ತೀವ್ರಗೊಂಡ 'ಇಂಡಿಯಾ'-ಭಾರತ್ ಚರ್ಚೆ

Update: 2023-07-19 03:14 GMT

ಹೊಸದಿಲ್ಲಿ: ಯುಪಿಎ ಒಕ್ಕೂಟವನ್ನು 'ಇಂಡಿಯಾ' (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲಯನ್ಸ್) ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ, ಇಂಡಿಯಾ ಮತ್ತು ಭಾರತ್ ಪರಿಕಲ್ಪನೆಗಳ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಹೊಂದಿದ ರಾಷ್ಟ್ರ ಮತ್ತು ಜನತೆ ಹಾಗೂ ಪ್ರದೇಶಗಳ ಆಕಾಂಕ್ಷೆಯನ್ನು ಒಳಗೊಂಡ ನವಭಾರತ ಎಂದು ವಿಶ್ಲೇಷಿಸಿದ್ದಾರೆ. ಏತನ್ಮಧ್ಯೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತಮ್ಮ ಟ್ವಿಟ್ಟರ್ ವಿವರಗಳಿಂದ ಇಂಡಿಯಾ ಎಂಬ ಪದವನ್ನು ಕಿತ್ತು ಹಾಕಿ ಭಾರತ್ ಎಂದು ಹಾಕಿಕೊಂಡಿದ್ದಾರೆ.

ಇಂಡಿಯಾ ಎಂದರೆ ಭಾರತ ಅಲ್ಲ ಎಂದು ಪ್ರತಿಪಾದಿಸಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ.

"ಯುಪಿಎ ಇಂಡಿಯಾ ಆದ ತಕ್ಷಣ ಬಿಜೆಪಿ ಎಂದರೆ ಭಾರತ ಎಂದಾಗಿದೆ. ನಮ್ಮ ನಾಗರೀಕತೆಯ ಸಂಘರ್ಷ ಭಾರತ ಹಾಗೂ ಇಂಡಿಯಾ ನಡುವೆ ಆಗಿದೆ. ಬ್ರಿಟಿಷರು ನಮ್ಮ ದೇಶವನ್ನು ಇಂಡಿಯಾ ಎಂದು ಹೆಸರಿಸಿದರು. ಈ ಸಾಮ್ರಾಜ್ಯಶಾಹಿ ಸಿದ್ಧಾಂತಗಳಿಂದ ನಾವು ಮುಕ್ತರಾಗಲು ಪ್ರಯತ್ನಿಸಬೇಕಾಗಿದೆ. ನಮ್ಮ ಪೂರ್ವಜರು ಭಾರತಕ್ಕಾಗಿ ಹೋರಾಡಿದರು ಮತ್ತು ನಾವು ಭಾರತಕ್ಕಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಭಾರತಕ್ಕಾಗಿ" ಎಂದು ಹಿಮಾಂತ ಟ್ವೀಟ್ ಮಾಡಿದ್ದಾರೆ.

ಇಂಡಿಯಾ ಮತ್ತು ಭಾರತ ನಡುವಿನ ವಿಶ್ಲೇಷಣೆಯನ್ನು ಕಾಂಗ್ರೆಸ್ ಮುಖಂಡರು ತಳ್ಳಿಹಾಕಿದ್ದು, ಇಂಡಿಯಾ ಎಂದರೆ ಭಾರತ ಹಾಗೂ ಒಕ್ಕೂಟ ಎನ್ನುವುದನ್ನು ನಮ್ಮ ಸಂವಿಧಾನ ಒತ್ತಿ ಹೇಳಿದೆ" ಎಂದು ಪ್ರತಿಪಾದಿಸಿದ್ದಾರೆ.

ಇಂಡಿಯಾ ಶಬ್ದವನ್ನು ಹಿಮಾಂತ ಬಿಸ್ವ ಟೀಕಿಸಿದ ಬಳಿಕ ಕಾಂಗ್ರೆಸ್ ಮುಖಂಡರು ನಿಮ್ಮ ಟ್ವಿಟ್ಟರ್ ವಿವರದಲ್ಲಿ ಇಂಡಿಯಾ ಎಂದು ಏಕೆ ಇದೆ ಹಾಗೂ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಎನ್ನುವ ಶಬ್ದಗಳು ಈಗ ಬದಲಾಗುತ್ತವೆಯೇ ಎಂದು ಅಣಕಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಮಾಂತ, "ಚೀಫ್ ಮಿನಿಸ್ಟರ್ ಆಫ್ ಅಸ್ಸಾಂ, ಭಾರತ್" ಎಂದು ತಮ್ಮ ಟ್ವಿಟ್ಟರ್ ಖಾತೆಯನ್ನು ಬದಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News