ಕೆಲಸದ ಅವಧಿ ಹೆಚ್ಚಿಸುವ ಮೂಲಕ ಉದ್ಯೋಗ ಕಸಿಯುವ ಹುನ್ನಾರ?

Update: 2024-07-23 10:22 GMT

ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ಮಸೂದೆಗೆ ಸಂಪುಟ ಸಭೆಯಲ್ಲಿ ಸಮ್ಮತಿಸಿದ ಬಳಿಕ ತಾತ್ಕಾಲಿಕ ತಡೆ ನೀಡಿ ಸರಕಾರ ವಿವಾದಕ್ಕೆ ಒಳಗಾಗಿರುವ ಹೊತ್ತಿನಲ್ಲಿಯೇ ಮತ್ತೊಂದು ಬೆಳವಣಿಗೆಯಾಗಿದೆ. ಈಗ ಐಟಿ ಕಂಪೆನಿಗಳು ಉದ್ಯೋಗ ಅವಧಿ ವಿಸ್ತರಣೆ ವಿಚಾರ ಎತ್ತಿರುವ ಪರಿಣಾಮ ಮತ್ತೊಂದು ವಿವಾದ ಶುರುವಾಗಿದೆ.

ಕರ್ನಾಟಕ ಸರಕಾರಕ್ಕೆ ಐಟಿ ಕಂಪೆನಿಗಳು ಪ್ರಸ್ತಾವವೊಂದನ್ನು ಸಲ್ಲಿಸಿವೆ. ಕೆಲಸದ ಅವಧಿಯನ್ನು ದಿನಕ್ಕೆ 14 ಗಂಟೆಗಳಿಗೆ ವಿಸ್ತರಣೆ ಮಾಡಲು ಅವಕಾಶ ನೀಡುವಂತೆ ಅದರಲ್ಲಿ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಈಗಾಗಲೇ ಕೆಲಸದ ಅವಧಿ ದಿನಕ್ಕೆ 12 ಗಂಟೆ ಇದೆ. ಈ ಅವಧಿಯನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂಬುದು ಐಟಿ ಕಂಪೆನಿಗಳ ಪ್ರಸ್ತಾವ.

14 ಗಂಟೆಯವರೆಗೆ ಕೆಲಸದ ಅವಧಿ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ-1961ಕ್ಕೆ ತಿದ್ದುಪಡಿ ತರಬೇಕು ಎಂದು ಸರಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವದಲ್ಲಿ ಐಟಿ ಕಂಪೆನಿಗಳು ಮನವಿ ಮಾಡಿರುವುದಾಗಿ ವರದಿಗಳು ಹೇಳುತ್ತಿವೆ.

ಐಟಿ ಕಂಪೆನಿಗಳ ಈ ಪ್ರಸ್ತಾವ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಸಲಿದೆ ಎಂಬ ಆತಂಕ ನೌಕರರ ವಲಯದಲ್ಲಿ ವ್ಯಕ್ತವಾಗಿದೆ.

ಓವರ್‌ಟೈಮ್ ಸೇರಿದಂತೆ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ಹೆಚ್ಚಿಸಲು ರಾಜ್ಯದ ಐಟಿ ಕಂಪೆನಿಗಳು ಸರಕಾರದ ಒಪ್ಪಿಗೆಗಾಗಿ ಕಾದಿವೆ.

ಈ ಪ್ರಸ್ತಾವಕ್ಕೆ ಕರ್ನಾಟಕ ರಾಜ್ಯ ಐಟಿ, ಐಟಿಇಎಸ್ ಉದ್ಯೋಗಿಗಳ ಒಕ್ಕೂಟದಿಂದ (ಕೆಐಟಿಯು) ತೀವ್ರ ವಿರೋಧ ವ್ಯಕ್ತವಾಗಿದೆ.

ಈಗ ಮೂರು ಶಿಫ್ಟ್‌ಗಳಲ್ಲಿ ಕೆಲಸ ನಡೆಯುತ್ತದೆ. ಆದರೆ ಕೆಲಸದ ಅವಧಿ ಹೆಚ್ಚಿಸುವ ಮೂಲಕ ಒಂದು ಶಿಫ್ಟ್ ಕಡಿಮೆ ಮಾಡಿದರೆ, ಆಗ ಗಮನಾರ್ಹ ಸಂಖ್ಯೆಯಲ್ಲಿ ಉದ್ಯೋಗಗಳ ಕಡಿತವಾಗಲಿದೆ ಎಂಬ ಆತಂಕ ಮೂಡಿದೆ. ರಾಜ್ಯ ಸರಕಾರ ಕೂಡ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಿರುವುದಾಗಿಯೂ ವರದಿಯಿದೆ.

ಪ್ರಸಕ್ತ, ಕಾರ್ಮಿಕ ಕಾನೂನು ಪ್ರಕಾರ ದಿನಕ್ಕೆ ಗರಿಷ್ಠ 12 ಗಂಟೆಗಳ ಕೆಲಸದ ಸಮಯಕ್ಕೆ ಅವಕಾಶವಿದೆ. 10 ಗಂಟೆಗಳ ಜೊತೆಗೆ 2 ಗಂಟೆಗಳ ಓವರ್‌ಟೈಮ್ ಸೇರಿ 12 ಗಂಟೆಗಳ ಕೆಲಸದ ಅವಧಿಯಿದೆ. ಆದರೆ ಈಗ ಐಟಿ ಕಂಪೆನಿಗಳ ಹೊಸ ಪ್ರಸ್ತಾವ, ಐಟಿ, ಐಟಿಇಎಸ್, ಬಿಪಿಒ ವಲಯದ ಉದ್ಯೋಗಿಗಳು ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಅವಕಾಶ ನೀಡಬೇಕು ಎಂಬುದು ಪ್ರಮುಖ ಅಂಶ.

ಈ ಪ್ರಸ್ತಾವಕ್ಕೆ ಕೆಐಟಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ತಿದ್ದುಪಡಿಯಿಂದಾಗಿ ಕಂಪೆನಿಗಳು ಪ್ರಸಕ್ತ ಮೂರು ಶಿಫ್ಟ್ ವ್ಯವಸ್ಥೆಯಿಂದ ಎರಡು ಶಿಫ್ಟ್ ವ್ಯವಸ್ಥೆಗೆ ಬದಲಾಗಲು ಅವಕಾಶವಾಗಲಿದೆ. ಇದರಿಂದ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎಂದು ಉದ್ಯೋಗಿಗಳ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಅಂದರೆ ಸುಮಾರು 20 ಲಕ್ಷ ನೌಕರರ ಭವಿಷ್ಯ ಅಪಾಯದಲ್ಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಕೆಸಿಸಿಐ ವರದಿಯ ಪ್ರಕಾರ ಐಟಿ ವಲಯದ ಶೇ.45ರಷ್ಟು ಉದ್ಯೋಗಿಗಳು ಒತ್ತಡದಂಥ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಶೇ.55ರಷ್ಟು ಮಂದಿ ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈಗೇನಾದರೂ ಕಾಯ್ದೆಗೆ ತಿದ್ದುಪಡಿ ತಂದರೆ ಉದ್ಯೋಗಿಗಳು ಮತ್ತಷ್ಟು ಆಘಾತ ಅನುಭವಿಸಬೇಕಾಗುತ್ತದೆ ಎಂದು ಕೆಐಟಿಯು ಹೇಳಿದೆ.

ಐಟಿ ಉದ್ಯೋಗಿಗಳನ್ನು ಸರಕಾರ ಯಂತ್ರದಂತೆ ನೋಡಬಾರದು. ಅವರು ಸಹ ಮನುಷ್ಯರು, 14 ಗಂಟೆಗಳ ಕೆಲಸದ ಅವಧಿಗೆ ಒಪ್ಪಿಗೆ ನೀಡುವುದು ಸರಿಯಲ್ಲ. ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡುವ ಮೊದಲು ಸಿದ್ದರಾಮಯ್ಯ ಸರಕಾರ ವಿವರವಾದ ಅಧ್ಯಯನ ನಡೆಸಬೇಕು ಎಂದು ಐಟಿ ಉದ್ಯೋಗಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಕರ್ನಾಟಕ ಸರಕಾರ 14 ಗಂಟೆ ಕೆಲಸದ ಅವಧಿ ವಿಸ್ತರಣೆಗೆ ಕಾನೂನು ಒಪ್ಪಿಗೆ ನೀಡುವ ಪ್ರಸ್ತಾವಕ್ಕೆ ಒಪ್ಪಿಲ್ಲ. ಆದರೆ ಐಟಿ ಕಂಪೆನಿಗಳ ಜೊತೆಗಿನ ಸಭೆಯ ಹೊತ್ತಿಗೆ ಸರಕಾರ ಮಣಿದುಬಿಡುವುದೇ?

ಈ ಪ್ರಶ್ನೆಯೂ ಉದ್ಯೋಗಿಗಳನ್ನು ಕಾಡುತ್ತಿದೆ.

ಈ ಹಿಂದೆ ಇನ್‌ಫೋಸಿಸ್‌ನ ನಾರಾಯಣಮೂರ್ತಿ ವಾರಕ್ಕೆ 70 ಗಂಟೆಗಳ ದುಡಿಮೆ ಅಗತ್ಯ ಎಂದು ಮಾತನಾಡಿದ್ದರು. ಬರೀ ಸ್ವಂತಕ್ಕಾಗಿ ಅಲ್ಲ, ದೇಶಕ್ಕಾಗಿ ದುಡಿಯಬೇಕು ಎಂದೆಲ್ಲ ಅವರು ಉಚಿತ ಉಪದೇಶ ಮಾಡಿದ್ದರು.

ಲಕ್ಷ ಲಕ್ಷ ರೂ. ಎಣಿಸುವ ಸಿಇಒಗಳನ್ನೂ ತಿಂಗಳಿಗೆ ಹದಿನೈದೋ ಇಪ್ಪತ್ತೋ ಸಾವಿರ ಸಂಬಳಕ್ಕಾಗಿ ಒದ್ದಾಡುವ, ಹೈರಾಣಾಗುವ ಇತರ ಐಟಿ ಉದ್ಯೋಗಿಗಳನ್ನೂ ಒಂದೇ ಎಂಬಂತೆ ನೋಡುತ್ತ ಅವರು ಮಾತಾಡಿದ ಹಾಗಿತ್ತು.

ಐಟಿ ಕಂಪೆನಿಗಳು ದೈತ್ಯ ರೂಪದಲ್ಲಿ ಬೆಳೆದು ಕೋಟಿಗಟ್ಟಲೆ ರೂ. ಲಾಭ ಬಾಚಿಕೊಳ್ಳಲು ಬಡಪಾಯಿಗಳೇ ದುಡಿಯಬೇಕು ಎಂಬ ಧೋರಣೆ ಅವರ ಮಾತಿನಲ್ಲಿ ಕಂಡಿತ್ತು. ಈಗ ಅದೇ ಐಟಿ ಉದ್ಯೋಗಿಗಳನ್ನು ದಿನಕ್ಕೆ 14 ಗಂಟೆಗಳ ವರೆಗೆ ದುಡಿಯಲು ಹಚ್ಚುವ ಪ್ರಯತ್ನಗಳು ನಡೆದಿವೆ.

ಈ ಪ್ರಸ್ತಾವಕ್ಕೆ ನ್ಯಾಷನಲ್ ಅಸೋಸಿಯೇಷನ್ ಫಾರ್ ಸಾಫ್ಟ್‌ವೇರ್ ಆ್ಯಂಡ್ ಸರ್ವಿಸಸ್ ಕಂಪೆನೀಸ್ ಅಂದರೆ ನಾಸ್ಕಾಂ ಕೂಡ ವಿರೋಧ ವ್ಯಕ್ತಪಡಿಸಿದೆ. ‘‘ನಾವು ದಿನಕ್ಕೆ 14 ಗಂಟೆಗಳ ಅಥವಾ ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಕೇಳಿಯೇ ಇಲ್ಲ. ಕರ್ನಾಟಕದ ಹೊಸ ಪ್ರಸ್ತಾವದ ವಿವರ ನಾವು ನೋಡಿಲ್ಲ. ಹಾಗಾಗಿ ಅದರ ಬಗ್ಗೆ ಕಮೆಂಟ್ ಮಾಡುವುದಿಲ್ಲ. ನಾವು ವಾರಕ್ಕೆ 48 ಗಂಟೆಗಳ ದುಡಿಮೆಯ ನೀತಿಯನ್ನೇ ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅದರಲ್ಲೇ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಪಾನ್ ಇಂಡಿಯಾ ಕಂಪೆನಿಗಳ ಕಾರ್ಯಾಚರಣೆ ಸುಲಲಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದೇವೆ. ಈ ಬಗ್ಗೆ ನಾವು ಕರ್ನಾಟಕದಲ್ಲಿ ಅಲ್ಲಿನ ಐಟಿ ಇಲಾಖೆ ಜೊತೆಗೂ ಮಾತಾಡಿದ್ದೇವೆ. ಆದರೆ ಅಲ್ಲಿನ ಕಾರ್ಮಿಕ ಇಲಾಖೆ ಜೊತೆ ಮಾತಾಡಿಲ್ಲ’’ ಎಂದು ನಾಸ್ಕಾಂನ ಉಪಾಧ್ಯಕ್ಷ ಆಶಿಶ್ ಅಗರ್ವಾಲ್ ಹೇಳಿದ್ದಾರೆ.

ಬಹುಶಃ ಈಗಾಗಲೇ ಐಟಿ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿರುವ ಹಾಗೆ, ಇಲ್ಲಿ ದಿನವೊಂದರಲ್ಲಿಯೇ ಅತಿ ಹೆಚ್ಚು ಸಮಯ ದುಡಿಸುವ ಈ ಪ್ರಸ್ತಾವದಲ್ಲಿ, ಒಂದು ಶಿಫ್ಟ್ ಅನ್ನೇ ಇಲ್ಲವಾಗಿಸುವ ಮೂಲಕ ಲಕ್ಷಗಟ್ಟಲೆ ಜನರ ಉದ್ಯೋಗ ಕಸಿಯುವ ಉದ್ದೇಶ ಐಟಿ ವಲಯದ್ದಾಗಿದೆಯೇ? ಒಂದು ವೇಳೆ ಹಾಗೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವಂತಾದರೆ ಏನು ಗತಿ? ರಾಜ್ಯ ಸರಕಾರ ಈ ವಿಷಯವನ್ನು ಹೇಗೆ ನಿಭಾಯಿಸಲಿದೆ? ಐಟಿ ವಲಯದ ಈ ಪ್ರಸ್ತಾವವನ್ನು ಬದಿಗೆ ಸರಿಸುವ ದಿಟ್ಟತನವನ್ನೂ, ಉದ್ಯೋಗಿಗಳ ಕ್ಷೇಮ ನೋಡಬೇಕಿರುವುದು ತನ್ನ ಹೊಣೆಗಾರಿಕೆ ಎಂದು ಭಾವಿಸುವ ಮಾನವೀಯತೆಯನ್ನೂ ಸರಕಾರ ತೋರಿಸುವುದೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News