈಲಾಶ್ ವಿಜಯವರ್ಗೀಯ ಅವರು ಇಂಧೋರ್-1 ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದು, ಹಾಲಿ ಕಾಂಗ್ರೆಸ್ ಶಾಸಕ ಸಂಜಯ್ ಶುಕ್ಲಾ ವಿರುದ್ಧ ಸೆಣೆಸುವರು. ಹತ್ತು ವರ್ಷಗಳ ಬಳಿಕ ವಿಜಯವರ್ಗೀಯ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News