ರತನ್ ಟಾಟಾ - ಬಂಡವಾಳಶಾಹಿಗಳ ರತ್ನ ಮತ್ತು ಸಮಾಜವಾದಿ ಆಶಯಗಳ ದುಸ್ವಪ್ನ?

Update: 2024-10-10 07:45 GMT

ರತನ್ ಟಾಟಾ (Photo: PTI)

ರತನ್ ಟಾಟಾ ಅವರು ಭಾರತದ ಅಂದಿನ ಬಿರ್ಲಾ ಹಾಗೂ ಇನ್ನಿತರ ದೊಡ್ಡ ವ್ಯಾಪಾರಿಗಳಂತೆ ಬ್ರಿಟಿಷ್ ವಸಹಾತುಶಾಹಿಗಳ ಆಶ್ರಯ ಹಾಗೂ ಸಹಕಾರಗಳಿಂದ ಬಂಡವಾಳ ಶಾಹಿ ಉದ್ಯಮಿಯಾಗಿ ಬೆಳೆದವರು.

ಸ್ವಾತಂತ್ರ್ಯ ನಂತರದಲ್ಲಿ ಮಿಶ್ರ ಆರ್ಥಿಕತೆಯ ಹೆಸರಿನಲ್ಲಿ ಪ್ರಭುತ್ವ ಬಂಡವಾಳ- ಅಂದರೆ ಜನರ ತೆರಿಗೆ, ಹೂಡಿಕೆ ಮತ್ತು ಉಳಿತಾಯಗಳಿಂದ ಸರ್ಕಾರ ಒದಗಿಸಿಕೊಟ್ಟ ಬಂಡವಾಳ- ಮತ್ತು ಮಾರುಕಟ್ಟೆಯನ್ನು ಆಧರಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡವರು. 1975 ರ ತುರ್ತು ಸ್ಥಿತಿಯನ್ನು ಭಾರತದ ಇತರ ದೊಡ್ಡ ಬಂಡವಾಳ ಶಾಹಿಗಳಂತೆ ಕಾರ್ಮಿಕರಲ್ಲಿ ಶಿಸ್ತು ತರಲು, ಮುಷ್ಕರಗಳನ್ನು ನಿಷೇಧಿಸಲು ಅತ್ಯಗತ್ಯ ಎಂದು ಸ್ವಾಗತಿಸಿದವರು.

ತುರ್ತು ಸ್ಥಿತಿಯ ಉತ್ತುಂಗದಲ್ಲಿ ಇಂದಿರಾ ಗಾಂಧಿಯವರು ಚಾಚೂ ತಪ್ಪದೆ ಅನುಸರಿಸಿದ ಕಾರ್ಮಿಕ ವಿರೋಧಿ, ಸಂವಿಧಾನದ ಸಮಾಜವಾದಿ ಆಶಯ ವಿರೋಧಿ ನೀತಿಗಳೆಲ್ಲ ಟಾಟಾ ಅವರು 1974 ರಲ್ಲಿ ಇಂದಿರಾ ಗಾಂಧೀಗೆ ನೀಡಿದ Tata Memorandum ನ ಸೂಚನೆಗಳೇ ಆಗಿದ್ದವು. 1980ರಲ್ಲಿ ಇಂದಿರಾ ಗಾಂಧಿ ಎರಡನೇ ಬಾರಿ ಪ್ರಧಾನಿಯಾದ ನಂತರ ಅನುಸರಿಸಿದ್ದು ಇದೆ ಬಂಡವಾಳಶಾಹಿ ಕ್ರೋನಿ ಕ್ಯಾಪಿಟಲಿಸ್ಟ್ ನೀತಿಗಳೇ.

1991 ರಲ್ಲಿ ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಂಡು ಕಾಂಗ್ರೆಸ್ - ಬಿಜೆಪಿಗಳು ಜಾರಿ ಮಾಡಿದ, ಕೇವಲ ಭಾರತದ ದೊಡ್ಡ ಬಂಡವಾಳ ಶಾಹಿಗಳಿಗೆ ಹೆಚ್ಚು ಲಾಭಧಾಯಕವಾದ Liberalisation- Privatisation- Globalisation ನೀತಿಗಳ ಹಿಂದೆ ಇದ್ದದ್ದು ಕೂಡ ಟಾಟಾ ನೇತೃತ್ವದ ದೊಡ್ಡ ಬಂಡವಾಳಶಾಹಿಗಳ Bombay Club.

2002 ರಲ್ಲಿ ಮೋದಿ ನೇತೃತ್ವದಲ್ಲಿ ಗುಜರಾತ್ ನರಮೇಧ ನಡೆದಾಗ ಪ್ರಾರಂಭದಲ್ಲಿ ಭಾರತದ ಬಹುಪಾಲು ದೊಡ್ಡ ಬಂಡವಾಳಿಗರು ಮೋದಿಯನ್ನು ತೀವ್ರವಾಗಿ ವಿಮರ್ಶಿಸಿ ಹೂಡಿಕೆ ಬಹಿಷ್ಕಾರ ಹಾಕಿದ್ದರು. ಆದರೆ 2008 ರಲ್ಲಿ ಗುಜರಾತ್ ನ ಮೋದಿ ಸರ್ಕಾರ ಯಾವ ರಾಜ್ಯಗಳು ಕೊಡದಷ್ಟು ಭೂಮಿ, ಬಡ್ಡಿ ರಹಿತ ಬೃಹತ್ ಸಾಲ, ಮತ್ತು ಲಾಭದ ಅವಕಾಶಗಳನ್ನು ಕೊಟ್ಟ ತಕ್ಷಣ ಹೂಡಿಕೆ ಬಹಿಷ್ಕಾರವನ್ನು ಮುರಿದು ನರಮೇಧದ ಗುಜರಾತಿನಲ್ಲಿ ನ್ಯಾನೋ (nano) ಕಾರು ಕಾರ್ಖಾನೇ ಹಾಕಿದ ಮೊದಲಿಗರು ರತನ್ ಟಾಟಾ.

ಅಷ್ಟು ಮಾತ್ರವಲ್ಲ.. ನರಮೇಧದ ಮೋದಿಯನ್ನು ಭಾರತದ ಅಭಿವೃದ್ಧಿ ಪುರುಷ ಎಂದು ಹಾಡಿ ಹೊಗಳಿ ಮೋದಿಯ ಮತ್ತು ನವ ಉದಾರವಾದಿ ಹಿಂದುತ್ವದ ದೆಹಲಿ ಪ್ರವೇಶ ಸುಗಮಗೊಳಿಸಿದವರಲ್ಲಿ ಆದಾನಿಯನ್ನು ಬಿಟ್ಟರೆ ಬಹು ದೊಡ್ಡ ಪಾತ್ರ ರತನ್ ಟಾಟಾ ಅವರಿಗಿದೆ.

ಅಲ್ಲದೆ ಹಿಂದುತ್ವವಾದಿಗಳು ಸಂವಿಧಾನ ವಿರೋಧಿಯಾಗಿ ಅಸ್ಸಾಮಿನಲ್ಲಿ ಜಾರಿ ಮಾಡುತ್ತಿರುವ NRC ಯೋಜನೆಗೂ ಟಾಟಾ ಅವರದ್ದೇ ತಾಂತ್ರಿಕ ಮತ್ತು ಡಿಜಿಟಲ್ ಬೆನ್ನೆಲುಬು.

ಮೊನ್ನೆಮೊನ್ನೆ Electoral Bond ಹಗರಣದಲ್ಲಿ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಕೊಟ್ಟು ಅತಿ ಹೆಚ್ಚು ಪ್ರತ್ಯುಪಕಾರವನ್ನು ಪಡೆದವರಲ್ಲಿ ಕೂಡ ಇತರ ದೊಡ್ಡ ಬಂಡವಾಳಿಗಾರೊಂದಿಗೆ ಟಾಟಾ ಉದ್ಯಮವೂ ಮುಂಚೂಣಿಯಲ್ಲಿದೆ.

ಇದಲ್ಲದೆ, ಇತರ ಕೆಲವು ಉದ್ಯಮಿಗಳಂತೆ ಅವರೂ ಶಿಕ್ಷಣ ಸಂಸ್ಥೆಗಳನ್ನೂ, ಸ್ಕಾಲರ್ ಶಿಪ್ ಗಳನ್ನೂ, CSR (Corporate Social Responsibility) ನ ಹೆಸರಲ್ಲಿ ಕೆಲವು ಜನೋಪಯೋಗಿ ಯೋಜನೆಗಳನ್ನು ಒದಗಿಸಿದ್ದಾರೆ.

ಆದರೆ, ಈ CSR ಗಳು ವಾಸ್ತವದಲ್ಲಿ ಬಂಡವಾಳಶಾಹಿ ಉದ್ಯಮಗಳು ತಮ್ಮ ಶೋಷಣೆಯ ಕ್ರೂರತೆಯನ್ನು ಮರೆಮಾಚುವ ವೆಲ್ವೆಟ್ ಹೊದಿಕೆಗಳು ಎಂಬುದು ಈಗ ಎಲ್ಲರೂ ಬಲ್ಲ ಸಂಗತಿ. ಇವಲ್ಲದೆ ಅವರು ಸಾಲು ಮರಗಳನ್ನು ಮತ್ತು ಕುಡಿಯುವ ನೀರಿನ ಅರವತ್ತಿಗೆಗಳನ್ನು ಕಟ್ಟಿಸಿದ್ದಾರೆ. ಅದೇ ಸಮಯದಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಲು ದೇಶದ ಕಾಡುಗಳನ್ನು ಕಡಿಯುತ್ತಿದ್ದಾರೆ. ಜೀವಜಾಲವನ್ನು ಬತ್ತಿಸಿದ್ದಾರೆ. ಸ್ವಾಭಿಮಾನಿ ರೈತಾಪಿ ಆದಿವಾಸಿಗಳ ಬದುಕನ್ನು ಸರ್ವ ನಾಶ ಮಾಡುತ್ತಿದ್ದಾರೆ. ಇದನ್ನು ಕೇವಲ ಟಾಟಾ ಮಾತ್ರ ಮಾಡುತ್ತಿರುವುದೆನಲ್ಲ. ಎಲ್ಲಾ ಲಾಭಕೋರ ಉದ್ಯಮಿಗಳಂತೆ ಅವರೂ ಮಾಡುತ್ತಿದ್ದಾರೆ.

ಆದರೆ ನಿನ್ನೆ ರತನ್ ಟಾಟಾ ಅವರ ನಿಧನದ ನಂತರ ಅವರು ಬಂಡವಾಳ ಶಾಹಿ ಉದ್ಯಮಿಯೇ ಅಲ್ಲಾ. ಜನೋದ್ಯಮಿ..ವಸಾಹಾತು ಶಾಹಿ ವಿರೋಧಿ ದೇಶಪ್ರೇಮಿ. ಕೋಮುವಾದ ವಿರೋಧಿ. ಎಂದೆಲ್ಲ ಇಲ್ಲಸಲ್ಲದ, ಕುರುಡು ಹೊಗಳಿಕೆಗಳು ಮಾಧ್ಯಮವನ್ನು ತುಂಬಿಕೊಳ್ಳುತ್ತಿವೆ.

ಸತ್ತವರ ಬಗ್ಗೆ ಸುಳ್ಳು ಹೇಳಬಾರದಲ್ಲವೇ...

ಅಲ್ಲದೆ ಸಾವಿನ ಸಂದರ್ಭವನ್ನು ಕೂಡ ಬಂಡವಾಳಶಾಹಿ ಭಾರತ ಮತ್ತು ಮಾಧ್ಯಮಗಳು ಬಂಡವಾಳಶಾಹಿ ಶೋಷಣೆಯನ್ನು ಮರೆಸಲು ಅಥವಾ ವೈಭವೀಕರಿಸಲು ಮತ್ತು ಬಲಿಯಾದ ಶೋಷಿತ ಭಾರತದ ನೆನಪುಗಳನ್ನು ಕಡೆಗಣಿಸಲು ಬಳಸಿಕೊಳ್ಳುತ್ತಿರುವಾಗ ಶೋಷಿತ ಭಾರತದ ಈ ಪುಟ್ಟ ಟಿಪ್ಪಣಿ ಬರೆಯ ಬೇಕೆನ್ನಿಸಿತು...

-ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಶಿವಸುಂದರ್

contributor

Similar News