ಉತ್ತರ ಕನ್ನಡ ಪ್ರವಾಸಿ ತಾಣಗಳ ಮಾಹಿತಿಯ ‘ಕಾಫಿ ಟೇಬಲ್ ಬುಕ್’

ಕಾರವಾರ : ಉತ್ತರ ಕನ್ನಡ ಜಿಲ್ಲೆ ಪ್ರವಾಸಿ ತಾಣಗಳ ತವರು. ಧಾರ್ಮಿಕ ಕ್ಷೇತ್ರಗಳಿಂದ ಹಿಡಿದು, ಪ್ರಕೃತಿಯ ಸೌಂದರ್ಯಗಳನ್ನು ಸವಿಯಲು ದೇಶವಿದೇಶಗಳಿಂದ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಈ ನಡುವೆ ಪ್ರವಾಸಿಗರಿಂದ ದೂರ ಇರುವಂಥ ತಾಣಗಳತ್ತ ಗಮನ ಹರಿಸಲು ‘ಅನ್ಸೀನ್ ಉತ್ತರ ಕನ್ನಡ’ ಎನ್ನುವ ಶೀರ್ಷಿಕೆ ಅಡಿ ಅಧ್ಯಯನ ಮಾಡಿ ಪ್ರಚಾರ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿರುವ ಜಲಪಾತ, ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಕರಾವಳಿಯ ಕಡಲತೀರಗಳು, ಜಲಸಾಹಸಿ ಕ್ರೀಡೆಗಳು ನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತವೆ. ಇಂತಹ ಪ್ರವಾಸಿ ತಾಣಗಳಿಗೆ ರಾಜ್ಯದಿಂದ ಮಾತ್ರವಲ್ಲದೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸಿ ತೆರಳುತ್ತಾರೆ. ಆದರೆ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಹೊರತಾಗಿಯೂ ಅದೆಷ್ಟೋ ಪ್ರವಾಸಿ ತಾಣಗಳು ಅತ್ಯದ್ಭುತವಾಗಿವೆ. ಇಂತಹ ಪ್ರವಾಸಿ ತಾಣಗಳ ಸಂಪರ್ಕ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಇನ್ನಿತರ ಕಾರಣದಿಂದ ಪ್ರವಾಸಿಗರ ಕಣ್ಣಿನಿಂದ ದೂರವಾಗಿದ್ದು, ಕೇವಲ ಮಾಹಿತಿ ಇರುವ ಸ್ಥಳಗಳಿಗೆ ಭೇಟಿ ನೀಡಿ ತೆರಳುತ್ತಿದ್ದಾರೆ.
ಜಿಲ್ಲೆಗೆ ಆಗಮಿಸುವ ಅದೆಷ್ಟೋ ಪ್ರವಾಸಿಗರು ತಮಗಿದ್ದ ಸಮಯದಲ್ಲಿ ಸೀಮಿತ ಸ್ಥಳಗಳಿಗೆ ಭೇಟಿ ನೀಡಿ ಮರಳುತ್ತಿದ್ದಾರೆ. ಮತ್ತೆ ಈ ಜಿಲ್ಲೆಗೆ ಬರಬೇಕು ಎಂದರೂ ಬೇರೆ ಸ್ಥಳಗಳ ಬಗ್ಗೆ ಮಾಹಿತಿ ಸಿಗದ ಕಾರಣಕ್ಕೆ ಮತ್ತೆ ಜಿಲ್ಲೆಗೆ ಭೇಟಿ ಕೊಡುವವರ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಈ ಹಿಂದೆ ಇದ್ದ ಪ್ರವಾಸಿ ವೆಬ್ಸೈಟ್ ಅನ್ನು ಇನ್ನಷ್ಟು ಅಭಿವೃದ್ಧಿ ಮಾಡಿ ‘ಅನ್ಸೀನ್ ಉತ್ತರ ಕನ್ನಡ’ದ ಮೂಲಕ ಇನ್ನಷ್ಟು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಒದಗಿಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಸ್ಥಳೀಯರ ಸಹಕಾರದಿಂದ ಬೆಂಗಳೂರು ಮೂಲದ ಅಧ್ಯಯನ ತಂಡ ಕಾರ್ಯೋನ್ಮುಖವಾಗಿದ್ದು ಎಪ್ರಿಲ್ ಕೊನೆಯ ವಾರದಲ್ಲಿ ಈ ಯೋಜನೆ ಮುಕ್ತಾಯವಾಗುವ ಸಾಧ್ಯತೆ ಇದ್ದು, ಆ ಬಳಿಕ ‘ಅನ್ಸೀನ್ ಉತ್ತರ ಕನ್ನಡ’ ಶೀರ್ಷಿಕೆಯ ಕಾಫಿ ಟೇಬಲ್ ಬುಕ್ ಲೋಕಾರ್ಪಣೆ ಆಗಲಿದೆ. ಕಾಫಿ ಟೇಬಲ್ನಲ್ಲಿರುವ ಎಲ್ಲ ಮಾಹಿತಿ ಉತ್ತರ ಕನ್ನಡ ಪ್ರವಾಸೋದ್ಯಮದ ವೆಬ್ಸೈಟ್ನಲ್ಲಿಯೂ ಹಾಕಲಾಗುತ್ತಿದೆ.
ಜಿಲ್ಲೆಗೆ ಪ್ರತಿನಿತ್ಯ ಆಗಮಿಸುವ ಪ್ರವಾಸಿಗರಲ್ಲಿ, ಬೇರೆ ಬೇರೆ ವರ್ಗದ ಭಿನ್ನ ಆಲೋಚನೆ, ಅಭಿರುಚಿ ಹೊಂದಿರುವವರಾಗಿರುತ್ತಾರೆ. ಇವರಲ್ಲಿ ಕೆಲವರಿಗೆ ದೇವಸ್ಥಾನ ಇಷ್ಟ ಆದರೆ, ಇನ್ನೂ ಕೆಲವರಿಗೆ ಯಾರೂ ಕಾಣದ ಟ್ರೆಕ್ಕಿಂಗ್ ಸ್ಥಳಗಳಿಗೆ ಹೋಗುವ ಆಶಯ ಇರುತ್ತದೆ. ಇನ್ನಷ್ಟು ಜನರಿಗೆ ಬೇರೆ ಬೇರೆ ಕಡಲ ತೀರ ಹಾಗೂ ಅರಣ್ಯ ಪ್ರದೇಶದಲ್ಲಿ ಸುತ್ತಾಟ ಮಾಡುವ ಅಭಿರುಚಿ ಇರುತ್ತದೆ. ಹೀಗಾಗಿ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುವವರು ಈ ವೆಬ್ಪೊರ್ಟಲ್ನಲ್ಲಿ ದೇವಸ್ಥಾನಗಳ ಬಗ್ಗೆ ಮಾಹಿತಿ ಕೇಳಿದ್ದಲ್ಲಿ ಪ್ರವಾಸಿಗರು ಭೇಟಿ ಕೊಡಲು ಮುಂದಾಗಿರುವ ದೇವಸ್ಥಾನದ ಸುತ್ತಮುತ್ತಲಿನ ಆಕರ್ಷಕ ಹಾಗೂ ಐತಿಹಾಸಿಕ ದೇವಸ್ಥಾನಗಳ ಮಾರ್ಗಗಳ ನಕ್ಷೆ ಹಾಗೂ ಮಾಹಿತಿ ಈ ವೆಬ್ಸೈಟ್ನಲ್ಲಿ ಒದಗಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಪ್ರವಾಸಿ ತಾಣಗಳಿಗಿಂತ, ಬೆಳಕಿಗೆ ಬಾರದ ತಾಣಗಳೂ ಸಾಕಷ್ಟಿವೆ. ಗೋಕರ್ಣ, ಮುರ್ಡೇಶ್ವರ, ಕಾರವಾರ, ಮಲೆನಾಡು ಘಟ್ಟದ ಮೇಲ್ಭಾಗ ಸೇರಿದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಗೋಪ್ಯ ತಾಣಗಳು ಸಾಕಷ್ಟಿವೆ. ಈ ಪ್ರದೇಶಗಳು ಕೇವಲ ಸ್ಥಳೀಯರಿಗೆ ಮತ್ತು ವಿಶೇಷ ತಾಣಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಮಾತ್ರ ಗೊತ್ತಿದೆ. ಇಂತಹ ತಾಣಗಳ ಬಗ್ಗೆ ಎಲ್ಲರಿಗೂ ಪರಿಚಯಿಸುವ ಮೂಲಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ‘ಅನ್ಸೀನ್ ಉತ್ತರ ಕನ್ನಡ’ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಉತ್ತರ ಕನ್ನಡದಲ್ಲಿ ವಿಶೇಷವಾಗಿರುವ ಪ್ರವಾಸಿ ತಾಣಗಳನ್ನು ಹೊರತುಪಡಿಸಿ ಪ್ರವಾಸಿಗರನ್ನು ಸೆಳೆಯುವಂತಹ ಸಾಕಷ್ಟು ಸ್ಥಳಗಳು ಇವೆ. ಅವುಗಳನ್ನು ಗುರುತಿಸಿ, ಪ್ರವಾಸಿಗರಿಗೆ ಪರಿಚಯಿಸಲು ಜಿಲ್ಲಾಡಳಿತ ಮುಂದಾಗಿದೆ. ಮುಂದೆ ಈ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸಲಿವೆ.
-ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ