ಮುಸ್ಲಿಂ ಬಾಹುಳ್ಯದ ಮಲಪ್ಪುರಂ ಜಿಲ್ಲೆಯನ್ನು ‘ಬೇರೆಯದ್ದೇ ದೇಶ’ ಎಂದ ಈಳವ ಸಮುದಾಯದ ನಾಯಕ; ವ್ಯಾಪಕ ಆಕ್ರೋಶ

ವೆಲ್ಲಪ್ಪಲ್ಲಿ ನಟೇಶನ್ (Photo credit: Facebook/@V.K.Natesan)
ಮಲಪ್ಪುರಂ : ಮುಸ್ಲಿಂ ಬಾಹುಳ್ಯವಿರುವ ಮಲಪ್ಪುರಂ ಜಿಲ್ಲೆಯನ್ನು ʼಬೇರೆಯದ್ದೇ ದೇಶ ಮತ್ತು ವಿಶೇಷ ವರ್ಗದ ಜನರಿರುವ ರಾಜ್ಯʼ ಎಂದು ಈಳವ ಸಮುದಾಯದ ನಾಯಕ ವೆಲ್ಲಪ್ಪಲ್ಲಿ ನಟೇಶನ್ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿದರು.
ಶ್ರೀ ನಾರಾಯಣ ಧರ್ಮ ಪರಿಪಾಲನ(ಎಸ್ಎನ್ಡಿಪಿ) ಯೋಗಮ್ ಪ್ರಧಾನ ಕಾರ್ಯದರ್ಶಿಯಾಗಿರುವ ವೆಲ್ಲಪ್ಪಲ್ಲಿ ನಟೇಶನ್ ಮಾಡಿದ ಭಾಷಣ ಕೇರಳದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದೆ.
ಚುಂಗತಾರಾದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ವೆಲ್ಲಪ್ಪಲ್ಲಿ ನಟೇಶನ್, ಮಲಪ್ಪುರಂನಲ್ಲಿ ಶುದ್ಧ ಗಾಳಿಯನ್ನು ಉಸಿರಾಡುವ ಮೂಲಕ ನೀವು ಬದುಕಬಹುದು ಎಂದು ನಾನು ಭಾವಿಸುವುದಿಲ್ಲ. ಸ್ವತಂತ್ರ ಅಭಿಪ್ರಾಯವನ್ನು ಹೇಳುವ ಮೂಲಕ ನೀವು ಬದುಕಬಹುದು ಎಂದು ನಾನು ಭಾವಿಸುವುದಿಲ್ಲ. ಮಲಪ್ಪುರಂ ವಿಭಿನ್ನ ದೇಶವಾಗಿದೆ. ಇದು ವಿಭಿನ್ನ ಜನರ ರಾಜ್ಯವಾಗಿದೆ. ಸ್ವಾತಂತ್ರ್ಯ ಬಂದು ದಶಕಗಳಿಂದ ಹಿಂದುಳಿದ ಸಮುದಾಯಗಳಿಗೆ ಏನಾದರು ಲಾಭವಾಗಿದೆಯೇ ಎಂದು ಪ್ರಶ್ನಿಸಿದರು.
2011ರ ಜನಗಣತಿಯ ಪ್ರಕಾರ ಮಲಪ್ಪುರಂ ಜಿಲ್ಲೆಯಲ್ಲಿ 70%ಕ್ಕಿಂತ ಹೆಚ್ಚು ಮುಸ್ಲಿಮರು ವಾಸಿಸುತ್ತಿದ್ದಾರೆ. 27.6% ಹಿಂದೂ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಮಲಪ್ಪುರಂ ಜಿಲ್ಲೆಯ ಬಗ್ಗೆ ಈಜವ ಸಮುದಾಯದ ನಾಯಕನ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.