ತನ್ನ ವಿರುದ್ಧ ಆರೋಪ ಸಾಬೀತುಪಡಿಸಲು ಕೇಂದ್ರ ಸರಕಾರ ವಿಫಲ: ನ್ಯೂಸ್ ಕ್ಲಿಕ್

Update: 2023-10-04 15:34 GMT

Photo: newsclick.com

ಹೊಸದಿಲ್ಲಿ: ತಾನು ಅಕ್ರಮವಾಗಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿದ್ದೇನೆಂದು ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ಸಾಬೀತುಪಡಿಸಲು ಕೇಂದ್ರ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದು ‘ನ್ಯೂಸ್ ಕ್ಲಿಕ್ ’ ಸುದ್ದಿಜಾಲತಾಣ ಬುಧವಾರ ಹೇಳಿದೆ. ‘ನ್ಯೂಸ್ ಕ್ಲಿಕ್ ’ ಚೀನಾದಿಂದ ದೇಣಿಗೆ ಸ್ವೀಕರಿಸಿದೆಯೆದೆಂಬ ಆರೋಪಗಳ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರ ವಿಶೇಷ ದಳವು ಸುದ್ದಿಜಾಲತಾಣದ ಜೊತೆ ನಂಟು ಹೊದಿರುಪವ ಹಲವಾರು ಪತ್ರಕರ್ತರ ನಿವಾಸದ ಮೇಲೆ ದಾಳಿ ನಡೆಸಿತ್ತು ಹಾಗೂ ಸುದ್ದಿಜಾಲತಾಣದ ಕಚೇರಿಗೆ ಬೀಗಮುದ್ರೆ ಹಾಕಿದೆ.

ಈ ಬಗ್ಗೆ ನ್ಯೂಸ್ ಕ್ಲಿಕ್ ಬುಧವಾರ ರಾತ್ರಿ ಹೇಳಿಕೆಯೊಂದನ್ನು ನೀಡಿ, ‘‘ನಮ್ಮ ವಿರುದ್ಧ ಹೊರಿಸಲಾದ ಆರೋಪಗಳ ಕುರಿತಾದ ನಿಖರ ವಿವರಗಳನ್ನಾಗಲಿ ಅಥವಾ ಎಫ್ಐಆರ್ ಪ್ರತಿಯನ್ನಾಗಲಿ ಪೊಲೀಸರು ನೀಡಿಲ್ಲ’’ ಎಂದು ಹೇಳಿದೆ.

ಕಚೇರಿಯ ಆವರಣದಿಂದ ಹಾಗೂ ಅದರ ಉದ್ಯೋಗಿಗಳ ನಿವಾಸಗಳಿಂದ ಯಾವುದೇ ಕಾನೂನಾತ್ಮಕ ನಿಯಮಗಳನ್ನು ಅನುಸರಿಸದೆಯೇ ಇಲೆಕ್ಟ್ರಾನಿಕ್ ಸಲಕರಣೆಗಳು, ದಾಖಲೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಭಯೋತ್ಪಾದನೆ ನಿಗ್ರಹ ಕಾನೂನಿನಡಿ ತನ್ನ ವಿರುದ್ಧ ಪ್ರಕರಣ ದಾಖಲಿಸಿರುವುದು , ಕೇಂದ್ರ ಸರಕಾರದ ವಿರುದ್ಧ ಯಾವುದೇ ಟೀಕೆಯನ್ನು ಮಾಡುವುದನ್ನು ದೇಶದ್ರೋಹ ಅಥವಾ ರಾಷ್ಟ್ರವಿರೋಧಿಯೆಂದು ಪರಿಗಣಿಸಲಾಗುವುದು ಎಂದು ಬೆದರಿಸುವ ಉದ್ದೇಶದಿಂದ ಕೂಡಿದೆ ಎಂದು ‘ನ್ಯೂಸ್ ಕ್ಲಿಕ್ ’ ತಿಳಿಸಿದೆ.

ತನ್ನ ಎಲ್ಲಾ ಮಾಹಿತಿ, ದಾಖಲೆಗಳುಹಾಗೂ ಸಂವಹನ ಉಪಕರಣಗಳನ್ನು ವಶಪಡಿಸಿಕೊಂಡಿರುವ ಹೊರತಾಗಿಯೂ ತನ್ನ ವಿರುದ್ಧದ ಯಾವುದೇ ಆರೋಪಗಳನ್ನು ದೃಢಪಡಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ತನ್ನ ವಿರುದ್ಧ ಕರಾಳವಾದ ಯುಎಪಿಎ ಕಾನೂನನ್ನು ಹೇರಲು ಅದಕ್ಕೆ ನ್ಯೂಯಾರ್ಕ್ ಟ್ರೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಬೋಗಸ್ ಲೇಖನವೊಂದು ಬೇಕಾಯಿತು. ರೈತರು, ಕಾರ್ಮಿಕರು ಹಾಗೂ ಸಮಾಜದ ಇತರ ನಿರ್ಲಕ್ಷಿತ ವರ್ಗಗಳನ್ನೊಳಗೊಂಡ ವಾಸ್ತವಿಕ ಭಾರತದ ಕಥೆಯನ್ನು ಪ್ರಸ್ತುತಪಡಿಸುವ ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಹಾಗೂ ಅದುಮಿಡುವ ಪ್ರಯತ್ನ ಇದಾಗಿದೆ ಎಂದು ನ್ಯೂಸ್ ಕ್ಲಿಕ್ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾ ಪರವಾಗಿ ಪ್ರಚಾರ ಮಾಡಲು ನ್ಯೂಸ್ ಕ್ಲಿಕ್ ಸುದ್ದಿಜಾಲತಾಣವು ಅಮೆರಿಕ ಮೂಲದ ಮಿಲಿಯಾಧೀಶ ನೆವಿಲ್ ರಾಯ್ ಸಿಂಗಂ ಅವರಿಗೆ ಸೇರಿದ ನೆಟ್ವರ್ಕ್ ಮೂಲಕ ಭಾರೀ ಮೊತ್ತದ ನಿಧಿಗಳನ್ನು ಪಡೆದಿದೆಯೆಂದು ನೂಯಾರ್ಕ್ ಟೈಮ್ಸ್ ದೈನಿಕವು ಆಗಸ್ಟ್ 5ರಂದು ವರದಿ ಮಾಡಿತ್ತು.

ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ದಳಕ್ಕೆ ಭಾರತೀಯ ದಂಡಸಂಹಿತೆಯಡಿ ನ್ಯೂಸ್ ಕ್ಲಿಕ್ ವಿರುದ್ಧ ಒಂದೇ ಒಂದು ದೋಷಾರೋಪ ದಾಖಲಿಸಲು ಸಾಧ್ಯವಾಗಿಲ್ಲ ಎಂದು ನ್ಯೂಸ್ ಕ್ಲಿಕ್ ಹೇಳಿಕೆ ತಿಳಿಸಿದೆ.

ಮಂಗಳವಾರ ತನ್ನ ನಿವಾಸದ ಮೇಲೆ ನಡೆದ ದಾಳಿ ಕಾರ್ಯಾಚರಣೆಯ ಸಂದರ್ಭದಲ್ಲಿ ದಿಲ್ಲಿ ಪೊಲೀಸರು ತನ್ನ ಬಳಿಕ 2020ರ ದಿಲ್ಲಿ ಗಲಭೆ ಹಾಗೂ 2919-20ರಲ್ಲಿ ದಿಲ್ಲಿಯ ಶಾಹೀನ್ ಭಾಗ್ ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ತಾನು ಮಾಡಿರುವ ವರದಿಗಾರಿಕೆಗಳ ಬಗ್ಗೆ ಪ್ರಶ್ನಿಸಿದರೆಂದು ನ್ಯೂಸ್ ಕ್ಲಿಕ್ ಪತ್ರಕರ್ತ ಅಭಿಸಾರ್ ಶರ್ಮಾ ಅವರು ತಿಳಿಸಿದ್ದಾರೆ.

ನ್ಯೂಸ್ ಕ್ಲಿಕ್ ನ ಮುಖ್ಯಸಂಪಾದಕ ಪುರಕಾಯಸ್ಥಗೆ 7 ದಿನ ಪೊಲೀಸ್ ಕಸ್ಟಡಿ

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ಮಂಗಳವಾರ ಬಂಧಿತರಾಗಿದ್ದ ನ್ಯೂಸ್ ಕ್ಲಿಕ್ಮುಖ್ಯಸಂಪಾದಕ ಪುರಕಾಯಸ್ಥ ಹಾಗೂ ಮಾನವಸಂಪನ್ಮೂಲ ವಿಭಾಗದ ವರಿಷ್ಠ ಅಮಿತ್ ಚಕ್ರವರ್ತಿ ಅವರನ್ನು ಅವರಿಗೆ ಸ್ಥಳೀಯ ನ್ಯಾಯಾಲಯವು 7 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.

ಮಂಗಳವಾರ ದಿಲ್ಲಿ ಪೊಲೀಸರು ಪುರಕಾಯಸ್ಥ ಹಾಗೂ ಚಕ್ರವರ್ತಿ ಅವರಲ್ಲದೆ ನ್ಯೂಸ್ ಕ್ಲಿಕ್ ಬಳಗದ ಪತ್ರಕರ್ತರಾದ ಅಭಿಸಾರ್ ಶರ್ಮಾ, ಅವನಿಂದ್ಯೋ ಚಕ್ರವರ್ತಿ ಹಾಗೂ ಭಾಷಾ ಸಿಂಗ್ ಮತ್ತು ವಿಡಂಬನಕಾರ ಸಂಜಯ್ ರಜೌರಾ ಅವರ ನಿವಾಸಗಳ ಮೇಲೂ ದಾಳಿಸಿ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News