ತನಿಖಾ ಸಂಸ್ಥೆಯ ಮುಖ್ಯಸ್ಥನೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ?

Update: 2023-07-12 18:45 GMT

ಯುಪಿಎ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ಹಮ್ಮಿಕೊಂಡ ಬೃಹತ್ ಆಂದೋಲನದ ‘ಸಮುದ್ರ ಮಥನ’ದ ಮೂಲಕ ಹುಟ್ಟಿದ್ದೇ ಮೋದಿ ನೇತೃತ್ವದ ಎನ್‌ಡಿಎ ಸರಕಾರ. ಸಮುದ್ರ ಮಥನದ ಸಂದರ್ಭದಲ್ಲಿ ಒಳಿತು ಕೆಡುಕುಗಳೆರಡೂ ಹುಟ್ಟಿದವು ಎಂದು ಪುರಾಣ ಕತೆಗಳು ಹೇಳುತ್ತವೆ. ಅಣ್ಣಾ ಹಝಾರೆ, ಕೇಜ್ರಿವಾಲ್ ಸಹಿತ ಹಲವು ಸಾಮಾಜಿಕ ಹೋರಾಟಗಾರರು, ಸಾಧು ಸಂತರು ಯುಪಿಎ ಸರಕಾರದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದರು. ಆದರೆ ಈ ಆಂದೋಲನವನ್ನು ಅಂತಿಮವಾಗಿ ಆರೆಸ್ಸೆಸ್ ಮೋಹಿನಿ ವೇಷದಲ್ಲಿ ಬಂದು ಹೈಜಾಕ್ ಮಾಡಿ, ಬಿಜೆಪಿಗೆ ಅಮೃತವನ್ನು ಉಣಿಸಿ, ದೇಶಕ್ಕೆ ವಿಷ ಉಣಿಸಿದ್ದು ಇತಿಹಾಸ. ಯುಪಿಎ ಸರಕಾರದ ಭ್ರಷ್ಟಾಚಾರವನ್ನು ತೋರಿಸಿ ಬಿಜೆಪಿ ಅಧಿಕಾರ ಹಿಡಿಯಿತು. ಈ ಸಂದರ್ಭದಲ್ಲಿ ಇಡೀ ದೇಶ ಬಿಜೆಪಿಯಿಂದ ಎರಡನ್ನು ನಿರೀಕ್ಷಿಸಿತ್ತು. ಒಂದು ಭ್ರಷ್ಟಾಚಾರ ರಹಿತ ಆಡಳಿತ. ಎರಡನೆಯದು, ಭ್ರಷ್ಟರ ವಿರುದ್ಧ ತನಿಖೆ ಮತ್ತು ಕಠಿಣ ಕ್ರಮ. ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಸರಕಾರದ ನೇತೃತ್ವದಲ್ಲಿ ನಡೆಯುವ ಯಾವುದೇ ಭ್ರಷ್ಟಾಚಾರವನ್ನು ಪ್ರಶ್ನಿಸುವುದೇ ದೇಶದ್ರೋಹವಾಗಿ ಬಿಟ್ಟಿತು. ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರಗಳನ್ನು ಟೀಕಿಸುವ ಸ್ವಾತಂತ್ರವಾದರೂ ಮಾಧ್ಯಮಗಳಿಗಿತ್ತು. ಆದರೆ ಇಂದು ಮೋದಿ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರಗಳನ್ನು ಪ್ರಶ್ನಿಸಿದವರು ಜೈಲು ಪಾಲಾಗುತ್ತಿದ್ದಾರೆ. ಬೊಫೋರ್ಸ್ ಹಗರಣದ ಬಗ್ಗೆ ಮೊನ್ನೆ ಮೊನ್ನೆಯವರೆಗೂ ಮಾತನಾಡುತ್ತಿದ್ದ ಬಿಜೆಪಿ ಇಂದು ರಫೇಲ್ ಹಗರಣದ ವಿರುದ್ಧ ಯಾರಾದರೂ ಮಾತೆತ್ತಿದರೆ ‘ದೇಶದ ಆಂತರಿಕ ಭದ್ರತೆಗೆ ಅಪಾಯ’ ಎಂದು ಬೆದರಿಸುತ್ತಿದೆ. ರಫೇಲ್ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುತ್ತದೆ ಎಂದು ಗೊತ್ತಾದಂತೆ ಸಿಬಿಐ ತನಿಖಾ ಸಂಸ್ಥೆಯ ಮುಖ್ಯಸ್ಥರನ್ನೇ ಬದಲಾಯಿಸಲು ಮುಂದಾಯಿತು. ರಫೇಲ್ ಹಗರಣ, ಅದಾನಿ ಹಗರಣ, ನೋಟು ನಿಷೇಧ ಹಗರಣ, ಜಿಎಸ್‌ಟಿ ಹಗರಣ....ಇವೆಲ್ಲದರಿಂದ ದೇಶದ ಆರ್ಥಿಕತೆ ಜರ್ಜರಿತಗೊಂಡಿದೆ. ಭ್ರಷ್ಟಾಚಾರಗಳನ್ನು ತನಿಖೆ ಮಾಡಬೇಕಾಗಿರುವ ಸಂಸ್ಥೆಗಳು ಕೈಕಾಲಿಗೆ ಕೋಳ ಬಿಗಿದುಕೊಂಡು ಸರಕಾರದ ಜೀತ ಮಾಡುತ್ತಿದೆ.

ದೇಶಾದ್ಯಂತ ಭ್ರಷ್ಟರ ವಿರುದ್ಧ ದಾಳಿ ನಡೆಸುತ್ತಿದ್ದೇನೆ ಎಂದು ಹೇಳುತ್ತಾ ಮೀಸೆ ತಿರುಗಿಸುತ್ತಿದ್ದ ಜಾರಿ ನಿರ್ದೇಶನಾಲಯ (ಈ.ಡಿ.)ದ ವಿರುದ್ಧ ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕೇಂದ್ರ ಸರಕಾರ ತೀವ್ರ ಮುಜುಗರವನ್ನು ಅನುಭವಿಸುವಂತಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕ ಅಭಿಶೇಕ್ ಬ್ಯಾನರ್ಜಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕರಾದ ಶರದ್ ಪವಾರ್, ಅಜಿತ್ ಪವಾರ್, ಅನಿಲ್ ದೇಶ್‌ಮುಖ್ ಮತ್ತು ನವಾಬ್ ಮಲಿಕ್, ನ್ಯಾಶನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ರಾಜಕೀಯ ನಾಯಕರ ವಿರುದ್ಧ ತನಿಖೆ ನಡೆಸಿದ ಹೆಗ್ಗಳಿಕೆಯನ್ನು ಜಾರಿ ನಿರ್ದೇಶನಾಲಯ ಹೊಂದಿದೆ. ಈ.ಡಿ. ಮೂಲಕ ಹಲವು ರಾಜಕೀಯ ವಿರೋಧಿಗಳನ್ನು ಕೇಂದ್ರ ಸರಕಾರ ಜೈಲಿಗೆ ತಳ್ಳಿದೆ. ಈ.ಡಿ. ಸಂಸ್ಥೆಯು ಕೇಂದ್ರ ಸರಕಾರದ ರಾಜಕೀಯ ನಾಯಕರೂ ಸೇರಿದಂತೆ ಎಲ್ಲ ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಂಡಿದ್ದಿದ್ದರೆ ಇಂದು ಜಾರಿ ನಿರ್ದೇಶನಾಲಯದ ದಾಳಿಗಳನ್ನು ನಾವು ಸಂಶಯಿಸಬೇಕಾಗಿರಲಿಲ್ಲ. ಯಾವಾಗ ಅದು ವಿರೋಧ ಪಕ್ಷಗಳ ನಾಯಕರನ್ನಷ್ಟೇ ಗುರಿ ಮಾಡಿಕೊಂಡು ದಾಳಿ ನಡೆಸಲಾರಂಭಿಸಿತೋ ಆಗ ಆ ದಾಳಿಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳತೊಡಗಿದವು. ಈಗ ನೋಡಿದರೆ ಜಾರಿ ನಿರ್ದೇಶನಾಲಯದ ಹಾಲಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ಅವಧಿ ವಿಸ್ತರಣೆ ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನು ಬಾಹಿರವಾಗಿ ಅಧಿಕಾರವನ್ನು ವಹಿಸಿಕೊಂಡಿದ್ದ ಮುಖ್ಯಸ್ಥನ ನೇತೃತ್ವದಲ್ಲಿ ಈ.ಡಿ. ಸಂಸ್ಥೆಯು ನಡೆಸಿದ ದಾಳಿಗಳನ್ನು ಕೂಡ ಕಾನೂನು ಬಾಹಿರ ಎಂದೇ ನಾವು ಭಾವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಂಜಯ್ ಕುಮಾರ್ ಮಿಶ್ರಾರನ್ನು 2018ರ ನವೆಂಬರ್ 19ರಂದು ಮೊದಲ ಬಾರಿಗೆ ಎರಡು ವರ್ಷಗಳ ಅವಧಿಗೆ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಿಸಲಾಗಿತ್ತು. 2020ರ ನ. 13ರಂದು ಕೇಂದ್ರ ಸರಕಾರ ಅವರ ನೇಮಕಾತಿ ಪತ್ರಕ್ಕೆ ತಿದ್ದುಪಡಿ ತಂದು ಸೇವಾವಧಿಯನ್ನು ಎರಡರ ಬದಲಿಗೆ ಮೂರು ವರ್ಷಕ್ಕೇರಿಸಿತು. ಅಂದರೆ ಒಂದು ವರ್ಷ ಹೆಚ್ಚುವರಿಯಾಗಿ ವಿಸ್ತರಿಸಿತು. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿ, ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದವು. 2021ರ ಸೆಪ್ಟಂಬರ್‌ನಲ್ಲಿ ಮಿಶ್ರಾರ ಅವಧಿಯನ್ನು ಇನ್ನು ವಿಸ್ತರಿಸದಂತೆ ಸುಪ್ರೀಂಕೋರ್ಟ್ ಸರಕಾರಕ್ಕೆ ಸೂಚನೆಯನ್ನು ನೀಡಿತ್ತು. ಆದರೂ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅವಧಿಗಳನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ನೀಡುವ ಎರಡು ಸುಗ್ರೀವಾಜ್ಞೆಗಳನ್ನು ಸರಕಾರವು ಜಾರಿಗೊಳಿಸಿತು. ಇದು ಮಿಶ್ರಾರ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಿಸಲು ಸರಕಾರಕ್ಕೆ ಅವಕಾಶ ನೀಡಿತು. ಸದ್ಯದ ತೀರ್ಪಿನಿಂದಾಗಿ, ಈ ವಿಸ್ತರಣೆ ಕಾನೂನು ಬಾಹಿರ ಎನ್ನುವುದು ಸರಕಾರಕ್ಕೆ ಸ್ಪಷ್ಟ ಪಡಿಸಿದಂತಾಗಿದೆ. ತನ್ನ ಮೂಗಿನ ನೇರಕ್ಕಿರುವ ಅಧಿಕಾರಿಗಳನ್ನೇ ಮುಖ್ಯಸ್ಥರನ್ನಾಗಿ ಮುಂದುವರಿಸುವುದು ಸರಕಾರಕ್ಕೆ ಯಾಕೆ ಅನಿವಾರ್ಯವಾಗಿತ್ತು ಎನ್ನುವುದು ಇದೀಗ ಚರ್ಚೆಯ ವಿಷಯವಾಗಿದೆ. ತನಗೆ ಬೇಕಾದ ಅಧಿಕಾರಿಗಳನ್ನೇ ಸಂಸ್ಥೆಯ ಮುಖ್ಯಸ್ಥರನ್ನಾಗಿ ಮಾಡುವ ಮೂಲಕ ಎರಡು ರೀತಿಯಲ್ಲಿ ತನಿಖಾ ಸಂಸ್ಥೆಯನ್ನು ಸರಕಾರ ದುರುಪಯೋಗ ಪಡಿಸಿಕೊಂಡಿದೆ. ಒಂದು, ತನ್ನ ಯಾವುದೇ ಭ್ರಷ್ಟಾಚಾರ ಹಗರಣಗಳನ್ನು ತನಿಖೆಯಾಗದಂತೆ ನೋಡಿಕೊಳ್ಳುವುದು. ಇನ್ನೊಂದು, ತನಿಖೆಯ ಹೆಸರಿನಲ್ಲಿ ತನ್ನ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡುವುದು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಎರಡು ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ. ಒಂದು, ಮಿಶ್ರಾರನ್ನು ಕಾನೂನು ಬಾಹಿರವಾಗಿ ಅಧಿಕಾರದಲ್ಲಿ ಮುಂದುವರಿಸಿದ ಸರಕಾರದ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು? ಎರಡನೆಯದು, ಕಾನೂನು ಬಾಹಿರವಾಗಿ ಅಧಿಕಾರವಹಿಸಿದ್ದ ಮುಖ್ಯಸ್ಥನ ನೇತೃತ್ವದಲ್ಲಿ ನಡೆದ ದಾಳಿಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News